ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಹುಬ್ಬಳ್ಳಿ ಮತ್ತು ಹೈದರಾಬಾದ್ ನಡುವೆ ಹೊಸ ರಾಜರಥ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್ ಗದಗ, ಕೊಪ್ಪಳ, ರಾಯಚೂರು ಮಾರ್ಗವಾಗಿ ಸಂಚರಿಸಲಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ನೀಡಲಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಹಾಗೂ ವಿಶೇಷ ರಿಯಾಯಿತಿಗಳು ಲಭ್ಯವಿವೆ.
ಹುಬ್ಬಳ್ಳಿ: ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮಹತ್ವದ ಹೆಜ್ಜೆ ಇಟ್ಟಿದ್ದು, ಹುಬ್ಬಳ್ಳಿ ಮತ್ತು ಹೈದರಾಬಾದ್ ನಡುವಿನ ನೂತನ ರಾಜರಥ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಪ್ರಯಾಣಿಕರ ಬೇಡಿಕೆಗೆ ಸ್ಪಂದನೆ
ವಾಣಿಜ್ಯ, ಉದ್ಯೋಗ, ವಿದ್ಯಾಭ್ಯಾಸ ಸೇರಿದಂತೆ ವಿವಿಧ ಅಗತ್ಯಗಳಿಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಅನೇಕರು ಹೈದರಾಬಾದ್ಗೆ ನಿಯಮಿತವಾಗಿ ಸಂಚರಿಸುತ್ತಿದ್ದಾರೆ. ಈ ಹಿನ್ನೆಲೆ, ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಬಸ್ ಗದಗ, ಕೊಪ್ಪಳ, ಗಂಗಾವತಿ, ರಾಯಚೂರು, ಝಡ್ ಚರ್ಲಾ ಹಾಗೂ ಮೆಹಬೂಬ್ ನಗರ ಮಾರ್ಗವಾಗಿ ಸಂಚರಿಸಲಿದೆ.
ವೇಳಾಪಟ್ಟಿ ವಿವರ ಹುಬ್ಬಳ್ಳಿ (ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣ): ಪ್ರತಿದಿನ ಸಂಜೆ 7:30ಕ್ಕೆ ಹೊರಟು, ಮರುದಿನ ಬೆಳಗ್ಗೆ 7:00ಕ್ಕೆ ಹೈದರಾಬಾದ್ ಮಹಾತ್ಮ ಗಾಂಧಿ ಬಸ್ ನಿಲ್ದಾಣ ತಲುಪುತ್ತದೆ. ಹೈದರಾಬಾದ್ (ಮಹಾತ್ಮ ಗಾಂಧಿ ಬಸ್ ನಿಲ್ದಾಣ): ರಾತ್ರಿ 9:15ಕ್ಕೆ ಹೊರಟು, ಮರುದಿನ ಬೆಳಗ್ಗೆ 8:15ಕ್ಕೆ ಹುಬ್ಬಳ್ಳಿ ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣ ತಲುಪುತ್ತದೆ. ಪ್ರಯಾಣ ದರ ಮತ್ತು ಸೌಲಭ್ಯಗಳು, ಈ ರಾಜರಥ ಎಸಿ ಸ್ಲೀಪರ್ ಬಸ್ನ ಒಟ್ಟು ಪ್ರಯಾಣ ದರ ₹1602 ಆಗಿದ್ದು, ಇದರಲ್ಲಿ ಅಪಘಾತ ಪರಿಹಾರ ವಿಮೆ, ಟೋಲ್ ಶುಲ್ಕ ಸೇರಿದಂತೆ ಎಲ್ಲಾ ಸೌಲಭ್ಯಗಳು ಒಳಗೊಂಡಿವೆ.
ಟಿಕೆಟ್ ಬುಕ್ಕಿಂಗ್ ಸೌಲಭ್ಯ
ಪ್ರಯಾಣಿಕರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಲು ಕೆಳಗಿನ ಮಾರ್ಗಗಳನ್ನು ಅನುಸರಿಸಬಹುದು
ಅಧಿಕೃತ ವೆಬ್ಸೈಟ್: www.ksrtc.in KSRTC ಮೊಬೈಲ್ ಆಪ್ ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣ ಹೊಸೂರು ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳು ವಿಶೇಷ ರಿಯಾಯಿತಿಗಳು ಒಂದೇ ಟಿಕೆಟ್ನಲ್ಲಿ 4 ಅಥವಾ ಹೆಚ್ಚಿನ ಆಸನಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ 5% ರಿಯಾಯಿತಿ ಲಭ್ಯ. ಹೋಗುವ ಮತ್ತು ಬರುವ ಪ್ರಯಾಣವನ್ನು ಒಂದೇ ಟಿಕೆಟ್ನಲ್ಲಿ ಬುಕ್ ಮಾಡಿದರೆ, ಹಿಂದಿರುಗುವ ಪ್ರಯಾಣದ ದರದಲ್ಲಿ 10% ರಿಯಾಯಿತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಗಳನ್ನ ಸಂಪರ್ಕಿಸಬಹುದು: 7760991682 / 7760991674
ಹುಬ್ಬಳ್ಳಿ–ಹೈದರಾಬಾದ್ ನಡುವೆ ಆರಂಭವಾದ ಈ ರಾಜರಥ ಎಸಿ ಸ್ಲೀಪರ್ ಬಸ್ ಸೇವೆ, ಉತ್ತರ ಕರ್ನಾಟಕ ಮತ್ತು ತೆಲಂಗಾಣ ನಡುವಿನ ಪ್ರಯಾಣವನ್ನು ಇನ್ನಷ್ಟು ಸುಗಮ ಮತ್ತು ಆರಾಮದಾಯಕವಾಗಿಸುವ ನಿರೀಕ್ಷೆಯಿದೆ. ಪ್ರಯಾಣಿಕರು ಈ ಹೊಸ ಸೇವೆಯನ್ನು ಬಳಸಿಕೊಂಡು ಅನುಕೂಲ ಪಡೆದುಕೊಳ್ಳಬಹುದು.


