'ಮಂಗಳೂರು ಗಲಭೆಗೆ SDPI-PFI ಸಂಚು - ಎಲ್ಲಾ ಕಾರ್ಯಕರ್ತರ ಅರೆಸ್ಟ್ ಆಗಲಿ'
ಮಂಗಳೂರು ಗಲಭೆಗೆ ಪ್ರತಿಕಾರವಾಗಿ ಮತ್ತೊಂದು ಗಲಭೆ ಉಂಟುಮಾಡಲು ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದೆ. ವ್ಯವಸ್ಥಿತ ಸಂಚು ರೂಪಿಸಿ ಕೃತ್ಯ ಎಸಗಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳೂರು (ಜ.21): ಮಂಗಳೂರಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಪೊಲೀಸರ ಕೊಲೆ ಯತ್ನ ನಡೆದಿದ್ದು ಇದರ ಹಿಂದೆ ಪಿಎಫ್ಐ ಹಾಗೂ ಎಸ್ಡಿಪಿಐ ಕೈವಾಡ ಇರುವುದಾಗಿ ಗಂಭೀರ ಆರೋಪ ಮಾಡಲಾಗಿದೆ.
Suvarnanews.com ಜೊತೆ ಇಂದು ಮಂಗಳೂರಿನಲ್ಲಿ ಮಾತನಾಡಿದ ವಿಶ್ವ ಹಿಂದೂಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಗಂಭೀರ ಆರೋಪ ಮಾಡಿದ್ದಾರೆ.
ಪೊಲೀಸರ ಕೊಲ್ಲಲು ಮಂಗಳೂರಿನಲ್ಲಿ ಹುಟ್ಟಿಕೊಂಡಿದೆ ಮಾಯಾ ಗ್ಯಾಂಗ್; ಗೋಲಿಬಾರ್ಗೆ ಪ್ರತೀಕಾರ! .
ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರತೀಕಾರಕ್ಕೆ ಪೊಲೀಸರ ಕೊಲೆಗೆ ಯತ್ನಿಸಿದವರು ಎಸ್ ಡಿಪಿಐ ಮತ್ತು ಪಿಎಫ್ ಐ ಕಾರ್ಯಕರ್ತರು. ವ್ಯವಸ್ಥಿತ ಸಂಚು ರೂಪಿಸಿ ಗೋಲಿಬಾರ್ ಗೆ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸಲಾಗಿದೆ. ಬಂಧಿತ ಎಲ್ಲಾ ಆರೋಪಿಗ ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗೆ ಸೇರಿದವರು ಎಂದು ಶರಣ್ ಆರೋಪಿಸಿದ್ದಾರೆ.
ಕುದ್ರೋಳಿಯ ನಾಲ್ವರು, ಬಜಪೆ ಮತ್ತು ಬಂಟ್ವಾಳದ ಇಬ್ಬರ ಬಂಧನವಾಗಿದೆ. ಕುದ್ರೋಳಿ, ಬಜಪೆ ಮತ್ತು ಬಂಟ್ವಾಳ ಪಿಎಫ್ ಐ, ಎಸ್ ಡಿಪಿಐ ಕೇಂದ್ರಗಳಾಗಿವೆ. ಬಂಟ್ವಾಳ ಅವರ ಮೂಲ ಕೇಂದ್ರವಾದ ಕಾರಣ ಇದು ಯೋಜಿತ ಸಂಚಾಗಿದೆ. ಇದಕ್ಕೆ ಸಣ್ಣ ಸಣ್ಣ ಯುವಕರನ್ನ ಪಿಎಫ್ ಐ ಬಳಸಿಕೊಂಡಿದೆ. ಈ ಯುವಕರಿಗೆ ಅಮಲು ಬರುವ ನೈಟ್ ರೇವಟ್ ಮಾತ್ರೆ ಕೊಡಲಾಗಿದೆ. ಮಾಯಾ ಗ್ಯಾಂಗ್ ಹೆಸರಲ್ಲಿ ಪಿಎಫ್ ಎ ಮತ್ತು ಎಸ್ ಡಿಪಿಐ ಈ ಕೃತ್ಯ ಎಸಗಿದೆ ಎಂದಿದ್ದಾರೆ.
ಪೊಲೀಸರನ್ನ ಕೊಲ್ಲಲು ವ್ಯವಸ್ಥಿತ ಪ್ಲಾನ್ ಮಾಡಲಾಗಿದೆ. ಹೀಗಾಗಿ ಪೊಲೀಸರು ಇದರ ಆಳಕ್ಕೆ ಇಳಿದು ತನಿಖೆ ಮಾಡುವ ಅಗತ್ಯವಿದೆ. ಇದಕ್ಕೆ ಹಣಕಾಸು ನೆರವು, ಆಶ್ರಯ ಕೊಟ್ಟವರ ಬಂಧನವಾಗಲಿ. ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಡಿಪಿಐ ಮತ್ತು ಪಿಎಫ್ ಐ ಮುಖಂಡರ ಕೈವಾಡ ನೂರಕ್ಕೆ ನೂರರಷ್ಟಿದೆ. ಅವರ ಸೂಚನೆ ಇಲ್ಲದೇ ಈ ಕೃತ್ಯ ಎಸಗಲು ಸಾಧ್ಯವೇ ಇಲ್ಲ. ತಕ್ಷಣ ಜಿಲ್ಲೆಯ ಎಲ್ಲಾ ಎಸ್ ಡಿಪಿಐ ಮತ್ತು ಪಿಎಫ್ ಐ ಮುಖಂಡರ ಬಂಧನವಾಗಲಿ ಎಂದು ಶರಣ್ ಆಗ್ರಹಿಸಿದ್ದಾರೆ.