ಕೇಂದ್ರ ಸರ್ಕಾರದ ಜಿಎಸ್‌ಟಿ ಚಾಲನೆಯಿಂದಾಗಿ ವಾಣಿಜ್ಯ ಪದವಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿ ಉದ್ಯೋಗವಕಾಶಗಳು ಸೃಷ್ಟಿಯಾಗಿದೆ. ವಾಣಿಜ್ಯ ವಿದ್ಯಾರ್ಥಿಗಳಾದ ನೀವು ಕೌಶಲ್ಯಗಳನ್ನು ಬೆಳೆಸಿಕೊಂಡು ವ್ಯಾಸಂಗದ ಕಡೆ ಹೆಚ್ಚು ಗಮನಹರಿಸಬೇಕೆಂದು ಇನ್‌ಸ್ಟಿಟ್ಯೂಟ್‌ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಕೆರಿಯರ್ ಕೌನ್ಸಿಲಿಂಗ್ ಕಮಿಟಿಯ ಲೆಕ್ಕಪರಿಶೋಧಕ ಆನಂದಕೃಷ್ಣ ತಿಳಿಸಿದರು.

 ತಿಪಟೂರು : ಕೇಂದ್ರ ಸರ್ಕಾರದ ಜಿಎಸ್‌ಟಿ ಚಾಲನೆಯಿಂದಾಗಿ ವಾಣಿಜ್ಯ ಪದವಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿ ಉದ್ಯೋಗವಕಾಶಗಳು ಸೃಷ್ಟಿಯಾಗಿದೆ. ವಾಣಿಜ್ಯ ವಿದ್ಯಾರ್ಥಿಗಳಾದ ನೀವು ಕೌಶಲ್ಯಗಳನ್ನು ಬೆಳೆಸಿಕೊಂಡು ವ್ಯಾಸಂಗದ ಕಡೆ ಹೆಚ್ಚು ಗಮನಹರಿಸಬೇಕೆಂದು ಇನ್‌ಸ್ಟಿಟ್ಯೂಟ್‌ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಕೆರಿಯರ್ ಕೌನ್ಸಿಲಿಂಗ್ ಕಮಿಟಿಯ ಲೆಕ್ಕಪರಿಶೋಧಕ ಆನಂದಕೃಷ್ಣ ತಿಳಿಸಿದರು.

Add Asianetnews Kannada as a Preferred SourcegooglePreferred

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ವತಿಯಿಂದ ತೃತೀಯ ಬಿಕಾಂ ವಿದ್ಯಾರ್ಥಿಗಳಿಗಾಗಿ ಐಸಿಎಐ ಇನ್‌ಸ್ಟಿಟ್ಯೂಟ್‌ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ವತಿಯಿಂದ ಚಾರ್ಟರ್ಡ್ ಅಕೌಂಟೆನ್ಸಿ ಕೆರಿಯರ್ ಕೌನ್ಸಿಲಿಂಗ್ ಪ್ರೊಫೆಷನಲ್ ಜಾಬ್ ಆಪರ್ಚುನಿಟಿ ಎಂಬ ವಿಷಯದ ಬಗ್ಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪದವಿ ಮುಗಿದ ನಂತರ ಉನ್ನತ ವ್ಯಾಸಂಗದ ಜೊತೆಗೆ ಪ್ರೊಫೆಷನಲ್ ಕೋರ್ಸ್‌ಗಳಾದ ಚಾರ್ಟರ್ಡ್ ಅಕೌಂಟೆಂಟ್ ಕಂಪನಿ ಸೆಕ್ರೆಟರಿ ಇನ್ನಿತರೆ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಬೇಕು. ಎಂಜಿನಿಯರಿಂಗ್ ಕೋರ್ಸ್‌ಗಳಂತೆ ಇಲ್ಲಿಯೂ ಕೂಡ ಒಬ್ಬ ವ್ಯಕ್ತಿ ಚಾರ್ಟೆಟ್ ಅಕೌಂಟೆಂಟ್ ಆದರೆ ಹೆಚ್ಚು ಹಣ ಸಂಪಾದನೆ ಮಾಡಬಹುದು. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಸಾಗಬೇಕು ಎಂದರು.

ಲೆಕ್ಕಪರಿಶೋಧಕಿ ಆರ್. ಮಂಜುಳಾ ಜಾಲಿ ಮಾತನಾಡಿ, ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆ ಬಿಟ್ಟು ಜ್ಞಾನದ ಕಡೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಜೀವನದಲ್ಲಿ ಗುರಿ ಇಟ್ಟುಕೊಂಡರೆ ಮಾತ್ರ ಸಾಧನೆ ಮಾಡಬಹುದು. ವಾಣಿಜ್ಯ ಕ್ಷೇತ್ರದಲ್ಲಿ ಉದ್ಯೋಗವಕಾಶಗಳಿಗೆ ಸಾಕಷ್ಟು ಅವಕಾಶಗಳಿವೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳುವ ಜವಾಬ್ದಾರಿ ನಿಮ್ಮಲ್ಲಿದೆ. ಆದ್ದರಿಂದ ಕಷ್ಟಪಟ್ಟು ಓದಿ ಉದ್ಯೋಗವಂತರಾಗಿ ತಂದೆ ತಾಯಿಗಳಿಗೆ, ಕಾಲೇಜಿಗೆ ಕೀರ್ತೀ ತರಬೇಕೆಂದು ಚಾರ್ಟೆಡ್ ಅಕೌಂಟೆನ್ಸಿ ಕೋರ್ಸ್‌ಗಳಲ್ಲಿ ದಾಖಲಾತಿ ಹೊಂದಲು ಇರುವಂತಹ ಕ್ರಮಗಳು, ಶುಲ್ಕದ ವಿವರ ಇನ್ನಿತರೆ ಕೋರ್ಸ್‌ಗಳ ಬಗ್ಗೆ ತಿಳಿಸಿಕೊಟ್ಟರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಎಚ್.ಬಿ. ಕುಮಾರಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ದೃಷ್ಟಿಯಿಂದ ಹಾಗೂ ಉದ್ಯೋಗದ ಬಗ್ಗೆ ಮಾಹಿತಿ ಸಿಗಲೆಂಬ ಕಾರಣದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ಎಂ.ಎಲ್. ರಮೇಶ್ ಸೇರಿದಂತೆ ಎಲ್ಲಾ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.