ಮಂತ್ರಾಲಯ: ನವವೃಂದಾನ ಗಡ್ಡೆಯಲ್ಲಿ ಶ್ರೀ ಜಯತೀರ್ಥರ ಪೂಜೆಗೆ ಹೈಕೋರ್ಟ್ ಸಮ್ಮತಿ
ಉಭಯ ಪಕ್ಷಗಳ ವಾದೋಪವಾದ ಆಲಿಸಿ ಮಂತ್ರಾಲಯ ಶ್ರೀಮಠದ ಅರ್ಜಿಯನ್ನು ಪುರಸ್ಕರಿಸಿ ಈ ಹಿಂದೆ ಏಕ ಸದಸ್ಯ ಪೀಠವು ನೀಡಿದ ಆದೇಶವನ್ನು ತಳ್ಳಿ ಹಾಕಿದ ಹೈಕೋರ್ಟ್ ಧಾರವಾಡ ಪೀಠ. ಇದು ಸತ್ಯಕ್ಕೆ ಸಂದ ಜಯವಾಗಿದೆ.

ರಾಯಚೂರು(ಸೆ.23): ಕರ್ನಾಟಕದ ಉಚ್ಚನ್ಯಾಯಾಲಯದ ಏಕ ಸದಸ್ಯ ಪೀಠವು 11/9/2023 ರಂದು ಉತ್ತರಾದಿ ಮಠದವರು ಸಲ್ಲಿಸಿದ ಅರ್ಜಿ ಪುರಸ್ಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದವರಿಗೆ ನವೃಂದಾವನದ ನಡುಗಡ್ಡೆಯಲ್ಲಿ ಶ್ರೀ ಜಯತೀರ್ಥರ ಮೂಲ ಬೃಂದಾವನದ ಸನ್ನಿಧಾನದಲ್ಲಿ ಪೂಜೆ ಅಷ್ಟೋತ್ತರ ಇತ್ಯಾದಿಗಳನ್ನು ಆಚರಿಸದಂತೆ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದವರು ಕರ್ನಾಟಕದ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠದ ಮುಂದೆ ಅರ್ಜಿ ಸಲ್ಲಿಸಿ ಹಿಂದೆ ನೀಡಿದ ಆದೇಶಕ್ಕೆ ತಡೆಯಾಜ್ಞೆ ಕೋರಿದ್ದರು.
ಇಂದು(ಶನಿವಾರ) ಕರ್ನಾಟಕದ ಉಚ್ಚನ್ಯಾಯಾಲಯದ ಧಾರವಾಡ ಪೀಠದ ನ್ಯಾಯಾಧೀಶ ಜಸ್ಟಿಸ್ ಕೃಷ್ಣಕುಮಾರ್ ಹಾಗೂ ಜಸ್ಟಿಸ್ ಬಸವರಾಜ್ ಅವರ ಸಮ್ಮುಖದಲ್ಲಿ ವಿಚಾರಣೆ ನಡೆದು, ಉಭಯ ಪಕ್ಷಗಳ ವಾದೋಪವಾದ ಆಲಿಸಿ ಮಂತ್ರಾಲಯ ಶ್ರೀಮಠದ ಅರ್ಜಿಯನ್ನು ಪುರಸ್ಕರಿಸಿ ಈ ಹಿಂದೆ ಏಕ ಸದಸ್ಯ ಪೀಠವು ನೀಡಿದ ಆದೇಶವನ್ನು ತಳ್ಳಿ ಹಾಕಿತು. ಇದು ಸತ್ಯಕ್ಕೆ ಸಂದ ಜಯವಾಗಿದೆ.
ಮಂತ್ರಾಲಯದಲ್ಲಿ ರಾಯರ ಆಶೀರ್ವಾದ ಪಡೆದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪೋಷಕರು, ಸಾಥ್ ನೀಡಿದ ಸುಧಾಮೂರ್ತಿ!
ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಿಂದ ನವವೃಂದಾವನ ನಡುಗಡ್ಡೆಯಲ್ಲಿರುವ ಶ್ರೀ ಜಯತೀರ್ಥರ ಮೂಲಬೃಂದಾವನ ಸನ್ನಿಧಾನದಲ್ಲಿ ದೈನಂದಿನ ಪೂಜಾ ಹಾಗೂ ಅಷ್ಟೋತ್ತರ ಇತ್ಯಾದಿ ಕಾರ್ಯಕ್ರಮಗಳಿಗೆ ಯಾವುದೇ ವಿಧವಾದ ಅಡ್ಡಿಯಿಲ್ಲ ಎಂಬುದನ್ನು ಭಕ್ತರು ಗಮನಿಸಬೇಕು ಎಂದು ಶ್ರೀಮಠದ ಶಿಷ್ಯ ಸಂಪರ್ಕಾಧಿಕಾರಿ ವಾದಿರಾಜಾಚಾರ್ಯ ತಿಳಿಸಿದ್ದಾರೆ.