ಬೆಳಿಗ್ಗೆಯಿಂದಲೇ ದಟ್ಟಮೋಡ ಕವಿದ ವಾತಾವರಣ, ಕೆಲ ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆ, ಧರೆಗುರುಳಿದ ಮರಗಿಡಗಳು, ಅದರಡಿ ಸಿಲುಕಿ ಹಾನಿಗೀಡಾದ ವಾಹನ, ರಸ್ತೆ ಸಂಪರ್ಕ ಕಡಿತ, ಜನಜೀವನ ಅಸ್ತವ್ಯಸ್ತವಾಗಿದೆ.

ಬೀದರ್‌ (ಮಾ.18): ಬೆಳಿಗ್ಗೆಯಿಂದಲೇ ದಟ್ಟಮೋಡ ಕವಿದ ವಾತಾವರಣ, ಕೆಲ ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆ, ಧರೆಗುರುಳಿದ ಮರಗಿಡಗಳು, ಅದರಡಿ ಸಿಲುಕಿ ಹಾನಿಗೀಡಾದ ವಾಹನ, ರಸ್ತೆ ಸಂಪರ್ಕ ಕಡಿತ, ಜನಜೀವನ ಅಸ್ತವ್ಯಸ್ತವಾಗಿರುವುದು ಒಂದೆಡೆಯಾದರೆ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಆಲಿಕಲ್ಲು ಮಳೆ ಬೆಳೆಗಳಿಗೆ ಭಾರೀ ಹಾನಿಯುಂಟು ಮಾಡಿದ್ದು, ರೈತರು ತತ್ತರಿಸುವಂತೆ ಮಾಡಿದೆ ಈ ಅಕಾಲಿಕ ಮಳೆ. ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಭಾರಿ ಹಾನಿ ಅನುಭವಿಸುವಂತಾಗಿದ್ದು, ಭಾಲ್ಕಿಯ ಕೂಡಲಿಯಲ್ಲಿನ ಕೋಳಿ ಫಾರ್ಮ್‌ನಲ್ಲಿದ್ದ ಸಾವಿರಾರು ಕೋಳಿಗಳು ಬಲಿಯಾಗಿವೆ. 

ಕೋಳಿಫಾರ್ಮ್‌ನಲ್ಲಿದ್ದ ಕೋಳಿಗಳು ಗಾಳಿಯಲ್ಲಿ ಹಾರಿಹೋದ ಘಟನೆ ನಡೆದಿದ್ದು, ಕೋಳಿ ಫಾಮ್‌ರ್‍ ಶೆಡ್‌ನ ತಗಡುಗಳು ಮುಗಿಲೆತ್ತರಕ್ಕೆ ಹಾರಿ ಹೋಗಿವೆ. ಶುಕ್ರವಾರ ಹಾಗೂ ಶನಿವಾರ ಸುರಿದ ಭಾರೀ ಮಳೆಯಿಂದಾಗಿ ಜೋಳ ಮತ್ತು ಮಾವು ಬೆಳದ ರೈತರ ಕಣ್ಣೀರು ಹಾಕುವಂತಾಗಿದೆ. ಭಾಲ್ಕಿ, ಬೀದರ್‌ ತಾಲೂಕಿನ ಹಲವಾರು ಕಡೆಗಳು ಮಾವು ಹಾಗೂ ಜೋಳದ ಬೆಳೆಗಳು ಸಂಪೂರ್ಣ ನಾಶವಾದಂತಾಗದೆ.

ತಾಯಿ ಸ್ಥಾನದಲ್ಲಿ ನಿಂತು ಕೆಲಸ ಮಾಡುವ ಡಬಲ್‌ ಎಂಜಿನ್‌ ಸರ್ಕಾರ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕಮಲನಗರ ಸೋನಾಳ ಗ್ರಾಮದ ವ್ಯಕ್ತಿ ಸಿಡಿಲಿಗೆ ಬಲಿ: ಶುಕ್ರವಾರ ಭಾಲ್ಕಿ ತಾಲೂಕಿನ ಕೂಡ್ಲಿ, ನಿಟ್ಟೂರು, ಬೀರಿ (ಬಿ) ಭಾಗದಲ್ಲಿ ಭಾರಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದರೆ ಕಮಲನಗರ ತಾಲೂಕಿನ ಸೋನಾಳ ಗ್ರಾಮದ ರೈತ ಮಾಧವರಾವ್‌ ಬೀರ್ಗೆ (37) ಸಿಡಿಲಿಗೆ ಬಲಿಯಾಗಿದ್ದಾರೆ.

ಧರೆಗುರುಳಿದ ಮರ ಗಿಡಗಳು, ವಿದ್ಯುತ್‌ ಕಂಬಗಳು: ಬಿರುಗಾಳಿ ಸಮೇತ ಭಾರಿ ಆಲಿಕಲ್ಲು ಮಳೆಯಿಂದಾಗಿ ಬೀದರ್‌ನ ಆಟೋನಗರ ಪ್ರದೇಶದಲ್ಲಿ ನೆಲಕ್ಕೆ ಬಿದ್ದ ಮರಗಿಡಗಲು, ವಿದ್ಯುತ್‌ ಕಂಬಗಳು ರಸ್ತೆಗಳ ಮೇಲೆ ಉರುಳಿ ಬಿದ್ದಿದ್ದು ವಾಹನ ಸವಾರರು ಪರದಾಡುವಂತಾಗಿದ್ದು ವಾಹನದ ಮೇಲೆ ಮರಬಿದ್ದಿದ್ದು ಹಾನಿಗೀಡಾಗಿದೆ. ಬೀದರ್‌ ನಗರದಲ್ಲಿ ಬಿದ್ದ ಅಕಾಲಿಕ ಆಲಿಕಲ್ಲಿನ ಮಳೆಗೆ ರಸ್ತೆ, ಹೊಲಗಳು ಮಂಜು ಬಿದ್ದಾಗ ಸಂಪೂರ್ಣವಾಗಿ ಬಿಳಿ ಬಣ್ಣಕ್ಕೆ ತಿರುಗಿ ಜಮ್ಮು ಕಾಶ್ಮಿರದ ವಾತಾವರಣದಂತೆ ಕಂಡುಬಂತು. 

ಕಳೆದ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಲೆ ಇದೆ. ಶುಕ್ರವಾರ ಸಂಜೆ ಸುರಿದ ಮಳೆಗೆ ನಗರದ ಮುಖ್ಯರಸ್ತೆಗಳು ಕೊಳಚೆ ನೀರಿನಿಂದ ತುಂಬಿದ್ದವು. ಚರಂಡಿಗಳು ಸಮಯಕ್ಕೆ ಸ್ವಚ್ಛಗೊಳಿಸಿದರೆ ಇಂತಹ ಸಮಸ್ಯೆ ಆಗಲ್ಲ ಆದರೆ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುವುದಿಲ್ಲ. ಹವಮಾನ ಇಲಾಖೆ ಕೂಡ ಗುಡುಗು ಸಹಿತ ಮಳೆಯಾಗುವ ಸಂಭವ ಇದೆ ಎಂದು ತಿಳಿಸಿದೆ. ಹೀಗಾಗಿ ಜಿಲ್ಲೆಯ ವಿವಿಧೆಡೆ ಬೆಳಿಗ್ಗೆ ಬಿಸಿಲು ಇದ್ದರೂ ಕೂಡ ಮಧ್ಯಾಹ್ನದ ನಂತರ ಮಳೆಯಾಗುತ್ತಲೇ ಇದೆ.

ಮೋಡ ಕವಿದ ವಾತಾವರಣ: ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಮಳೆ ಆರಂಭವಾಗಿದ್ದು ಚರಂಡಿ, ರಸ್ತೆಗಳು ನೀರಿನಿಂದ ಆವೃತವಾಗಿ ಜನರ ಸಂಚಾರಕ್ಕೆ ಅಡ್ಡಿಯಾಗಿದೆ. ಸಂಜೆಯಿಂದ ಆರಂಭವಾದ ಈ ಮಳೆ ಕೆಲಹೊತ್ತು ಭಾರಿ ಗುಡುಗು ಸಿಡಿಲು ಸಹಿತ ಬಿದ್ದಿದ್ದು ನಗರದ ಹೊರವಲಯದಲ್ಲಿ ಅಲ್ಲಲ್ಲಿ ಮರಗಿಡಗಳು ಉರುಳಿ ಅದರಡಿ ನಿಂತಿದ್ದ ವಾಹನವೊಂದು ಜಖಂ ಆಗಿರುವ ವರದಿ ಬಂದಿದೆ. ಶುಕ್ರವಾರ ಬಹುತೇಕ ದಿನ ಮೋಡ ಕವಿದ ವಾತಾವರಣದಿಂದ ಕೂಡಿತ್ತಲ್ಲದೆ ಸಂಜೆ 6ರಿಂದ ಭಾರಿ ಮಳೆ ಆರಂಭವಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳಿಪಟ ಗ್ಯಾರಂಟಿ: ಸಿ.ಟಿ.ರವಿ

ಗುರುವಾರ ರಾತ್ರಿ ಜಿಲ್ಲೆಯಾದ್ಯಂತ 6.34ಮಿಮೀ ಮಳೆ ದಾಖಲಾಗಿದ್ದು ಜನವಾಡಾ ಪ್ರದೇಶದಲ್ಲಿ ಅತೀ ಹೆಚ್ಚು ಅಂದರೆ 38.5ಮಿಮೀ ಮಳೆ ದಾಖಲಾಗಿದೆ. ಔರಾದ್‌ ತಾಲೂಕಿನಲ್ಲಿ 1.67ಮಿಮೀ, ಬೀದರ್‌ ತಾಲೂಕಿನಲ್ಲಿ 14.75ಮಿಮೀ, ಭಾಲ್ಕಿ ತಾಲೂಕಿನಲ್ಲಿ 3.02ಮಿಮೀ, ಬಸವಕಲ್ಯಾಣ ತಾಲೂಕಿನಲ್ಲಿ 0.60ಮಿಮೀ, ಹುಮನಾಬಾದ್‌ನಲ್ಲಿ 5.87ಮಿಮೀ, ಚಿಟಗುಪ್ಪದಲ್ಲ 20.8ಮಿಮೀ, ಕಮಲನಗರದಲ್ಲಿ 4ಮಿಮೀ ಮತ್ತು ಹುಲಸೂರ ತಾಲೂಕಿನಲ್ಲಿ ಮಳೆ ದಾಖಲಾಗಿಲ್ಲ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಮಾಹಿತಿ ನೀಡಿದ್ದಾರೆ