ವಾರದ ಹಿಂದೆ ಬಿದ್ದ ಕುಂಭ ದ್ರೋಣ ಮಳೆಗೆ ತತ್ತರಿಸಿ ಹೋಗಿದ್ದ ಜಿಲ್ಲೆ  ಜಿಲ್ಲೆಯ ಜನತೆಗೆ ಇದೀಗ ಜಡಿ ಮಳೆಯು ಆವರಿಸಿ ಇಡೀ ಜಿಲ್ಲೆಯ ಜನ ಜೀವನವನ್ನು ಎರಡು ದಿನಗಳಿಂದ ಬಂಧಿಸಿದ್ದು ಜನ ಜೀವನ ತತ್ತರ

 ಚಿಕ್ಕಬಳ್ಳಾಪುರ (ನ.13): ವಾರದ ಹಿಂದೆ ಬಿದ್ದ ಕುಂಭ ದ್ರೋಣ ಮಳೆಗೆ (rain) ತತ್ತರಿಸಿ ಹೋಗಿದ್ದ ಜಿಲ್ಲೆಯ ಜನತೆಗೆ ಇದೀಗ ಜಡಿ ಮಳೆಯು ಆವರಿಸಿ ಇಡೀ ಜಿಲ್ಲೆಯ ಜನ ಜೀವನವನ್ನು ಎರಡು ದಿನಗಳಿಂದ ಬಂಧಿಸಿದ್ದು ಜನ ಜೀವನ ತತ್ತರಗೊಂಡಿದೆ.

Add Asianetnews Kannada as a Preferred SourcegooglePreferred

ಮೊದಲೇ ಮಳೆಯಿಂದ ಕೆರೆ, ಕುಂಟೆ, ಜಲಾಶಯಗಳು ತುಂಬಿ ಕೋಡಿ (water) ಹರಿಯುತ್ತಿರುವ ಜಿಲ್ಲೆಯಲ್ಲಿ ಜಡಿ ಮಳೆಯು ಜನ ಜೀವನವನ್ನು ಅಸ್ತವ್ಯಸ್ಥಗೊಳಿಸಿದ್ದು ಕೃಷಿ, ಹೈನುಗಾರಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ರೈತಾಪಿ ಕೃಷಿ ಕೂಲಿ ಕಾರ್ಮಿಕರು ಪರದಾಡುವಂತಾಗಿದೆ.

ಮಳೆ, ಚಳಿಗೆ ಜನತೆ ಗಡಗಡ

ಸತತ ಎರಡು ದಿನಗಳಿಂದ ಜಿಲ್ಲೆಯನ್ನು ಮೂಡ ಕವಿದ ವಾತಾವರಣ (cloudy) ಆವರಿಸಿದ್ದು ಸುರಿಯುತ್ತಿರುವ ಸೋನೆ ಮಳೆಯಿಂದಾಗಿ ಜನ ಮನೆಗಳಿಂದ ಹೊರ ಬರಲಾಗದೇ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ತತ್ತರಗೊಂಡಿದ್ದು ಜೊತೆಗೆ ಜಡಿ ಮಳೆಗೆ ಚಳಿಯ ಅಬ್ಬರವು ಜನರನ್ನು ಕಂಗೆಡಿಸಿದೆ. ಸರಿ ಸುಮಾರು 20 ದಿನಗಳ ಕಾಲ ಬಿದ್ದ ಮಳೆ ಸಾಕಷ್ಟುಸಾರ್ವಜನಿಕ ಆಸ್ತಿ, ಪಾಸ್ತಿ ನಷ್ಟಉಂಟು ಮಾಡಿದೆ. ಈಗ ಬೀಳುತ್ತಿರುವ ಮಳೆಯು ಕೂಡ ಕೊಯ್ಲಿಗೆ ಬಂದಿರುವ ಶೇಂಗಾ, ರಾಗಿ, ಅವರೆ, ತೊಗರಿ ಬೆಳೆಯನ್ನು ಮಲಗುವಂತೆ ಮಾಡಿದ್ದು ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಹಂಗಾಮು ಕೈ ಹಿಡಿದು ಉತ್ತಮ ಬೆಳೆ ನಿರೀಕ್ಷಿಸಿದ್ದ ರೈತರಿಗೆ ಜಡಿ ಮಳೆ ಕೈಗೆ ಬಂದ ಬೆಳೆ ಕಿತ್ತುಕೊಳ್ಳುವಂತೆ ಮಾಡಿದ್ದು ಕೃಷಿ ಉತ್ಪನ್ನಗಳ ಸಂಸ್ಕರಣೆ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಜಿಲ್ಲೆಯ ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

Karnataka| ರಾಜ್ಯದಲ್ಲಿ ಇನ್ನೂ 3-4 ದಿನ ಭಾರಿ ಮಳೆ

ಹಾಲು, ತರಕಾರಿ ಸಾಗಾಟಕ್ಕೆ ಸಂಕಷ್ಟ

ಎಡಿ ಮಳೆಯ ಪರಿಣಾಮ ದಿನ ನಿತ್ಯದ ಚುವಟಿಕೆಗಳ ಮೇಲೆಯು ಮಂಕು ಕವಿದಿದೆ. ಹಾಲು (milk), ಹಣ್ಣು, ಹೂ, ತರಕಾರಿ ಸಾಗಾಟ, ಮಾರಾಟಕ್ಕೂ ಜಡಿ ಮಳೆ ಬಿಡುತ್ತಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ತರಕಾರಿ ಮಾರುಕಟ್ಟೆಗೆ ಬಾರದೇ ಬೆಲೆ ಹೆಚ್ಚಳವಾಗಿದೆ. ಹೂ ಬೆಳೆದರೂ ಮಾರಾಟಕ್ಕೆ ತರದ ಪರಿಸ್ಥಿತಿ ರೈತರಾಗಿದೆ. ಇನ್ನೂ ಹಣ್ಣು ಹಂಪಲು ಮಳೆಗೆ ಕೊಳೆಯುವಂತಾಗಿದೆ. ಮೊನ್ನೆಯು ಮಳೆ ಬಿದ್ದು ಸಾಕಷ್ಟುಬೆಳೆಗಳು ನಾಶವಾದವು. ಈಗ ಜಡಿ ಮಳೆಯಿಂದ ಸಾಕಷ್ಟುವಾಣಿಜ್ಯ ಬೆಳೆಗಳು ನಾಶವಾಗಿ ರೈತರಿಗೆ ಲಕ್ಷಾಂತರ ರೂ, ಆರ್ಥಿಕ ನಷ್ಠ ಸಂಭವಿಸಿದೆಯೆಂದು ಜಿಲ್ಲೆಯ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಮುನಿಕೃಷ್ಣಪ್ಪ ಕನ್ನಡಪ್ರಭಗೆ ತಿಳಿಸಿದರು. ಅಲ್ಲದೇ ಮಳೆಯಿಂದ ಬೆಳೆದುಕೊಂಡ ರೈತರಿಗೆ ಸೂಕ್ತ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಬೇಕೆಂದರು.

ಹೊರ ರೋಗಿಗಳ ಸಂಖ್ಯೆ ಹೆಚ್ಚಳ

ಸತತ ಜಡಿ ಮಳೆಯಿಂದಾಗಿ ಕಂಗಾಲಾಗಿರುವ ಜಿಲ್ಲೆಯ ಜನತೆಗೆ ಆನಾರೋಗ್ಯ ಕಾಡತೊಡಗಿದೆ. ಸತತ ಜಡಿ ಮಳೆ, ಚಳಿಯ ಅಬ್ಬರಕ್ಕೆ ಜನತೆಗೆ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡಿದ್ದು ವಿಶೇಷವಾಗಿ ಮಕ್ಕಳ, ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತವಾಗಿದೆ. ಜಿಲ್ಲಾಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ.