Asianet Suvarna News Asianet Suvarna News

ರಾಜಕಾರಣ ಬಿಟ್ಟು ದೊಡ್ಡದೊಂದು ಹಕ್ಕೊತ್ತಾಯ ಮಾಡಿದ HDK

ಬೆಂಗಳೂರು ವಿವಿ ಆವರಣ ಕಾಂಕ್ರೀಟ್ ಕಾಡಾಗುವುದನ್ನು ತಪ್ಪಿಸಿ/ ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹ/ ಸರ್ಕಾರ ನಿರ್ಧಾರ ಹಿಂದಕ್ಕೆ ಪಡೆಯಬೇಕು/ ಬೇರೆ ಕಡೆ ಸ್ಥಳ  ನೀಡಿ

HDK Karnataka Govt should reconsider the decision of giving Bengaluru vv Land Mah
Author
Bengaluru, First Published Oct 4, 2020, 8:54 PM IST

ಬೆಂಗಳೂರು(ಅ. 04)  ಜೀವವೈವಿಧ್ಯದ ತಾಣವಾಗಿರುವ ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಒಟ್ಟು 32 ಎಕರೆ ಪ್ರದೇಶವನ್ನು ಯೋಗ ವಿ.ವಿ ಮತ್ತು ಇತರೆ ಎರಡು ಸಂಸ್ಥೆಗಳಿಗೆ ನೀಡಿರುವ ಸರ್ಕಾರದ ನಿರ್ಧಾರವನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಸುಮಾರು ಎರಡು ದಶಕಗಳಿಂದ ಪರಿಸರ ತಜ್ಞರು ಶ್ರಮವಹಿಸಿ ಬೆಳೆಸಿದ ಈ ತಾಣವನ್ನು ಸರ್ಕಾರ ಯಾವುದೇ ಸಮಾಲೋಚನೆ ನಡೆಸದೆ ಏಕಾಏಕಿ ಜೀವವೈವಿಧ್ಯ ತಾಣಕ್ಕೆ ಕುತ್ತು ತರುವ ನಿರ್ಧಾರ ಕೈಗೊಂಡಿರುವುದು  ತೀವ್ರ ಅಪಾಯಕಾರಿ ಎಂದಿದ್ದಾರೆ.

ಕುಮಾರಸ್ವಾಮಿಗೆ ಸಿಟಿ ರವಿ 'ಸುದ್ದಿ' ಪಾಠ!

ಹಿರಿಯ ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಅವರು ತಮಗೆ ಸರ್ಕಾರ ನೀಡಿದ್ದ ಗೌರವ ಡಾಕ್ಟರೇಟ್ ಹಿಂತಿರುಗಿಸುವ ಮೂಲಕ ತಮ್ಮ ಸಾತ್ವಿಕ ಸಿಟ್ಟನ್ನು ಪ್ರಕಟಿಸಿದ್ದಾರೆ. ಇದಕ್ಕೆ ಪರಿಸರ ಪ್ರೇಮಿಗಳು ಬೆಂಬಲ ಸೂಚಿಸಿದ್ದಾರೆ.  ಯೋಗ ವಿವಿಗೆ 15 ಎಕರೆ, ಗುಲ್ಬರ್ಗಾ ವಿ.ವಿ.ಗೆ 15 ಎಕರೆ ಸಿ.ಬಿ.ಎಸ್.ಸಿ. ದಕ್ಷಿಣ ಭಾರತದ ಕಚೇರಿಗೆ 2 ಎಕರೆ ಸೇರಿದಂತೆ ಒಟ್ಟು 32 ಎಕರೆಯನ್ನು ನೀಡಿರುವ ಕ್ರಮದಿಂದ ಬೆಂಗಳೂರು ವಿವಿ ಆವರಣ ಕಾಂಕ್ರೀಟ್ ಕಾಡಾಗಲಿದೆ. ಈ ಸಂಸ್ಥೆಗಳಿಗೆ ಬೇರೆ ಕಡೆ ಸ್ಥಳ ನೀಡುವ ಮೂಲಕ ಈ ಜೀವವೈವಿಧ್ಯ ತಾಣವನ್ನು ಸರ್ಕಾರ ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಕಳೆದ 20 ವರ್ಷಗಳಲ್ಲಿ ನಿರ್ಮಾಣಗೊಂಡ ಜೀವವೈವಿಧ್ಯ ವನದ ನಡುವೆ ಮೂರು ಸಂಸ್ಥೆಗಳಿಗೆ ಭೂಮಿ ನೀಡಲು ಮುಂದಾಗಿರುವ ವಿ.ವಿ ಮತ್ತು ಸರ್ಕಾರದ ಕ್ರಮ ಖಂಡನೀಯ. ಇದರಿಂದ “ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ” ಎಂಬಂತೆ ಇಡೀ ಸಸ್ಯ ಸಂಪತ್ತು ನಾಶವಾಗಲಿದೆ.ಹಿಂದೆ ಉಪಕುಲಪತಿಗಳಾಗಿದ್ದ ಡಾ.ಕೆ.ಸಿದ್ದಪ್ಪನವರು ಇದೊಂದು ಬಯಲು ಪ್ರಯೋಗಾಲಯವಾಗಲಿದೆ ಎಂದು ನಿರೀಕ್ಷಿಸಿ ಜೀವವೈವಿಧ್ಯವನಕ್ಕೆ ಚಾಲನೆ ನೀಡಿದ್ದರು. ಅಂತೆಯೇ ಇದೀಗ ಸಸ್ಯಶಾಸ್ತ್ರ,ಪ್ರಾಣಿಶಾಸ್ತ್ರ, ಭೂಗರ್ಭಶಾಸ್ತ್ರ, ಪರಿಸರ ವಿಜ್ಞಾನ, ಸಾಮಾಜಿಕ ವಿಜ್ಞಾನಗಳ ವಿದ್ಯಾರ್ಥಿಗಳಿಗೆ ಇದೊಂದು ಬಯಲು ಪ್ರಯೋಗಾಲಯವಾಗಿ ನೂರಾರು ಸಂಶೋಧನೆಗಳು ನಡೆಯುತ್ತಿವೆ. ಇಂತಹ ತಾಣವನ್ನು ಧ್ವಂಸ ಮಾಡಬಾರದು. ಮುಂದಿನ ಪೀಳಿಗೆಗೆ ಉಳಿಸಬೇಕು. ಬೆಳೆಸಬೇಕು ಎಂದು ಕೇಳಿಕೊಂಡಿದ್ದಾರೆ.

Follow Us:
Download App:
  • android
  • ios