ಜೆಡಿಎಸ್ ನಲ್ಲಿಯೇ ಭಾರೀ ಪೈಪೋಟಿ : ರೇವಣ್ಣ ಕೃಪಾಕಟಾಕ್ಷ ಯಾರಿಗೆ ?
ಜೆಡಿಎಸ್ ನಲ್ಲಿಯೇ ಇದೀಗ ಅಧಿಕಾರಕ್ಕೆ ಪೈಪೋಟಿ ಆರಂಭವಾಗಿದೆ. ಇದರ ಬೆನ್ನಲ್ಲೇ ರೇವಣ್ಣ ಕೃಪಾಕಟಾಕ್ಷ ಯಾರಿಗೆ ಇರಲಿದೆಯೋ ಅವರಿಗೆ ಅಧಿಕಾರ ಸಿಗೋದು ಪಕ್ಕಾ ಎನ್ನಲಾಗುತ್ತಿದೆ.
ದಯಾಶಂಕರ ಮೈಲಿ
ಹಾಸನ (ಮಾ.13): ಅಂತೂ ಇಂತೂ ಚುನಾವಣೆ ನಡೆದ ವರ್ಷದ ಏಳು ತಿಂಗಳಾದ ನಂತರ ಹಾಸನ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೂ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ ಮಹಿಳೆಗೆ ಮೀಸಲು ಮಾಡಲಾಗಿದ್ದು, ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯೂ ಏಪ್ರಿಲ್ 2 ನೇ ವಾರದಲ್ಲಿ ನಡೆಯುವ ಸಂಭವವಿದೆ.
ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗೆ ಗರಿಗೆದರಿದೆ. ವಾಸ್ತವವಾಗಿ ನಗರಸಭೆಯ 35 ವಾಡ್ ಗರ್ಳ ಪೈಕಿ ಜೆಡಿಎಸ್ 17 ಸ್ಥಾನವನ್ನು ಪಡೆದು ಅತಿ ಹೆಚ್ಚು ಸ್ಥಾನವನ್ನು ಗಳಿಸಿದ್ದರೂ ಬಹುಮತ ಓರ್ವ ಸದಸ್ಯರ ಕೊರತೆ ಇದೆ. ಇದನ್ನು ಪಡೆದರೇ ಎರಡೂ ಸ್ಥಾನಗಳನ್ನು ಜೆಡಿಎಸ್ಗೆ ಪಡೆಯಲು ಸುಲಭವಾಗುತ್ತದೆ.ಒಂದು ವೇಳೆ ನಗರಸಭೆಯಲ್ಲಿ 14 ಸ್ಥಾನಗಳನ್ನು ಗಳಿಸಿರುವ ಬಿಜೆಪಿ ಆಪರೇಷನ್ ಕಮಲ ನಡೆಸಿ ಕಾಂಗ್ರೆಸ್ ನಿಂದ ಗೆದ್ದಿರುವ ಇಬ್ಬರು ಮತ್ತು ಪಕ್ಷೇತರ ಇಬ್ಬರನ್ನು ಸದಸ್ಯರನ್ನು ತನ್ನ ತೆಕ್ಕೆಗೆ ಪಡೆಯಬೇಕು.ಆಗ ತೆನೆ ಹೊತ್ತ ಮಹಿಳೆಗೆ ನಗರಸಭೆ ದಕ್ಕುವುದು ಕಷ್ಟಕರವಾಗುತ್ತದೆ ಎಂದೇ ಹೇಳಲಾಗುತ್ತಿದೆ. ಬಿಜೆಪಿ ಶಾಸಕ ಪ್ರೀತಂಗೌಡ ಕೂಡ ಅಗತ್ಯ ಬಹುಮತ ಗಳಿಸಲು ಬೇಕಾದ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದ್ದಾರೆ.
JDS ಸಹಕಾರವಿಲ್ಲದೆ ಅಧಿಕಾರವಿಲ್ಲ: ರಾಜಕೀಯ ಪಕ್ಷಗಳಲ್ಲಿ ಗರಿಗೆದರಿದ ಚಟುವಟಿಕೆ!..
ಜೆಡಿಎಸ್ನಿಂದ 4ನೇ ವಾರ್ಡ್ ಎಸ್ .ಎಚ್.ವಾಸುದೇವ್, 23ನೇ ವಾರ್ಡ್ ಸಿ.ಆರ್.ಶಂಕರ್, 8 ನೇ ವಾರ್ಡಿನ ಗಿರೀಶ್ ಚನ್ನ ವೀರಪ್ಪ, 33 ನೇ ವಾರ್ಡಿನ ಚಂದ್ರೇಗೌಡ, 11 ನೇ ವಾರ್ಡಿನ ಯೋಗೇಂದ್ರ ಕುಮಾರ್ ಬಾಬು, 20ನೇ ವಾರ್ಡಿನ ಅಮೀರ್ ಜಾನ್, 28ನೇ ವಾರ್ಡಿನ ಸೈಯದ್ ಅಕ್ಬರ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳೆಂದು ಹೇಳಲಾಗುತ್ತಿದೆ. ಇದೇ ವೇಳೆ 13 ನೇ ವಾರ್ಡಿನಿಂದ ಬದಲಾದ ಪರಿಸ್ಥಿತಿಯಲ್ಲಿ ಜೆಡಿಎಸ್ ಬಿಟ್ಟು ಬಿಜೆಪಿಯಿಂದ ಗೆದ್ದಿರುವ ಎಚ್.ಸಿ.ಮಂಜುನಾಥ್ ಅವರು ಕೂಡ ಲೋಕಸಭೆ ಚುನಾವಣಾ ಸಂದರ್ಭದಲ್ಲಿ ಮತ್ತೆ ಜೆಡಿಎಸ್ನೊಂದಿಗೆ ಗುರುತಿಸಿಕೊಂಡಿದ್ದರು. ಇವರೂ ಅಧ್ಯಕ್ಷ ಸ್ಥಾನಕ್ಕೆ ಒಲವು ತೋರಿಸಿದ್ದಾರೆ ಎನ್ನಲಾಗಿದೆ.
ಬಿಸಿಎ ಮಹಿಳೆಗೆ ನಿಗದಿ ಆಗಿರುವ ಉಪಾಧ್ಯಕ್ಷ ಸ್ಥಾನಕ್ಕೂ ಜೆಡಿಎಸ್ 10ನೇ ವಾರ್ಡಿನ ಕೆ.ಎಂ.ಜಾನಕಿ, 15ನೇ ವಾರ್ಡಿನ ಅಶ್ವಿನಿ ಮಹೇಶ್, 17ನೇ ವಾರ್ಡಿನ ರೋಹಿನ್ ತಾಜ್, 19ನೇ ವಾರ್ಡಿನ ರಜೀಯಾ ಬೇಗಂ, 21ನೇ ವಾರ್ಡಿನ ನಜೀಮಾ ಭಾನು, 22ನೇ ವಾರ್ಡಿನ ಗೌಸಿಯಾ ಅಲಮಸು ಹಾಗೂ 26ನೇ ವಾರ್ಡಿನ ಅಲ್ಫಿಯಾ ಫಯಾಜ್ ಆಕಾಂಕ್ಷಿಗಳಾಗಿದ್ದಾರೆ.
ರೇವಣ್ಣ ಕೃಪಾಕಟಾಕ್ಷ ಯಾರಿಗೆ?
ಅಂತಿಮವಾಗಿ ಜೆಡಿಎಸ್ ಹಿರಿಯ ಮುಖಂಡರಾದ ಮಾಜಿ ಸಚಿವ ಎಚ್ .ಡಿ. ರೇವಣ್ಣನವರ ಕೃಪಾಕಟಾಕ್ಷ ಯಾರಿಗೆ ಸಿಗುತ್ತದೆ ಅವರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಪಡೆಯುವುದು ಖಚಿತ.ಒಂದು ವೇಳೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಹಣಾಹಣಿ ಏರ್ಪಟ್ಟರೇ ರೇವಣ್ಣನವರು ಬೇರೆ ಸಮಾಜದ ಸದಸ್ಯರನ್ನು ಆಯ್ಕೆ ಮಾಡುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿವಲ್ಲ