2 ಪ್ರತಿರೋಧ ಪಕ್ಷ ಸೇರಿ ಸರ್ಕಾರ ರಚಿಸಿದ್ದೇ ಬ್ಲಂಡರ್: ಸಿದ್ದುಗೆ ವಿಶ್ವನಾಥ್ ಟಾಂಗ್
ರಾಜ್ಯದಲ್ಲಿ ಎರಡು ಪ್ರತಿರೋಧದ ಪಕ್ಷಗಳು ಸೇರಿಕೊಂಡು ಸರ್ಕಾರ ರಚಿಸಿದ್ದೇ ಬ್ಲಂಡರ್ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಮೈಸೂರಿನಲ್ಲಿ ಹೇಳಿದ್ದಾರೆ.
ಮೈಸೂರು(ಜು.04): ರಾಜ್ಯದಲ್ಲಿ ಎರಡು ಪ್ರತಿರೋಧದ ಪಕ್ಷಗಳು ಸೇರಿಕೊಂಡು ಸರ್ಕಾರ ರಚಿಸಿದ್ದೇ ಬ್ಲಂಡರ್ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಮೈಸೂರಿನಲ್ಲಿ ಹೇಳಿದ್ದಾರೆ.
ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ಪ್ರತಿರೋಧದ ಪಕ್ಷಗಳು ಸೇರಿಕೊಂಡು ಸರ್ಕಾರ ರಚಿಸಿದ್ದೇ ಬ್ಲಂಡರ್. ನನಗೆ ಎಂ.ಎಲ್.ಸಿ ಸ್ಥಾನ ಸಿಗದಿದ್ದರೆ ಆಕಾಶಕ್ಕೂ ಹೋಗುವುದಿಲ್ಲ, ಪಾತಾಳಕ್ಕೂ ಹೋಗುವುದಿಲ್ಲ, ವಿಶ್ವನಾಥ್ ವಿಶ್ವನಾಥನೇ ಎಂದಿದ್ದಾರೆ.
24 ಗಂಟೆಗಳಲ್ಲಿ 16 ವಾರ್ಡ್ಗಳಲ್ಲಿ ಕೊರೋನಾ ಸೋಂಕಿನ ಸುನಾಮಿ..!
ನನಗೆ ಎಂ.ಎಲ್.ಸಿ ಸ್ಥಾನ ನೀಡಲು ಯಾವುದೇ ರೀತಿಯ ಕಾನೂನು ತೊಡಕಿಲ್ಲ. ಜೆಡಿಎಸ್ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತು ಹಾಕಿದ್ದ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಗೆ ಕರೆ ತಂದಿದ್ದೇ ನಾನು. ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯರನ್ನು ಈ ರಾಜ್ಯದ ಮುಖ್ಯಮಂತ್ರಿ ಮಾಡಿದ್ದಕ್ಕೆ ಪಶ್ಚಾತ್ತಾಪ ಆಗಿಲ್ಲ, ಸಂತೋಷವಾಗಿದೆ. ಆದರೆ ಸಿದ್ದರಾಮಯ್ಯ ಎಲ್ಲರನ್ನೂ ತುಳಿಯುವ ಕೆಲಸ ಮಾಡಿದರು. ಎಲ್ಲರನ್ನೂ ತುಳಿಯುವುದೇ ಸಿದ್ದರಾಮಯ್ಯ ಕೆಲಸವಾಗಿದೆ ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಲಡಾಕ್ ಭೇಟಿಯನ್ನು ಕಾಂಗ್ರೆಸ್ ನಾಯಕರು ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೋದಿ ದೇಶ ಕಂಡ ಮೊದಲ ಅಹಿಂದ ಪ್ರಧಾನಿ. ಅಹಿಂದ ಎನ್ನುವ ಸಿದ್ದರಾಮಯ್ಯ ಇದನ್ನು ನೆನಪಿನಲ್ಲಿಟ್ಟುಕೊಳ್ಳಲಿ. ಮೋದಿಗೂ ದೇವರಾಜ ಅರಸುರವರಿಗೂ ಸಾಕಷ್ಟು ಸಾಮ್ಯತೆಯಿದೆ. ಮೋದಿಯವರಲ್ಲಿ ನಾನು ದೇವರಾಜ ಅರಸು ಅವರನ್ನು ಕಾಣುತ್ತಿದ್ದೇನೆ. ಮೋದಿಯವರನ್ನು ಟೀಕಿಸುವ ಮುನ್ನ ಯೋಚಿಸಿ ಮಾತನಾಡಿ. ಮೋದಿ ಈ ದೇಶ ಕಂಡ ಯಶಸ್ವಿ ನಾಯಕ. ದೇಶದ ಸಮಗ್ರತೆ ಐಕ್ಯತೆ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.
ಬೆಡ್ ಸಿಗದೇ ಕೊರೋನಾ ಸೋಂಕಿತರ ಪರದಾಟ..!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಿಂದ ಪ್ರಧಾನಿ ನರೇಂದ್ರ ಮೋದಿ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಎಳಸು ಮುಂಡೇದೇ ಸರಿಯಾಗಿ ಮಾತನಾಡು ಹೀಗೆಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಪತ್ರ ಬರೆದು ರಾಹುಲ್ ಗಾಂಧಿಗೆ ಬುದ್ದಿ ಹೇಳಿದ್ದಾರೆ. ದೇಶದ ಸಮಗ್ರತೆಯ ವಿಚಾರ ಬಂದಾಗ ಸರಿಯಾಗಿ ಮಾತನಾಡಬೇಕು. ನೀವು ನಿಮ್ಮ ಪಕ್ಷದ ಪ್ರಧಾನಿಗಳಿಗೆ ಸರಿಯಾದ ಗೌರವ ಕೊಟ್ಟಿಲ್ಲ. ಮನಮೋಹನ್ ಸಿಂಗ್, ನರಸಿಂಹರಾವ್ ಅವರನ್ನು ನೀವು ಹೇಗೆ ನಡೆಸಿಕೊಂಡಿರಿ ಎಂಬುದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.