ದೇವಸ್ಥಾನ ತೆರವು ವಿಷಯ ಜನರು ದಂಗೆ ಎದ್ದರೆ ನೀವು ಉಳಿಯುತ್ತೀರಾ?  ಜನರ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಶಾಸಕ ಜಿ.ಟಿ. ದೇವೇಗೌಡ

ಮೈಸೂರು (ಸೆ.13) : ದೇವಸ್ಥಾನ ತೆರವು ವಿಷಯ ಜನರು ದಂಗೆ ಎದ್ದರೆ ನೀವು ಉಳಿಯುತ್ತೀರಾ? ಜನರ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಶಾಸಕ ಜಿ.ಟಿ. ದೇವೇಗೌಡರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ದೇವಾಲಯ ತೆರವು ಸಂಬಂಧ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿ, ಹಿಂದೂ ಧರ್ಮ ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳ ಮೇಲೆ ನಂಬಿಕೆ ಇಟ್ಟಿದೆ. ದೇವಾಲಯಗಳನ್ನು ಒಡೆದರೆ ಜನರ ಎದೆಗೆ ಒದ್ದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಲ್ಲಿ 93 ದೇವಾಲಯ ತೆರವು : ಚರ್ಚ್ ಮತ್ತು ಮಸೀದಿ ಇಲ್ಲವೆ ಎಂದು ಸಿಂಹ ಆಕ್ರೋಶ

ದೇಗುಲಗಳು ಮಾತ್ರವಲ್ಲ. ಕೆರೆಗಳ ಒತ್ತುವರಿ ತೆರವುಗೊಳಿಸಿ ನ್ಯಾಯಾಲಯಕ್ಕೂ ಗೌರವ ತಂದು ಕೊಡಬೇಕು. ನಿಮ್ಮಿಂದ ಜನರು ದಂಗೆ ಏಳಬೇಕಾ? ಯಾವ ಜಿಲ್ಲೆಯಲ್ಲೂ ದೇವಾಲಯಗಳನ್ನು ತೆರವುಗೊಳಿಸಿಲ್ಲ. ಆದರೆ ಮೈಸೂರಿನಲ್ಲಿ ಮಾತ್ರ ದೇವಾಲಯಗಳ ತೆರವು ಯಾಕೆ? ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿದ್ರೆ ಮಾತ್ರ ದೇವಾಲಯಗಳನ್ನು ತೆರವುಗೊಳಿಸಬೇಕು ಎಂದರು.

ಬೇರೆ ಜಿಲ್ಲೆಗಳಲ್ಲಿ ನೀವು ದೇವಾಲಯಗಳನ್ನು ಮುಟ್ಟಲು ಆಗುತ್ತದೆಯೇ? ಮೈಸೂರು ಜನ ಶಾಂತಿ ಪ್ರಿಯರು ಅಂತ ಈ ಕೆಲಸಕ್ಕೆ ಕೈ ಹಾಕಿದ್ದೀರಾ? ಸುಪ್ರೀಂ ಕೋರ್ಟ್‌ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಎಂದು ಆದೇಶಿಸಿದೆ. ಆದರೆ ನೀವು ಒಂದೇ ಒಂದು ಕೆರೆ ಒತ್ತುವರಿ ತೆರವು ಮಾಡಿದ್ದೀರಾ? ಪುರಾತನ ಕಾಲದಿಂದಲೂ ದೇವಾಲಯಗಳು ಇವೆ. ನಾವುಗಳು ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಬಾರದು. ಇದು ಸಂಪೂರ್ಣ ಅಧಿಕಾರಿಗಳ ಯಡವಟ್ಟು ಎಂದು ಜಿಲ್ಲಾಡಳಿತದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.