ಹಸೆಮಣೆ ಏರಬೇಕಾಗಿದ್ದ ಯುವಕ ಮದುವೆ ಹಿಂದಿನ ದಿನವೇ ಕೊರೋನಾಗೆ ಬಲಿಯಾಗಿದ್ದಾರೆ. 10 ದಿನಗಳ ಹಿಂದಷ್ಟೆ ಇವರು ಬೆಂಗಳೂರಿನಿಂದ ತಮ್ಮೂರಿಗೆ ವಾಪಸಾಗಿದ್ದು, ಸೋಂಕು ತೀವ್ರವಾಗಿ ಮೃತಪಟ್ಟಿದ್ದಾರೆ. 

ಕೊಪ್ಪ (ಏ.30):  ಹಸೆಮಣೆ ಏರಬೇಕಾಗಿದ್ದ ಯುವಕ ಕೊರೋನಾ ಹೆಮ್ಮಾರಿಗೆ ಬಲಿಯಾಗಿರುವ ಘಟನೆ ನಡೆದಿದೆ.

Add Asianetnews Kannada as a Preferred SourcegooglePreferred

ಕೋವಿಡ್‌ ಬಾರದೇ ಇದ್ದಿದ್ದರೆ, ಪೂರ್ವನಿಗದಿಯಂತೆ ದೇವರಕೊಡಿಗೆ ಗ್ರಾಮದ ಪೃಥ್ವಿರಾಜ್‌ (32) ಅವರ ಮದುವೆ ಗುರುವಾರ (ಏ.29) ನಡೆಯುತ್ತಿತ್ತು. 

ಪೃಥ್ವಿರಾಜ್‌ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಮನೆಯವರು ತೋರಿಸಿದ್ದ ಹುಡುಗಿಗೆ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದರು. ಅದಕ್ಕಾಗಿ ಏ.29ರಂದು ಮದುವೆ ನಡೆಸಲು ನಿಶ್ಚಯಿಸಿ ಸಂಬಂಧಿಕರಿಗೆ ಆಮಂತ್ರಣ ಪತ್ರಿಕೆ ಸಹ ಹಂಚಲಾಗಿತ್ತು. ಹುಡುಗ ಮತ್ತು ಹುಡುಗಿಯ ಮನೆಯಲ್ಲಿ ಮದುವೆಯ ಸಡಗರ ಜೋರಾಗಿತ್ತು.

ಕೊರೋನಾ ಅಟ್ಟಹಾಸ: ಮೇನಲ್ಲಿ ನಿತ್ಯ ಬೇಕು 2000 ಟನ್‌ ಆಕ್ಸಿಜನ್‌..! ...

ಮದುವೆ ಸಮೀಪಿಸುತ್ತಿದ್ದಂತೆ ಪೃಥ್ವಿರಾಜ್‌ 10 ದಿನಗಳ ಹಿಂದಷ್ಟೇ ದೇವರಕೊಡಿಗೆ ಗ್ರಾಮಕ್ಕೆ ಬಂದಿದ್ದರು. ಊರಿಗೆ ಬರುವಾಗ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿತ್ತು. 

ಕೂಡಲೇ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಕಂಡುಬಂದಿದ್ದರಿಂದ ಮಂಗಳವಾರ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಪೃಥ್ವಿರಾಜ ಅವರನ್ನು ಕರೆದೊಯ್ಯಲಾಗಿತ್ತು.

ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಎರಡು ಬಾರಿ ಪರೀಕ್ಷೆಯಲ್ಲೂ ನೆಗೆಟಿವ್ ವರದಿ ಬಂದಿತ್ತು ಎನ್ನಲಾಗಿದೆ. 

ಆದರೆ ಸೋಂಕಿನ ತೀವ್ರತೆ ಹೆಚ್ಚಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಅವರು ಬುಧವಾರ ಮೃತಪಟ್ಟಿದ್ದಾರೆ. ಮದುವೆಯ ಸಂಭ್ರಮದಲ್ಲಿದ್ದ ಮನೆಗಳಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona