ಜಿಪಂಗಳಲ್ಲಿ ಅನುಕಂಪದ ನೇಮಕಾತಿ ಮಾಡದಂತೆ ಸರ್ಕಾರ ಸೂಚನೆ
ಜಿಲ್ಲಾ ಪಂಚಾಯಿತಿಗಳಲ್ಲಿ ನೇರ ನೇಮಕಾತಿ ಕೋಟಾದಡಿ ಭರ್ತಿಗೆ ಲಭ್ಯವಿರುವ ಹುದ್ದೆಗಳಿಗೆ ಅನುಕಂಪದ ಆಧಾರದಲ್ಲಿ ಯಾವುದೇ ನೇಮಕಾತಿಗಳನ್ನು ಮಾಡದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚಿಸಿದೆ.
ಬೆಂಗಳೂರು (ಆ.8) : ಜಿಲ್ಲಾ ಪಂಚಾಯಿತಿಗಳಲ್ಲಿ ನೇರ ನೇಮಕಾತಿ ಕೋಟಾದಡಿ ಭರ್ತಿಗೆ ಲಭ್ಯವಿರುವ ಹುದ್ದೆಗಳಿಗೆ ಅನುಕಂಪದ ಆಧಾರದಲ್ಲಿ ಯಾವುದೇ ನೇಮಕಾತಿಗಳನ್ನು ಮಾಡದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚಿಸಿದೆ.
ಈ ಸಂಬಂಧ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರು ಎಲ್ಲಾ ಜಿಲ್ಲೆಗಳ ಡಿಸಿ ಹಾಗೂ ಸಿಇಒಗಳಿಗೆ ಪತ್ರ ಬರೆದಿದ್ದು, ಎಲ್ಲಾ ಪ್ರಾದೇಶಿಕ ಆಯುಕ್ತರ ಕಚೇರಿಗಳಿಂದ ಸ್ವೀಕೃತವಾಗುತ್ತಿರುವ ಅನುಕಂಪದ ನೇಮಕಾತಿ ಪ್ರಸ್ತಾವನೆಗಳ ಕುರಿತು ಮುಂದಿನ ನಿರ್ದೇಶನದವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದಾರೆ.
ಅನುಕಂಪದ ಆಧಾರದಲ್ಲಿ ನೌಕರಿ ಪಡೆಯುವುದು ಹಕ್ಕಲ್ಲ: ಹೈಕೋರ್ಟ್
ಜಿ.ಪಂ.ಗಳಲ್ಲಿ ನೇರ ನೇಮಕಾತಿಯಡಿ ಭರ್ತಿಗೆ ಲಭ್ಯವಿರುವ ಹುದ್ದೆಗಳಿಗೆ ಅನುಕಂಪದ ಆಧಾರದ ನೇಮಕಾತಿಗೆ ಬರುವ ಪ್ರಸ್ತಾವನೆ ಪರಿಗಣಿಸಲು ಈ ಹಿಂದೆ ಅವಕಾಶ ನೀಡಲಾಗಿತ್ತು. ಆದರೆ, ಇತ್ತೀಚಿನ ಬೆಳಗಣಿಗೆಯಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಗಳಿಗೆ ಬರುವ ಪ್ರಸ್ತಾವನೆಗಳ ಆಧಾರದಲ್ಲಿ ಜಿ.ಪಂ.ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿ ಆದೇಶ ನೀಡಲಾಗುತ್ತಿದೆ.
ಇದು ಹೀಗೆಯೇ ಮುಂದುವರೆದರೆ ಜಿ.ಪಂ. ಮತ್ತು ತಾ.ಪಂ. ಕಚೇರಿಗಳ ಕಾರ್ಯನಿರ್ವಹಣೆಯಲ್ಲಿ ಗುಣಮಟ್ಟಕುಸಿಯುವ ಸಾಧ್ಯತೆ ಇದೆ. ಹಾಗಾಗಿ ಪ್ರಾದೇಶಿಕ ಆಯುಕ್ತರ ಕಚೇರಿ ಅನುಕಂಪದ ನೇಮಕಾತಿಗೆ ಕೋರಿ ಬರುವ ಪ್ರಸ್ತಾವನೆಗಳನ್ನು ನಿರ್ದಿಷ್ಟಪ್ರಮಾಣಕ್ಕೆ ಸೀಮಿತಗೊಳಿಸುವ ಅಗತ್ಯವಿದೆ ಎಂದು ನಿರ್ಣಯಿಸಿದ್ದು ಈ ಸಂಬಂಧದ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಹಾಗಾಗಿ ಸರ್ಕಾರದಿಂದ ಈ ವಿಷಯವಾಗಿ ಮುಂದಿನ ನಿರ್ದೇಶನ ನೀಡುವವರೆಗೆ ಅನುಕಂಪದ ನೇಮಕಾತಿ ಮಾಡದಂತೆ ಸೂಚಿಸಲಾಗಿದೆ.
450 ಮಂದಿ ವಜಾ: ಅಟಲ್ ಕೇಂದ್ರದ ಸಿಬ್ಬಂದಿ ಪ್ರತಿಭಟನೆ