Asianet Suvarna News Asianet Suvarna News

Govt formation in Karnataka: ಹೊಸ ಸರ್ಕಾರಕ್ಕೆ ನೂರೆಂಟು ಸವಾಲು!

ಮಹದಾಯಿ ಯೋಜನೆಗೆ ಈಗಲಾದರೂ ಚಾಲನೆ ಸಿಗುತ್ತದೆಯೇ? ಬೆಣ್ಣಿಹಳ್ಳ- ತುಪರಿಹಳ್ಳ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆಯೇ? ಬೆಳಗಾವಿ ಸುವರ್ಣಸೌಧಕ್ಕೆ ಹೆಚ್ಚಿನ ಕಚೇರಿಗಳ ಸ್ಥಳಾಂತರ ಆಗುತ್ತವೆಯೇ? ಅತ್ತ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಗೆ ಚಾಲನೆ ಸಿಗುತ್ತಿದ್ದಂತೆ ಇತ್ತ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಯ ರೈತರು, ಜನಸಾಮಾನ್ಯರಲ್ಲಿ ಪ್ರಶ್ನೆಗಳು ಕೇಳಿ ಬರಲಾರಂಭಿಸಿವೆ.

Govt formation in Karnataka tomorrow  Many challenges for the new government rav
Author
First Published May 19, 2023, 12:00 PM IST

ಶಿವಾನಂದ ಗೊಂಬಿ

ಹುಬ್ಬಳ್ಳಿ (ಮೇ.19) : ಮಹದಾಯಿ ಯೋಜನೆಗೆ ಈಗಲಾದರೂ ಚಾಲನೆ ಸಿಗುತ್ತದೆಯೇ? ಬೆಣ್ಣಿಹಳ್ಳ- ತುಪರಿಹಳ್ಳ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆಯೇ? ಬೆಳಗಾವಿ ಸುವರ್ಣಸೌಧಕ್ಕೆ ಹೆಚ್ಚಿನ ಕಚೇರಿಗಳ ಸ್ಥಳಾಂತರ ಆಗುತ್ತವೆಯೇ? ಅತ್ತ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಗೆ ಚಾಲನೆ ಸಿಗುತ್ತಿದ್ದಂತೆ ಇತ್ತ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಯ ರೈತರು, ಜನಸಾಮಾನ್ಯರಲ್ಲಿ ಪ್ರಶ್ನೆಗಳು ಕೇಳಿ ಬರಲಾರಂಭಿಸಿವೆ.

ಕಳಸಾ- ಬಂಡೂರಿ:

ಕಳಸಾ- ಬಂಡೂರಿ ವಿಷಯದಲ್ಲಿ ರಾಜ್ಯದ ಮೂರು ಪಕ್ಷಗಳು ರಾಜಕೀಯ ಮಾಡಿದ್ದೇ ಹೆಚ್ಚು. ಚುನಾವಣೆ ವೇಳೆ ನೀಡುವ ಆಶ್ವಾಸನೆ ಸರ್ಕಾರ ಬಂದ ಮೇಲೆ ಮರೆತೇ ಬಿಡುತ್ತವೆ. 2018ರಲ್ಲೇ ಮಹದಾಯಿ ವಿವಾದಕ್ಕೆ ಸಂಬಂಧಪಟ್ಟಂತೆ ನ್ಯಾಯಾಧಿಕರಣದ ತೀರ್ಪು ಬಂದಿದೆ. ಕೇಂದ್ರ ಅಧಿಸೂಚನೆ ಹೊರಡಿಸಿದ್ದೂ ಆಗಿದೆ. ಇದೀಗ ಡಿಪಿಆರ್‌ ಕೂಡ ಅನುಮೋದನೆ ಆಗಿದೆ. ಚುನಾವಣೆ ಘೋಷಣೆಗೂ ಕೆಲ ದಿನಗಳು ಬಾಕಿಯಿರುವಾಗ ಟೆಂಡರ್‌ ಕರೆಯಲಾಗಿದೆ. ಆದರೆ, ಟೆಂಡರ್‌ ಪ್ರಕ್ರಿಯೆ ಮುಗಿದಿಲ್ಲ.

ನಾಳೆ ಬೆಳಗ್ಗೆ 11 ಗಂಟೆಗೆಲ್ಲ ಸ್ಟೇಡಿಯಂ ಒಳಗೆ ಇರಬೇಕು: ಬಿಜೆಪಿ ಜೆಡಿಎಸ್ ನಾಯಕರಿಗೂ ಆಹ್ವಾನಿಸಿದ ಡಿಕೆಶಿ

ಈ ವಿಷಯವಾಗಿ ಕಾಂಗ್ರೆಸ್‌- ಬಿಜೆಪಿ ಪರಸ್ಪರ ಕಚ್ಚಾಡುತ್ತಲೇ ಇವೆ. 2007ರಲ್ಲಿ ಸೋನಿಯಾ ಗಾಂಧಿ ನೀಡಿದ್ದ ಹನಿ ನೀರು ನೀಡುವುದಿಲ್ಲ ಎಂಬ ಹೇಳಿಕೆ, ರೈತರ ಮೇಲೆ ಕಾಂಗ್ರೆಸ್‌ ಸರ್ಕಾರವಿದ್ದಾಗ ನಡೆದಿದ್ದ ಲಾಠಿಚಾಜ್‌ರ್‍ ಬಿಜೆಪಿಗೆ ಅಸ್ತ್ರವಾಗಿ ಬಳಸಿಕೊಂಡರೆ, ಚುನಾವಣೆ ಸಮೀಪ ಬಂದಾಗ ಟೆಂಡರ್‌ ಕರೆಯುವ ಮೂಲಕ ಜನರ ಕಣ್ಣಿಗೆ ಮರೆಚುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್‌ ಟೀಕಿಸಿತ್ತು.

ಇದೀಗ ಚುನಾವಣೆಯೆಲ್ಲ ಮುಗಿದು ಕಾಂಗ್ರೆಸ್‌ ಸರ್ಕಾರ(New congress government) ಆಡಳಿತಕ್ಕೆ ಬಂದಿದೆ. ಕಳಸಾ- ಬಂಡೂರಿ ಕೆಲಸ ಮಾಡುವ ಜವಾಬ್ದಾರಿ ಕಾಂಗ್ರೆಸ್‌ ಮೇಲಿದೆ. ಇದಕ್ಕೆ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಸಹಕಾರ ನೀಡಬೇಕು. ಅದು ಬಿಟ್ಟು ಮತ್ತೆ ಹಳೆ ಚಾಳಿಯಂತೆ ಬರೀ ಆಶ್ವಾಸನೆ ನೀಡುತ್ತಲೇ ಕಾಂಗ್ರೆಸ್‌ ಕಾಲ ಕಳೆಯಬಾರದು. ಕಳೆದ ನಾಲ್ಕೈದು ವರ್ಷದಿಂದ ಧರಣಿ ನಡೆಸುತ್ತಿರುವ ರೈತರು, ಜನರು ರೊಚ್ಚಿಗೇಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅದಕ್ಕೆ ಅವಕಾಶ ಕೊಡದೇ ಆಶ್ವಾಸನೆ ಈಡೇರಿಸುವತ್ತ ಕಾಂಗ್ರೆಸ್‌ ಗಮನ ಹರಿಸಬೇಕು.

ಬೆಣ್ಣಿಹಳ್ಳ- ತುಪರಿಹಳ್ಳ:

ಇನ್ನು ಧಾರವಾಡ, ಗದಗ ಜಿಲ್ಲೆಗಳನ್ನು ಪ್ರತಿವರ್ಷದ ಮಳೆಗಾಲದಲ್ಲಿ ಅತಿಯಾಗಿ ಹೈರಾಣು ಮಾಡುವುದು ಬೆಣ್ಣಿಹಳ್ಳ- ತುಪರಿಹಳ್ಳಗಳು. ಬೇಸಿಗೆಯಲ್ಲಿ ಮೈದಾನದಂತೆ ಕಾಣುವ ಈ ಎರಡು ಹಳ್ಳಗಳು ಮಳೆಗಾಲ ಬಂದರೆ ಸಾಕು ಉಗ್ರಾವತಾರ ತಾಳಿ ಜನ- ಪ್ರಾಣಿ ಸಂಕುಲವನ್ನೇ ನಡುಗಿಸುತ್ತದೆ. ಇದರಲ್ಲಿ ತುಪರಿಹಳ್ಳದ ಶಾಶ್ವತ ಪರಿಹಾರಕ್ಕೆ .312 ಕೋಟಿ ಯೋಜನೆ ಸಿದ್ಧಗೊಳಿಸಿ ಬಿಜೆಪಿ ಸರ್ಕಾರ ಚಾಲನೆ ನೀಡಿದೆ. ಆದರೆ, ಆ ಕಾಮಗಾರಿಗೆ ತ್ವರಿತಗತಿಯಲ್ಲಿ ಕೈಗೊಳ್ಳುವಂತಾಗಬೇಕು. ಇನ್ನು ಬೆಣ್ಣಿಹಳ್ಳಕ್ಕಾಗಿ .1300 ಕೋಟಿ ಯೋಜನೆ ಸಿದ್ಧಪಡಿಸಲಾಗಿದೆ. ಆದರೆ, ಈವರೆಗೂ ಸರ್ಕಾರದಿಂದ ಅನುಮೋದನೆ ಸಿಕ್ಕಿಲ್ಲ. ಅದಕ್ಕೂ ಅನುಮೋದನೆ ಕೊಡಿಸಿ ಚಾಲನೆ ನೀಡಬೇಕಿದೆ. ಈ ಕೆಲಸ ಕಾಂಗ್ರೆಸ್‌ ಮಾಡಲಿ ಎಂಬ ಬೇಡಿಕೆ ಜನರದ್ದು.

ಕಚೇರಿಗಳ ಸ್ಥಳಾಂತರ:

ಪ್ರಾದೇಶಿಕ ಅಸಮಾಧಾನದ ಕೂಗು ಮರೆಯಾಗಬೇಕೆಂದರೆ ಬೆಳಗಾವಿ ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕೆಲವೊಂದಿಷ್ಟುಕಚೇರಿ ಸ್ಥಳಾಂತರ ಮಾಡಬೇಕೆಂಬ ಬೇಡಿಕೆ ಬಹುವರ್ಷದ್ದು. ಆದರೆ, ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಆಗಿನ ಸಿಎಂ ಕುಮಾರಸ್ವಾಮಿ ಸಂಪುಟದಲ್ಲಿ ನಿರ್ಧರಿಸಿದ್ದರು. ಆದರೆ ಅಧಿಕಾರಿ ವರ್ಗ ಸರ್ಕಾರದ ಹಾದಿ ತಪ್ಪಿಸಿ ಜಾರಿಯಾಗದಂತೆ ನೋಡಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

Karnataka CM: ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನಗರ ಪೊಲೀಸ್ ಇಲಾಖೆ ಭರ್ಜರಿ ಮ್ಯಾಪಿಂಗ್!

ಆಗ ಈಗಿನ ಸಭಾಪತಿ ಬಸವರಾಜ ಹೊರಟ್ಟಿಕೂಡ ತಮ್ಮ ಅಸಮಾಧಾನ ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಹಾಗಂತ ಯಾವ ಕಚೇರಿಯೂ ಸ್ಥಳಾಂತರವಾಗಿಲ್ಲ ಅಂತೇನೂ ಇಲ್ಲ. ಕೆಲವೊಂದಿಷ್ಟುಕಚೇರಿ ಸ್ಥಳಾಂತರವಾಗಿವೆ. ಆದರೆ ಅವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಹ ಕಚೇರಿಗಳು. ಈ ಭಾಗದ ಅಭಿವೃದ್ಧಿಗೆ ಪೂರಕವಾಗುವ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರವಾಗಬೇಕೆಂಬ ಬೇಡಿಕೆ ಜನರದ್ದು. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಒಟ್ಟಿನಲ್ಲಿ ನೂತನ ಸರ್ಕಾರದ ಮೇಲೆ ಉತ್ತರ ಕರ್ನಾಟಕದ ಜನರ ನಿರೀಕ್ಷೆ ಬಹಳಷ್ಟಿದೆ.

Follow Us:
Download App:
  • android
  • ios