ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ ವಿಚಾರ ಬಗ್ಗೆ ಸರ್ಕಾರ ಯೋಚನೆ ಮಾಡುತ್ತಿದೆ. ನಾನೇನು ಒಕ್ಕಲಿಗರ ಪ್ರಮುಖ ನಾಯಕನಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. 

ಶಿವಮೊಗ್ಗ (ನ.29): ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ ವಿಚಾರ ಬಗ್ಗೆ ಸರ್ಕಾರ ಯೋಚನೆ ಮಾಡುತ್ತಿದೆ. ನಾನೇನು ಒಕ್ಕಲಿಗರ ಪ್ರಮುಖ ನಾಯಕನಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಅಶೋಕ್‌ ಅವರು ಈ ಬಗ್ಗೆ ಹಲವು ಬಾರಿ ಸಭೆಗಳನ್ನು ಕರೆದಿದ್ದಾರೆ. ಮುಂದೆ ಏನೂ ಆಗುತ್ತದೆ ಎಂದು ಕಾದು ನೋಡಬೇಕು ಎಂದರು.

ಮಹಾರಾಷ್ಟ್ರ ಗಡಿ ವಿಭಾಗಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟಭಿನ್ನಾಭಿಪ್ರಾಯಗಳಿವೆ. 2 ಕಡೆ ಎಡಿಜಿಪಿ ಮಟ್ಟದಲ್ಲಿ ಈಗಾಗಲೇ ಸಭೆ ನಡೆದಿದೆ. ಗಡಿಭಾಗದ ಅಧಿಕಾರಿಗಳು ಕೂಡ ಸಭೆ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಕಠಿಣಕ್ರಮ ಕೈಗೊಳ್ಳುತ್ತೇವೆ. ವಿಚ್ಛಿದ್ರ ಶಕ್ತಿಗಳಿಗೆ ಅವಕಾಶವಿಲ್ಲ. 42 ಗಡಿಭಾಗದ ಗ್ರಾಮದವರು ಕರ್ನಾಟಕಕ್ಕೆ ಸೇರ್ಪಡೆಗೊಳ್ಳಲು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಈ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ಈ ಪ್ರಕರಣವಿದ್ದು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಟೆರರ್‌ ಲಿಂಕ್‌ ಬಗ್ಗೆ ಕೇಂದ್ರ ತಂಡದ ಜತೆ ತನಿಖೆ: ಸಚಿವ ಆರಗ ಜ್ಞಾನೇಂದ್ರ

ಟಿಕೆಟ್‌ ಹೇಳಿಕೆ ಸ್ವಾಗತಾರ್ಹ: ನಾನು ಬಿ.ಎಸ್‌.ಯಡಿಯೂರಪ್ಪ ಅವರ ಗರಡಿಯಲ್ಲಿ ಬೆಳೆದವನು. ಅವರಿಗೆ ನನ್ನ ಮೇಲೆ ಪ್ರೀತಿ, ವಿಶ್ವಾಸ ಜಾಸ್ತಿ ಇದೆ. ಅಲ್ಲದೇ, ಮುಂದಿನ ಚುನಾವಣೆಗೆ ಟಿಕೆಟ್‌ ಕೊಡುವುದೇ ಅವರು. ನನ್ನ ಗೆಲುವು ನಿಶ್ಚಿತ ಎಂದಿದ್ದಾರೆಂದರೆ ನಾನು ಅದಕ್ಕೆ ಬದ್ಧ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

60 ವರ್ಷಗಳಿಂದ ಕಾಂಗ್ರೆಸ್‌ ಇತ್ತೋ, ಸತ್ತೊಗಿತ್ತೋ?: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಇಟ್ಟುಕೊಂಡು ಇವತ್ತು ಕಾಂಗ್ರೆಸ್‌ನವರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, 60 ವರ್ಷದಿಂದ ಈ ಸಮಸ್ಯೆ ಇದೆ. ಆಗ ಕಾಂಗ್ರೆಸ್‌ ಇತ್ತೋ, ಸತ್ತೋಗಿತ್ತೋ ಎಂದು ಜನ ಕೇಳ್ಬೇಕಾಗುತ್ತದೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ವರ್ಷದಿಂದ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗ್ಗೆ ಯೋಚಿಸಿದೆ. ಈಗ ಅಧಿಕಾರಕ್ಕಾಗಿ ಮುಳುಗಡೆ ಸಂತ್ರಸ್ತರ ಸಮಸ್ಯೆ ವಿರುದ್ಧ ಹೋರಾಟದ ಗಿಮಿಕ್‌ ಮಾಡುತ್ತಿದ್ದಾರೆ. 

ಆರೋಗ್ಯ ಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯ: ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗದಲ್ಲಿ ನಡೆಯುತ್ತಿರುವ ಪಾದಯಾತ್ರೆಯೂ ಕೇವಲ ಓಟಿನ ಬೇಟೆ, ಅದಕ್ಕಾಗಿ ಕಾಲ್ನಡಿಗೆ ಬೇರೆನೂ ಇಲ್ಲ ಎಂದು ಕುಟುಕಿದರು. ಆಗ ಕಾಂಗ್ರೆಸ್‌ ಕೇಂದ್ರದ ಅನುಮತಿ ಪಡೆಯದೇ ಡಿನೋಟಿಫಿಕೇಶನ್‌ ಮಾಡಲಾಗಿತ್ತು. ಹೈಕೋರ್ಚ್‌ ಇದನ್ನು ತಿರಸ್ಕರಿಸಿದೆ. ಈ ಬಗ್ಗೆ ಮೇಲ್ಮನವಿ ಸಲ್ಲಿಸುವ ಪ್ರಶ್ನೆಯೇ ಇಲ್ಲ. ಕೇಂದ್ರ ಸರ್ಕಾರದ ಗಮನಕ್ಕೆ ತಾರದೆ ಡಿನೋಟಿಫಿಕೇಶನ್‌ ಮಾಡಿದ್ದೇ ತಪ್ಪು. ನಾವು ಈ ಸಮಗ್ರ ಸರ್ವೆ ಮಾಡಿಸುತ್ತೇವೆ. ಒಟ್ಟಾರೆ ದಾಖಲೆ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಕಳಿಸುತ್ತೇವೆ. ಮತ್ತೆ ಕೇಂದ್ರದಿಂದ ವಾಪಸ್‌ ಬಾರದ ರೀತಿಯಲ್ಲಿ ಶಾಶ್ವತ ಪರಿಹಾರಕ್ಕೆ ಎಲ್ಲ ರೀತಿಯ ಪ್ರಯತ್ನ ಸರ್ಕಾರ ಮಾಡುತ್ತಿದೆ ಎಂದರು.