ಮೃತ ವ್ಯಕ್ತಿಯನ್ನ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಾಗ ಮುಕ್ತಿದಾಮದ ಶಾಂತಿವಾಹನ ರಸ್ತೆ ಮಧ್ಯೆ ಕೆಟ್ಟು ನಿಂತ ಘಟನೆ ಚಿಕ್ಕಮಗಳೂರು ನಗರದ ಶಂಕರಪುರದಲ್ಲಿ ನಡೆದಿದೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು (ಮಾ.13): ಮೃತ ವ್ಯಕ್ತಿಯನ್ನ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಾಗ ಮುಕ್ತಿಧಾಮದ ಶಾಂತಿವಾಹನ ರಸ್ತೆ ಮಧ್ಯೆ ಕೆಟ್ಟು ನಿಂತ ಘಟನೆ ಚಿಕ್ಕಮಗಳೂರು ನಗರದ ಶಂಕರಪುರದಲ್ಲಿ ನಡೆದಿದೆ. ಶಂಕರಪುರ ಮೂಲದ 60 ವರ್ಷದ ರವಿ ಎಂಬಾತ ಅನಾರೋಗ್ಯದ ನಿಮಿತ್ತ ಸಾವನ್ನಪ್ಪಿದ್ದರು. ಅವರ ಅಂತ್ಯ ಸಂಸ್ಕಾರಕ್ಕೆಂದು ಮೃತದೇಹವನ್ನ ಮುಕ್ತಿದಾಮಕ್ಕೆ ಹೋಗುವಾಗ ಶಾಂತಿವಾಹನ ರಸ್ತೆ ಮಧ್ಯೆಯೇ ಕೆಟ್ಟು ನಿಂತಿದೆ. ಬಳಿಕ ಮೃತನ ಸಂಬಂಧಿಕರು ಹಾಗೂ ಸ್ನೇಹಿತರು ಶಾಂತಿವಾಹನವನ್ನ ತಳ್ಳಿ ಸ್ಟಾರ್ಟ್ ಮಾಡಿದ್ದಾರೆ. 

ಮುಕ್ತಿವಾಹನವನ್ನು ತಳ್ಳಿ ಸ್ಟಾರ್ಟ್ ಮಾಡಿದ ಮೃತನ ಸಂಬಂಧಿಕರು: ಚಿಕ್ಕಮಗಳೂರು ನಗರದ ನಗರಸಭೆಯಲ್ಲಿ ಇರುವುದು ಒಂದೇ ಶಾಂತಿವಾಹನ. ಆ ವಾಹನದಲ್ಲಿ ಮೃತದೇಹವನ್ನ ಚಿತಾಗಾರಕ್ಕೆ ಸಾಗಿಸುವಾಗ ರಸ್ತೆ ಮಧ್ಯೆಯೇ ಹಲವು ಬಾರಿ ಕೆಟ್ಟು ನಿಂತಿದೆ. ಗಾಡಿ ಕೆಟ್ಟು ನಿಂತಾಗೆಲ್ಲಾ ಸಂಬಂಧಿಕರು ತಳ್ಳಿ ಸ್ಟಾರ್ಟ್ ಮಾಡಿದ್ದಾರೆ. ನಗರಸಭೆ ಅಧ್ಯಕ್ಷರು ಲಕ್ಷಾಂತರ ರೂಪಾಯಿ ಮೌಲ್ಯದ ಕಾರು ಖರೀದಿಸಿ ಓಡಾಡುತ್ತಾರೆ. ಆದರೆ, ನಗರಸಭೆ ಶಾಂತಿ ವಾಹನಕ್ಕೆ ಒಂದು ವ್ಯವಸ್ಥಿತವಾದ ಗಾಡಿಯನ್ನ ಕೊಟ್ಟಿಲ್ಲ ಎಂದು ಸ್ಥಳಿಯರು ನಗರಸಭೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಮೃತದೇಹವನ್ನ ಹೊತ್ತು ಹೊರಟ ಶಾಂತಿವಾಹನ ಕ್ರಿಶ್ಚಿಯನ್ ಸ್ಮಶಾನದವರೆಗೆ ಹೋಗುವಾಗ ಹತ್ತಾರು ಬಾರಿ ಕೆಟ್ಟು ನಿಂತಿದೆ. ರಸ್ತೆಯುದ್ದಕ್ಕೂ ಕೆಟ್ಟು ನಿಲ್ಲುತ್ತಿದ್ದ ವಾಹನವನ್ನ ಕಂಡು ರಸ್ತೆಯಲ್ಲಿದ್ದ ಜನಸಾಮಾನ್ಯರು ಕೂಡ ನಗರಸಭೆ ವಿರುದ್ಧ ವ್ಯಂಗ್ಯವಾಡಿದ್ದಾರೆ. 

ಪಿಎ​ಸ್‌ಐ ಹಗ​ರ​ಣ​ದಿಂದ ಪೊಲೀಸ್‌ ಹುದ್ದೆ​ಗಳು ಭರ್ತಿ​ಯಾ​ಗಿ​ಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ನಗರಸಭೆ ವಿರುದ್ದ ಜನಸಾಮಾನ್ಯರ ಹಿಡಿಶಾಪ: ಶಾಂತಿದಾಮದ ವಾಹನವನ್ನ ವ್ಯವಸ್ಥಿತವಾಗಿ ನಿರ್ವಹಣೆ ಮಾಡದ ನಗರಸಭೆ ಅಧಿಕಾರಿಗಳ ವಿರುದ್ಧ ಜನಸಾಮಾನ್ಯರು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ನಗರಸಭೆ ಅಧ್ಯಕ್ಷರು ಹಾಗೂ ಆಯುಕ್ತರು ಇತ್ತ ಗಮನ ಹರಿಸಿ ಶಾಂತಿವಾಹನ ಸಮಸ್ಯೆಗಳಿಗೆ ಮುಕ್ತಿ ಹಾಡಬೇಕಿದೆ. ಅಧ್ಯಕ್ಷರು 18-20 ಲಕ್ಷ ವಾಹನದಲ್ಲಿ ಒಡಾಡುತ್ತಾರೆ. ಆದರೆ, ಮನುಷ್ಯ ಹೋಗುವಾಗಲೂ ನೆಮ್ಮದಿಯಿಂದ ಕಳಿಸಲಾಗದ ಸ್ಥಿತಿ ನಗರದಲ್ಲಿ ಇದೆ. ಕೂಡಲೇ ನಗರಸಭೆ ಮುಕ್ತಿಧಾಮದ ಶಾಂತಿವಾಹನಕ್ಕೆ ಹೊಸ ವಾಹನ ನೀಡಬೇಕೆಂದು ಆಗ್ರಹಿಸಿದ್ದಾರೆ.