ಗುಡ್ ಬೈ 2018: ಸಿದ್ದುಗೆ ಸೋಲು- ಸಚಿವರಾದ ಜಿಟಿಡಿ, ಅರಮನೆ ನಗರಿಯಲ್ಲಾದ ಬೆಳವಣಿಗೆಗಳು!
ತವರು ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು, ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ನಗರಪಾಲಿಕೆ ಚುನಾವಣೆಯಲ್ಲಿ ಮತ್ತೆ ಅತಂತ್ರ ಫಲಿತಾಂಶ, ಮೈಸೂರು ವಿವಿಗೆ ಕೊನೆಗೂ ಕುಲಪತಿ ನೇಮಕ, ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಯುಜಿಸಿಯಿಂದ ಮರು ಮಾನ್ಯತೆ, ಕೆಆರ್ಎಸ್, ಕಬಿನಿಯಲ್ಲಿ ಪ್ರವಾಹ, ನಾಗರಹೊಳೆಯಲ್ಲಿ ಆನೆ ದಾಳಿಗೆ ಸಿಸಿಎ್ ಮಣಿಕಂಠನ್ ಬಲಿ.
ಇವು ಮೈಸೂರು ಜಿಲ್ಲೆಯಲ್ಲಿ 2018 ರಲ್ಲಿ ನಡೆದ ಪ್ರಮುಖ ಘಟನಾವಳಿಗಳು.
ವಿಧಾನಸಭಾ ಚುನಾವಣೆಯಲ್ಲಿ 2006ರ ಉಪ ಚುನಾವಣೆಯ ಬಳಿಕ ಸಿದ್ದರಾಮಯ್ಯ ಅವರು ಈ ಹಿಂದೆ ಐದು ಬಾರಿ ಗೆದ್ದಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜೆಡಿಎಸ್ನ ಜಿ.ಟಿ. ದೇವೇಗೌಡರ ಎದುರು ಸೋತರು. ಆದರೆ ಬಾದಾಮಿಯಲ್ಲಿ ಗೆದ್ದಿದ್ದರಿಂದ ಭಾರಿ ಮುಖಭಂಗ ತಪ್ಪಿತು. ಪುನಾರಾಯ್ಕೆಯಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್ ಮಂತ್ರಿಗಳಾದರು.
ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪ,ಕೆ. ವೆಂಕಟೇಶ್, ಮಾಜಿ ಶಾಸಕರಾ ಎಂ.ಕೆ. ಸೋಮಶೇಖರ್, ವಾಸು, ಕಳಲೆ ಕೇಶವಮೂರ್ತಿ, ಎಚ್.ಪಿ. ಮಂಜುನಾಥ್ ಸೋತರು, ಮಾಜಿ ಸಚಿವ ತನ್ವೀರ್ ಸೇಠ್ ಪುನಾರಾಯ್ಕೆಯಾದರು. ಡಾ.ಎಸ್. ಯತೀಂದ್ರ ಸಿದ್ದರಾಮಯ್ಯ, ಎಂ. ಅಶ್ವಿ ನ್ಕುಮಾರ್, ಬಿ. ಹರ್ಷವರ್ಧನ್, ಕೆ. ಮಹದೇವ್, ಅನಿಲ್ ಚಿಕ್ಕಮಾದು, ಎಲ್. ನಾಗೇಂದ್ರ ಮೊದಲ ಬಾರಿಗೆ ಗೆದ್ದರು. ಎಸ್.ಎ. ರಾಮದಾಸ್, ಎಚ್. ವಿಶ್ವನಾಥ್ ವಿರಾಮದ ನಂತರ ನಾಲ್ಕನೇ ಬಾರಿ ವಿಭಾನಸಭೆ ಪ್ರವೇಶಿಸಿದರು.
ಕಾಂಗ್ರೆಸ್ನಿಂದ ಗೆದ್ದಿದ್ದ ಭಾಗ್ಯವತಿ ಅವರು ಬಂಡಾಯವೆದ್ದು, ಜೆಡಿಎಸ್- ಬಿಜೆಪಿ ಬೆಂಬಲದಿಂದ ಮೇಯರ್ ಆಗಿ ಆಯ್ಕೆಯಾದರು. ಆದರೆ ಪಾಲಿಕೆಯ ಸಾರ್ವತ್ರಿಕ ಚುನಾವಣೆ ನಡೆದು, ಈ ಬಾರಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಮ್ಯಾಜಿಕ್ ಸಂಖ್ಯೆಗೆ ಬೇಕಾದ ನಂಬರ್ ಯಾರ ಬಳಿಯೂ ಇಲ್ಲದಿದ್ದರಿಂದ ಕಾಂಗ್ರೆಸ್- ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿದವು. ಕಾಂಗ್ರೆಸ್ನ ಪುಷ್ಪಲತಾ ಜಗ ನ್ನಾಥ್ ಮೇಯರ್, ಜೆಡಿಎಸ್ನ ಶಫಿ ಉಪ ಮೇಯರ್ ಆದರು. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಜಿಪಂ ಮಾಜಿ ಅಧ್ಯಕ್ಷ ಡಾ. ಪುಷ್ಪಾವತಿ ಅಮರನಾಥ್ ನೇಮಕವಾದರು. ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ, ಉಪಾಧ್ಯಕ್ಷ ಕೈಯಂಬಳ್ಳಿ ನಟರಾಜ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ವಾಪಸ್ ಪಡೆಯದಿದ್ದಲ್ಲಿ ಹೊಸಬರ ಆಯ್ಕೆ ನಡೆಯಲಿದೆ.
ಕುರ್ಚಿ ಅದಲು- ಬದಲು
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಡಿ. ರಂದೀಪ್ ನಂತರ ಕೆ.ಬಿ. ಶಿವಕುಮಾರ್, ದರ್ಪಣ್ ಜೈನ್ ಬಂದು, ಕೆಲ ದಿನಗಳಲ್ಲಿಯೇ ವರ್ಗವಾದರು. ಆದರೆ ನಂತರ ಬಂದ ಅಭಿರಾಮ್ ಜಿ. ಶಂಕರ್ ಮುಂದುವರೆದಿದ್ದಾರೆ.
ಮೈಸೂರು ವಿವಿಗೆ ಪ್ರೊ.ಕೆ.ಎಸ್. ರಂಗಪ್ಪ ನಂತರ ಕಾಯಂ ಕುಲಪತಿ ಇರಲಿಲ್ಲ. ಯಶವಂತ ಡೋಂಗ್ರೆ, ದಯಾನಂದ ಮಾನೆ, ಸಿ. ಬಸವರಾಜು, ನಿಂಗಮ್ಮ ಬೆಟ್ಸೂರ್, ಟಿ.ಕೆ. ಉಮೇಶ್, ಆಯೇಷ ಎಂ. ಹೀಗೆ ಹಂಗಾಮಿಗಳ ದರ್ಬಾರು ನಡೆದಿತ್ತು. ಕೊನೆಗೆ ಇದೇ ವಿವಿಯ ಪ್ರೊ.ಜಿ. ಹೇಮಂತಕುಮಾರ್ ಕಾಯಂ ವಿವಿಯಾಗಿ ನೇಮಕವಾದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಮರು ಮಾನ್ಯತೆ ಸಿಕ್ಕಿತು. ಕುಲಪತಿ ಪ್ರೊ.ಡಿ. ಶಿವಲಿಂಗಯ್ಯ ಅವರ ಮೂರು ವರ್ಷಗಳ ಅವಧಿ ಮುಕ್ತಾಯದ ಹಂತದಲ್ಲಿದ್ದು, ಮತ್ತೊಂದು ವರ್ಷಕ್ಕೆ ಮುಂದುವರೆಸುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ.
ಡಾ. ಸರ್ಮಂಗಳ ಶಂಕರ್ ನಂತರ ಸಂಗೀತ ವಿವಿಗೆ ಕಾಯಂ ಕುಲಪತಿ ನೇಮಕವಾಗಿದ್ದು, ಅಲ್ಲಿ ರಾಜೇಶ್ ಹಂಗಾಮಿ ಕುಲಪತಿ ಜಿಪಂ ಸಿಇಎ ಪಿ. ಶಿವಶಂಕರ್ ವರ್ಗವಾಗಿ ಅವರ ಸ್ಥಾನಕ್ಕೆ ಕೆ. ಜ್ಯೋತಿ ಬಂದರು. ಪಾಲಿಕೆ ಆಯುಕ್ತರಾಗಿ ಕೆ.ಎಚ್. ಜಗದೀಶ್ ಬಂದರು.
ಶ್ರೀ ಚಾಮರಾಜೇಂದ್ರ ಮೃಗಾಲಯ ನಿರ್ದೇಶಕ ಸಿ. ರವಿಶಂಕರ್ ವರ್ಗವಾಗಿ ಅಜಿತ್ ಕುಲಕರ್ಣಿ ಬಂದರು. ಐಜಿಪಿ ವಿಪುಲ್ಕುಮಾರ್ ಸ್ಥಾನಕ್ಕೆ ಕೆ.ವಿ. ಶರತ್ಚಂದ್ರ ಬಂದಿದ್ದಾರೆ.
ಕೆಆರ್ಎಸ್, ಕಬಿನಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಈ ಬಾರಿಯ ದಸರೆಗೆ ಇನ್ಶೋಸಿಸ್ನ ಡಾ. ಸು‘ಾ ಮೂರ್ತಿ ಚಾಲನೆ ನೀಡಿದರು.
ದಸರೆ ಅಂಗವಾಗಿ ನಡೆಸಿದ ಓಪನ್ ಸ್ಟ್ರೀಟ್ ೆಸ್ಟಿವಲ್ನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದ ಆರೋಪ ಕೇಳಿ ಬಂದಿತು.
ಗಣ್ಯರ ಭೇಟಿ
ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್ಪಿ ನಾಯಕಿ ಮಾಯಾವತಿ, ರಾಜ್ಯಪಾಲ ವಿ.ಆರ್. ವಾಲಾ, ಅಸಾವುದ್ದೀನ್ ಓವೈಸಿ, ಮೊದಲಾದ ಗಣ್ಯರು ನಗರಕ್ಕೆ ಭೇಟಿ ನೀಡಿದ್ದರು.
ಹೊಸ ಯೋಜನೆ- ಉತ್ಸವಗಳು
ಮೈಸೂರಿನಿಂದ ಹೊಸ ರೈಲುಗಳ ಸಂಚಾರಕ್ಕೆ ಚಾಲನೆ ಸಿಕ್ಕಿತು. ಎಂಡಿಎ ಲಲಿತಾದ್ರಿ ನಗರದಲ್ಲಿ ನಿವೇಶನಗಳ ಹಂಚಿಕೆ ಮಾಡಿತು.
ಕಣ್ಮರೆಯಾದವರು
ಮಾಜಿ ಶಾಸಕ ಎಚ್. ಗಂಗಾಧರನ್, ಖ್ಯಾತ ವೀಣವಾದಕ ಎಸ್. ಮಹದೇವಪ್ಪ, ಸಾಹಿತಿಗಳಾದ ಡಾ.ಪ್ರಭುಶಂಕರ, ಪ್ರೊ.ಜೆ.ಆರ್. ತಿಪ್ಪೇಸ್ವಾಮಿ, ಪ್ರೊ. ಶಿವರಾಂ ಕಾಡನಕುಪ್ಪೆ, ಡಾ.ಸಿ.ಎನ್. ಮೃತ್ಯುಂಜಯಪ್ಪ, ಡಾ.ಬಿ. ಸತೀಶ್ ರೈ, ಪ್ರೊ. ಎಂಐಕೆ ದುರಾನಿ, ಹಿರಿಯ ಪತ್ರಕರ್ತ ಟಿ. ವೆಂಕಟರಾಮ್, ಖಾದರ್ ನರ್ಹೋನ, ರಾಜಮನೆತನಕ್ಕೆ ಸೇರಿದ ಪುಟ್ಟರತ್ನಮ್ಮಣ್ಣಿ, ವಿಶಾಲಾಕ್ಷಿ ದೇವಿ, ವಕೀಲರಾದ ಬಿ. ರಾಧಾ,
ನಿಧನರಾದರು. ನಾಗರಹೊಳ ರಾಷ್ಟ್ರೀಯ ಉದ್ಯಾನದ ನಿರ್ದೇಶಕರಾಗಿದ್ದ ಮಣಿಕಂಠನ್ ಅವರು ಆನೆ ದಾಳಿಗೆ ಸಿಲುಕಿ ಸಾವಿಗೀಡಾದರು.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ, ಅಸ್ವಸ್ಥರಾದವರು ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರು. ಕೆಲವರು ಇಲ್ಲಿ ಕೊನೆಯುಸಿರೆಳೆದರು.
-ಅಂಶಿ ಪ್ರಸನ್ನಕುಮಾರ್