ರಾಜ್ಯದ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಗುವ ನಿರೀಕ್ಷೆ ಹೆಚ್ಚಾಗಿದೆ. ಕಲಬುರಗಿಯಲ್ಲಿ ರೈತರ ಸಾಲ ಮನ್ನಾ ಮಾಡುವ ಕುರಿತು ಸಿಎಂ ಡಿಕೆ ಶಿವಕುಮಾರ್ ಅವರು ಮಾತನ್ನಾಡಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡ್ತೀವಿ ಎಂದಷ್ಟೇ ಹೇಳಿದ್ದರೂ, ಅನ್ನದಾತರಿಗೆ ಸರ್ಕಾರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.
ಕಲಬುರಗಿ: ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರಗಾಲದ ಕರಿನೆರಳು ಆವರಿಸಿದೆ. ಮಳೆ ಬಾರದೆ ಕಂಗಾಲಾಗಿರುವ ರೈತರ ನೋವಿಗೆ ಸ್ಪಂದಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಕಲಬುರಗಿಯಲ್ಲಿ ಬಿಡುವಿಲ್ಲದ ಪ್ರವಾಸ ಕೈಗೊಂಡಿದ್ದಾರೆ. ಜನರ ಅಹವಾಲು ಸ್ವೀಕರಿಸುವ ವೇಳೆ ಸಿಎಂ, ನೀಡಿದ ಒಂದು ಭರವಸೆ ಈಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.
ಕೂಲ್ ಆಗಿಯೇ ಉತ್ತರಿಸಿದ ಸಿಎಂ!
ಅಹವಾಲು ಸ್ವೀಕಾರದ ವೇಳೆ ಒಂದು ನಾಟಕೀಯ ಘಟನೆ ನಡೆಯಿತು. ವ್ಯಕ್ತಿಯೊಬ್ಬರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವಾಗ ಎದೆ ಬಡಿದುಕೊಂಡು ಸಿಎಂ ಎದುರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬೆಳೆ ವಿಮೆ ಬಿಡುಗಡೆ ಮಾಡಿ, ರೈತರ ಸಾಲ ಮನ್ನಾ ಮಾಡಿ ಹಾಗೂ ನಿವೇಶನ ನೀಡಿ ಎಂದು ಕೂಗಾಡಿದರು. ಈ ವೇಳೆ ಗಾಬರಿಯಾಗದ ಡಿ.ಕೆ.ಶಿವಕುಮಾರ್ ಅವರು ಅತ್ಯಂತ ತಾಳ್ಮೆಯಿಂದ ಅಹವಾಲು ಕೊಡಿ, ಖಂಡಿತಾ ಪರಿಶೀಲನೆ ನಡೆಸುತ್ತೇನೆ ಎಂದು ಹೇಳುವ ಮೂಲಕ ಆಕ್ರೋಶಗೊಂಡಿದ್ದ ವ್ಯಕ್ತಿಯನ್ನು ಶಾಂತಗೊಳಿಸಿದರು.
ರೈತರ ಸಾಲ ಮನ್ನಾ ಆಗುತ್ತಾ?
ಬರಗಾಲ ಮತ್ತು ಸಾಲದ ಸುಳಿಗೆ ಸಿಲುಕಿರುವ ರೈತರಿಗೆ ಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಆಶಾದಾಯಕ ಮಾತುಗಳನ್ನಾಡಿದ್ದಾರೆ. ರೈತರ ಸಾಲ ಮನ್ನಾ ಮಾಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ. ಯಾರ ಸಾಲ? ಯಾವ ರೀತಿಯ ಸಾಲ? ಎಷ್ಟು ಮೊತ್ತದ ಸಾಲ? ಎಂಬ ಎಲ್ಲ ವಿವರಗಳನ್ನು ಪಡೆದು ಸಮಗ್ರವಾಗಿ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಈ ಹೇಳಿಕೆಯು ಸಾಲಬಾಧೆಯಲ್ಲಿರುವ ಅನ್ನದಾತನಿಗೆ ಸದ್ಯದಲ್ಲೇ ಸಿಹಿ ಸುದ್ದಿ ಸಿಗಬಹುದು ಎಂಬ ನಿರೀಕ್ಷೆ ಮೂಡಿಸಿದೆ.
ಕಬ್ಬು ಕೊಟ್ಟು ಮನವಿ ಮಾಡಿದ ರೈತರು!
ಇದೇ ವೇಳೆ ರೈತರು ಸಿಎಂಗೆ ಕಬ್ಬಿನ ಜಲ್ಲೆಗಳನ್ನು ನೀಡುವ ಮೂಲಕ ವಿಭಿನ್ನವಾಗಿ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಿ, ಉಜನಿ ಜಲಾಶಯದಿಂದ ನೀರು ಬಿಡಿಸಿ ಹಾಗೂ ಕಬ್ಬಿನ ದರವನ್ನು ತಕ್ಷಣವೇ ಹೆಚ್ಚಳ ಮಾಡಿ ಎಂದು ಒತ್ತಾಯಿಸಿದರು. ಕಲ್ಯಾಣ ಕರ್ನಾಟಕದ ರೈತರ ಸಂಕಷ್ಟವನ್ನು ಆಲಿಸಿದ ಸಿಎಂ, ಎಲ್ಲವನ್ನೂ ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು.
ಬರಗಾಲದ ಕುರಿತು ಹಿರಿಯ ಅಧಿಕಾರಿಗಳ ಮಹತ್ವದ ಸಭೆ
ಗುಲ್ಬರ್ಗಾ ವಿಶ್ವವಿದ್ಯಾಲಯದ ಅಂಬೇಡ್ಕರ್ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಿಭಾಗೀಯ ಮಟ್ಟದ ಅಧಿಕಾರಿಗಳ ಸಭೆ ಆರಂಭವಾಗಿದೆ. ಈ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಚಿವರು, ಶಾಸಕರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಭಾಗವಹಿಸಿದ್ದಾರೆ. ಮಳೆ ಇಲ್ಲದೆ ಕಂಗಾಲಾಗಿರುವ ರೈತರಿಗೆ ಯಾವ ರೀತಿಯ ಪರಿಹಾರ ನೀಡಬೇಕು ಮತ್ತು ಕುಡಿಯುವ ನೀರಿನ ಸಮಸ್ಯೆ ಹೇಗೆ ಬಗೆಹರಿಸಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯುತ್ತಿದೆ. ಇಂದಿನ ಸಭೆಯ ನಂತರ ಎರಡು ಮೂರು ದಿನಗಳಲ್ಲಿ ಬೆಳಗಾವಿಗೂ ತೆರಳಿ ಅಲ್ಲಿನ ಪರಿಸ್ಥಿತಿ ಪರಾಮರ್ಶೆ ನಡೆಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಒಟ್ಟಾರೆಯಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರ ಕಲಬುರಗಿ ಭೇಟಿಯು ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಸಾಲ ಮನ್ನಾ ರೂಪದಲ್ಲಿ ಯಾವುದಾದರೂ ದೊಡ್ಡ ಘೋಷಣೆ ಹೊರಬೀಳುತ್ತದೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.


