Asianet Suvarna News Asianet Suvarna News

ಕನ್ನಡ ಭಾಷೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ: ಮುರಳೀಧರ ಹಾಲಪ್ಪ

ಕೇಂದ್ರ ಸರಕಾರ ನಡೆಸುವ ರೈಲ್ವೆ, ಐಬಿಪಿಎಸ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸಿದರೆ, ಕರ್ನಾಟಕದ ಯುವ ಜನರು ನಿರುದ್ಯೋಗಿಗಳಾಗುವ ಸಂಖ್ಯೆ ಕಡಿಮೆಯಾಗಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.

Give opportunity to write competitive exam in Kannada language: Muralidhara Halappa snr
Author
First Published Nov 2, 2023, 9:05 AM IST

  ತುಮಕೂರು :  ಕೇಂದ್ರ ಸರಕಾರ ನಡೆಸುವ ರೈಲ್ವೆ, ಐಬಿಪಿಎಸ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸಿದರೆ, ಕರ್ನಾಟಕದ ಯುವ ಜನರು ನಿರುದ್ಯೋಗಿಗಳಾಗುವ ಸಂಖ್ಯೆ ಕಡಿಮೆಯಾಗಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.

ನಗರದ ಕೆ.ಲಕ್ಕಪ್ಪ(ಕಾಲ್‌ಟ್ಯಾಕ್ಸ್) ಸರ್ಕಲ್‌ನಲ್ಲಿ ಕರ್ನಾಟಕ ಸರ್ವ ಜನಾಂಗದ ಸಂರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ 68ನೇ ಕನ್ನಡ ರಾಜೋತ್ಸವ ಹಾಗೂ ಕರ್ನಾಟಕ ನಾಮಕರಣದ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನ ಮಾನ್ಯ ಮಾಡಿರುವ 22 ಭಾಷೆಗಳಲ್ಲಿ ಕನ್ನಡವೂ ಒಂದು. ಹಾಗಾಗಿ, ಕೇಂದ್ರ ಸರಕಾರ ಕನ್ನಡ ನಾಡಿನ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರೆ ಕರ್ನಾಟಕದ ಲಕ್ಷಾಂತರ ಮಕ್ಕಳಿಗೆ ಉದ್ಯೋಗ ದೊರೆಯಲಿದೆ. ಈ ನಿಟ್ಟಿನಲ್ಲಿ ಸಂಸದರು ಒಕ್ಕೂಟ ಸರಕಾರದ ಒತ್ತಡ ಹೇರಬೇಕಿದೆ ಎಂದರು.

ಮಾಜಿ ಶಾಸಕ ಹಾಗೂ ಎಐಸಿಸಿ ರಾಷ್ಟ್ರೀಯ ಸಂಯೋಜಕ ಡಾ.ರಫೀಕ್ ಅಹಮದ್ ಮಾತನಾಡಿದರು. ವೇದಿಕೆಯಲ್ಲಿ ಕರ್ನಾಟಕ ಸರ್ವಜನಾಂಗ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಬಾಬಾ, ರಾಜ್ಯ ಗೌರವಾಧ್ಯಕ್ಷ ಜಾವಿದ್ ಉಲ್ಲಾಖಾನ್ ಶಿರಾನಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಫರ್ಜಾನ ರಹೀಂ, ಜಿಲ್ಲಾ ಉಸ್ತುವಾರಿ ಅಹಮದ್, ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಸೈಯದ್ ಆಸ್ಗರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆದಿಲ್ ಪಾಷ, ಮುಖಂಡರಾದ ಇಕ್ಬಾಲ್ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಫಯಾಜ್, ಮಾಜಿ ಅಧ್ಯಕ್ಷ ಮೆಹಬೂಬ್ ಪಾಷ, ಪಾಲಿಕೆ ಸದಸ್ಯರಾದ ನಯಾಜ್, ಝೀಯಾ, ಸಮಾಜ ಸೇವಕರಾದ ರಿಜ್ವಾನ್, ನಟರಾಜು, ರಹೀಂ ಇದ್ದರು.

ವರ್ಷಪೂರ್ತಿ ಸುವರ್ಣ ಸಂಭ್ರಮದಲ್ಲಿ ಕರ್ನಾಟಕ 

ಹೊಸಪೇಟೆ (ನ.02): ಮೈಸೂರು ರಾಜ್ಯ ಕರ್ನಾಟಕವಾಗಿ ನಾಮಕರಣಗೊಂಡು 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ‘ಕರ್ನಾಟಕ ಸಂಭ್ರಮ-50’ ಹೆಸರಿನಲ್ಲಿ ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಸರ್ಕಾರ ಮುಂದಾಗಿದ್ದು, ಇದರ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಸಂಜೆ 5 ಗಂಟೆಗೆ ವಿಶ್ವವಿಖ್ಯಾತ ಹಂಪಿಯಲ್ಲಿ ಕರುನಾಡಿನ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಹಂಪಿಗೆ ಆಗಮಿಸಲಿರುವ ಸಿಎಂ, ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಗಂಗಾ ಜಲಾಭಿಷೇಕ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ದೇವಾಲಯದ ಪ್ರಾಂಗಣದಲ್ಲಿರುವ ಭುವನೇಶ್ವರಿ ದೇಗುಲದಲ್ಲಿ ಪಂಚಾಮೃತ ಅಭಿಷೇಕ ಸಹಿತ ಪೂಜೆ ನೆರವೇರಿಸುವರು. ನಂತರ, ವಿರೂಪಾಕ್ಷೇಶ್ವರ ರಥಬೀದಿಯಲ್ಲಿ ಜನಪದ ಕಲಾತಂಡಗಳೊಂದಿಗೆ ಕಾಲ್ನಡಿಗೆಯಲ್ಲೇ ಬಸವಣ್ಣ ಮಂಟಪ ವೇದಿಕೆಯವರೆಗೆ ಸಾಗಲಿದ್ದಾರೆ. ಈ ವೇಳೆ, ರಥ ಬೀದಿಯಲ್ಲಿ ಜಾನಪದ ಕಲಾ ತಂಡಗಳ ಮೆರವಣಿಗೆ, ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ನಡೆಯಲಿದೆ. ಬಳಿಕ, ಬಸವಣ್ಣ ಮಂಟಪ ವೇದಿಕೆಯಲ್ಲಿ ಜ್ಯೋತಿ ರಥಯಾತ್ರೆಗೆ ಸಿಎಂ ಚಾಲನೆ ನೀಡಲಿದ್ದಾರೆ.

ಸರ್ಕಾರಿ ಶಾಲೆಗಳಿಗಿನ್ನು ಉಚಿತ ವಿದ್ಯುತ್‌, ನೀರು: ಸಿದ್ದರಾಮಯ್ಯ ಘೋಷಣೆ

ಹಂಪಿಯಿಂದ ಹೊಸಪೇಟೆ, ಕೊಪ್ಪಳ ಮಾರ್ಗವಾಗಿ ಜ್ಯೋತಿ ರಥಯಾತ್ರೆ ಗದಗಕ್ಕೆ ತೆರಳಲಿದ್ದು ಶುಕ್ರವಾರ ಅಲ್ಲಿ ಕಾರ್ಯಕ್ರಮ ನಡೆಯಲಿದೆ. ಸುವರ್ಣ ಸಂಭ್ರಮ ನೆನಪಿನಲ್ಲಿ 50 ಕನ್ನಡ ಪುಸ್ತಕಗಳ ಬಿಡುಗಡೆ, 50 ಮಹಿಳೆಯರಿಗೆ ಸನ್ಮಾನ ಸಮಾರಂಭ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಅಲ್ಲಿಂದ ನಾಡಿನಾದ್ಯಂತ ಈ ಜ್ಯೋತಿ ರಥಯಾತ್ರೆ ಸಂಚರಿಸಿ, 2024ರ ಅಕ್ಟೋಬರ್‌ 31ರ ವೇಳೆಗೆ ಬೆಂಗಳೂರು ತಲುಪಲಿದೆ.

ಕಾರ್ಯಕ್ರಮದಲ್ಲಿ ಕನ್ನಡ ಗೀತೆಗಳ ಗಾಯನ ನಡೆಯಲಿದೆ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆ ಮೊಳಗಲಿದೆ. ಬಳಿಕ ಸರ್ವ ಧರ್ಮಗಳ ಸಂದೇಶ ನಡೆಯಲಿದ್ದು, ಸಿದ್ದರಾಮಯ್ಯನ ಹುಂಡಿಯ ಕಲಾವಿದರಿಂದ ವೀರ ಮಕ್ಕಳ ಕುಣಿತ ನಡೆಯಲಿದೆ. ಸಾಧುಕೋಕಿಲ ಮತ್ತು ತಂಡದವರಿಂದ ರಸಮಂಜರಿ ಕೂಡ ನಡೆಯಲಿದೆ. ಶಾಲಾ- ಕಾಲೇಜುಗಳ 5000ಕ್ಕೂ ಅಧಿಕ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವೇದಿಕೆ ಮುಂಭಾಗ 5000ಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಂಪಿಯಲ್ಲಿ ಕನ್ನಡ ಸಂಭ್ರಮ ಮನೆ ಮಾಡಿದ್ದು, ಕನ್ನಡ ಧ್ವಜದ ಬಣ್ಣಗಳಿಂದ ಹಂಪಿ ಮಂಟಪಗಳನ್ನು ಶೃಂಗರಿಸಲಾಗಿದೆ.

Follow Us:
Download App:
  • android
  • ios