ಕೋಲಾರ : ಪಶು ಇಲಾಖೆಯಿಂದ ರೈತರಿಗೆ ಕೋಳಿಗಳ ವಿತರಣೆ
ಗಿರಿರಾಜ ತಳಿಯನ್ನು ಸಾಕುವ ಮೂಲಕ ರೈತರು ಖರ್ಚಿಲ್ಲದೆ ಸುಲಭವಾಗಿ ಹಣ ಸಂಪಾದನೆ ಮಾಡುವ ಮೂಲಕ ಆರ್ಥಿಕ ಉನ್ನತಿ ಸಾಧಿಸಬೇಕೆಂದು ಕೋಲಾರ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹೇಳಿದರು.
ಕೋಲಾರ [ಸೆ.06]: ಹಿತ್ತಲ ಕೋಳಿಯಾಗಿ ಗಿರಿರಾಜ ತಳಿಯನ್ನು ಸಾಕುವ ಮೂಲಕ ರೈತರು ಖರ್ಚಿಲ್ಲದೆ ಸುಲಭವಾಗಿ ಹಣ ಸಂಪಾದನೆ ಮಾಡುವ ಮೂಲಕ ಆರ್ಥಿಕ ಉನ್ನತಿ ಸಾಧಿಸಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್ ಪ್ರಸಾದ್ ಹೇಳಿದರು.
ಇಲ್ಲಿನ ಪಶುಪಾಲನಾ ಇಲಾಖೆಯ ಆವರಣದಲ್ಲಿ ರೈತರಿಗೆ ಗಿರಿರಾಜ ತಳಿಯ ಆರು ವಾರದ ಮರಿಗಳನ್ನು ವಿತರಿಸಿ ಮಾತನಾಡಿ, ಒಂದು ಕೋಳಿಯಿಂದ ವರ್ಷಕ್ಕೆ ಸುಮಾರು 2500 ರು. ಸಿಗುತ್ತದೆ. ವರ್ಷಕ್ಕೆ ಸರಾಸರಿ 180 ಮೊಟ್ಟೆಇಡುವ ಗಿರಿರಾಜ ತಳಿ ಒಂದೇ ವರ್ಷದಲ್ಲಿ ಸುಮಾರು 9 ಕೆಜಿ ತೂಗುವುದರಿಂದಾಗಿ ಉಪ ಕಸುಬಾಗಿಯೂ ಸಾಕಣೆ ಮಾಡಬಹುದು ಎಂದು ತಿಳಿಸಿದರು.
ಜಿಲ್ಲಾ ಕೋಳಿ ಸಾಕಣೆ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಮಂಜುನಾಥ ರೆಡ್ಡಿ ಮಾತನಾಡಿ, 1970ರಿಂದಲೂ ಗಿರಿರಾಜ ತಳಿ ಅಭಿವೃದ್ಧಿ ಕೆಲಸವನ್ನು ಇಲಾಖೆ ಮುಂದುವರಿಸಿದ್ದು, ಹಲವಾರು ರೈತರು ಮುಖ್ಯ ಕಸುಬಾಗಿ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪ್ರತಿಯೊಬ್ಬ ಜಿಲ್ಲಾ ಪಂಚಾಯಿತಿ ಸದಸ್ಯರಿಗೂ 400 ಮರಿಗಳನ್ನು ವಿತರಿಸಲಾಗುತ್ತಿದ್ದು, ಅವರು ತಲಾ 4 ಮರಿಯಂತೆ 40 ಮಂದಿಗೆ ಹಂಚಬೇಕಿದೆ. ಇದರಲ್ಲಿ 16 ಎಸ್ಸಿ, ಎಸ್ಟಿಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುತ್ತಿದ್ದು, ಉಳಿದ 24 ಮಂದಿಗೆ ಮರಿ ಒಂದಕ್ಕೆ 20 ರು.ನಂತೆ ನಿರ್ವಹಣಾ ವೆಚ್ಚವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪಶು ವೈದ್ಯ ಇಲಾಖೆ ಉಪ ನಿರ್ದೇಶಕ ಡಾ.ಮಧುಸೂದನ್ ರೆಡ್ಡಿ, ಅಧೀಕ್ಷಕ ಡಾ.ವಿಶ್ವನಾಥ್, ಸಹಾಯಕ ನಿರ್ದೇಶಕ ಡಾ.ಆಂಜನೇಯರೆಡ್ಡಿ, ಮುಖಂಡರಾದ ಹೊನ್ನೇನಹಳ್ಳಿ ಕೃಷ್ಣಮೂರ್ತಿ, ಕೋಡಿಕಣ್ಣೂರು ನಾರಾಯಣಸ್ವಾಮಿ, ಹನುಮಂತಪ್ಪ, ಹೊಗರಿ ರವಿ, ರಮೇಶ್, ಹೂಹಳ್ಳಿ ವೆಂಕಟೇಶ್, ತಾಪಂ ಸದಸ್ಯ ಮಂಜುನಾಥ್ ಇದ್ದರು.