ಬಾರ್ಕೂರು ಸಮೀಪದ ಬೆಣ್ಣೆಕುದ್ರು ಸೇತುವೆಯ ಮೇಲೆ ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನೆಸ್ ಮತ್ತು ನೆಪ್ಚೂನ್ ಗ್ರಹಗಳು ಒಂದೇ ರೇಖೆಯಲ್ಲಿ ಬಂದ ಅಪರೂಪದ 'ಪ್ಲಾನೆಟರಿ ಪರೇಡ್' ನಡೆಯಿತು. ಖಗೋಳಾಸಕ್ತರು, ವಿದ್ಯಾರ್ಥಿಗಳು ಮತ್ತು ಸ್ಥಳೀಯರು ದೂರದರ್ಶಕದ ಮೂಲಕ ವಿಸ್ಮಯವನ್ನು ವೀಕ್ಷಿಸಿ ಸಂತಸಪಟ್ಟರು.
ಉಡುಪಿ: ಶನಿವಾರ ಸಂಜೆ ಬಾನಂಗಳದಲ್ಲಿ ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನೆಸ್ ಮತ್ತು ನೆಪ್ಚೂನ್ ಗ್ರಹಗಳು ಒಂದೇ ಸರಳರೇಖೆಗೆ ಬರುವ ಅಪರೂಪದ ವಿದ್ಯಾಮಾನ ಘಟಿಸಿತು. ಇದನ್ನು ಪ್ಲಾನೆಟರಿ ಪರೇಡ್ ಎಂದು ಬಾಹ್ಯಾಕಾಶ ತಜ್ಞರು ಕರೆದಿದ್ದು, ಈ ಗ್ರಹಗಳ ಪರೇಡ್ ವೀಕ್ಷಣೆಗೆ ಇಲ್ಲಿನ ಬಾರ್ಕೂರು ಸಮೀಪದ ಬೆಣ್ಣೆಕುದ್ರುನಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ಆಸಕ್ತರಿಗೆ ಈ ಗ್ರಹಗಳ ಪರೇಡ್ ದರ್ಶನ
ಶುಕ್ರ, ಗುರು, ಮಂಗಳ ಮತ್ತು ಶನಿ ಗ್ರಹಗಳು ಪ್ರಕಾಶಮಾನವಾಗಿ ಬರಿಗಣ್ಣಿಗೆ ಗೋಚರಿಸಿದರೆ, ಸೂರ್ಯನಿಂದ ತುಂಬಾ ದೂರದಲ್ಲಿರುವ ಯುರೇನಸ್ ಮತ್ತು ನೆಪ್ಚೂನ್ ವೀಕ್ಷಿಸಲು ಬೈನಾಕ್ಯುಲರ್ ಅಗತ್ಯವಿದೆ. ಆದ್ದರಿಂದ ದೂರದರ್ಶಕಗಳ ಅಭಿವೃದ್ಧಿಯಲ್ಲಿ ವಿಶೇಷ ಸಾಧನೆ ಮಾಡಿರುವ ಮಣಿಪಾಲದ ಎಂಐಟಿಯ ಉದ್ಯೋಗಿ ಆರ್. ಮನೋಹರ್ ಅವರು ಬೈನಾಕ್ಯಲರ್ ಟೆಲಿಸ್ಕೋಪ್ ನಲ್ಲಿ ಆಸಕ್ತರಿಗೆ ಈ ಗ್ರಹಗಳ ಪರೇಡ್ ದರ್ಶನ ಮಾಡಿಸಿದರು.
ಸಂಜೆ 6 ರಿಂದ ರಾತ್ರಿ 8ರ ವರೆಗೆ ನಡೆದ ವೀಕ್ಷಣೆ
ಬೆಣ್ಣೆಕುದ್ರುವಿನ ಶ್ರೀ ಕುಲಮಾಸ್ತ್ರೀ ಅಮ್ಮನವರ ದೇವಸ್ಥಾನದ ಬಳಿಯ ಸೇತುವೆ ಮೇಲೆ ಸಂಜೆ 6 ರಿಂದ ರಾತ್ರಿ 8ರ ವರೆಗೆ ನಡೆದ ಈ ವೀಕ್ಷಣೆಗೆ ಬಾರ್ಕೂರಿನ ಉದ್ಯಮಿ ವೆಂಕಟರಮಣ ಭಂಡಾರ್ಕರ್ ಅವರು ಚಾಲನೆ ನೀಡಿದರು. ಆರ್. ಮನೋಹರ್ ಈ ಸಂದರ್ಭದಲ್ಲಿ ಪ್ಲಾನೆಟರಿ ಪರೇಡ್ ಬಗ್ಗೆ ಮಾಹಿತಿ ನೀಡಿದರು.
ಈ ವಿಶೇಷ ಕಾರ್ಯಕ್ರಮದ ಸಂಘಟಕರಾದ ಸರಳೇಬೆಟ್ಟು ಗಣೇಶ್ರಾಜ್, ಬಾರ್ಕೂರು ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ಸತೀಶ್ ಎಸ್. ಅಮಿನ್, ಶಿಕ್ಷಕಿ ರಂಜಿತಾ ಮುಂತಾದವರು ಉಪಸ್ಥಿತರಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ಖಗೋಳ ಆಸಕ್ತರು, ಶಾಲಾ ವಿದ್ಯಾರ್ಥಿಗಳು, ಸ್ಥಳೀಯರು ಆಗಮಿಸಿ ಗ್ರಹಗಳ ಪರೇಡ್ ವೀಕ್ಷಿಸಿ ಸಂತಸಪಟ್ಟರು


