Asianet Suvarna News Asianet Suvarna News

ಗ್ರಾಮೀಣ, ಹಾಡಿ ಜನರ ದಸರಾ ದರ್ಶನ ಆರಂಭ

ಗ್ರಾಮೀಣ ಮತ್ತು ಹಾಡಿ ಜವರಿಗಾಗಿ ದಸರಾ ದರ್ಶನ ಉಪ ಸಮಿತಿಯು ಪ್ರತಿ ವರ್ಷದಂತೆ ಈ ಬಾರಿಯೂ ಮೂರು ದಿನಗಳ ದಸರಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಿದೆ. ದಸರಾ ದರ್ಶನಕ್ಕಾಗಿಯೇ ಸಚಿವ ವಿ. ಸೋಮಣ್ಣ ಅವರು ತಮ್ಮ ಟ್ರಸ್ಟ್‌ ಮೂಲಕ 5 ಲಕ್ಷವನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಹೀಗಾಗಿ ಜನರಿಗೆ ಉಚಿತ ಬಸ್‌ಪಾಸ್ ಒದಗಿಸಲಾಗಿದೆ.

free bus pass for village people to visit mysuru dasara
Author
Bangalore, First Published Oct 4, 2019, 9:56 AM IST

ಮೈಸೂರು(ಅ.30): ತಮ್ಮ ಸ್ವಂತ ವೆಚ್ಛದಲ್ಲಿ ಮೈಸೂರಿಗೆ ಬಂದು ದಸರಾ ನೋಡಲು ಸಾಧ್ಯವಾಗದ ಗ್ರಾಮೀಣ ಪ್ರದೇಶ ಮತ್ತು ಹಾಡಿ ಜನರು, ರೈತರು, ಮಹಿಳೆಯರು ಮತ್ತು ಮಕ್ಕಳನ್ನು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮೈಸೂರಿಗೆ ಕರೆ ತಂದು ದಸರಾ ದರ್ಶನ ಮಾಡಿಸುವ ಕಾರ್ಯಕ್ರಮವು ಗುರುವಾರ ಆರಂಭವಾಯಿತು.

ಮೈಸೂರು ಅಕ್ಕಪಕ್ಕದ ಜಿಲ್ಲೆಗಳಲ್ಲಿರುವ ಗ್ರಾಮೀಣ ಪ್ರದೇಶ, ಹಾಡಿ ಜನರು ಸಾವಿರಾರು ರುಪಾಯಿ ವೆಚ್ಚ ಮಾಡಿಕೊಂಡು ಮೈಸೂರಿಗೆ ಬಂದು ದಸರಾ ನೋಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಗ್ರಾಮೀಣ ಮತ್ತು ಹಾಡಿ ಜವರಿಗಾಗಿ ದಸರಾ ದರ್ಶನ ಉಪ ಸಮಿತಿಯು ಪ್ರತಿ ವರ್ಷದಂತೆ ಈ ಬಾರಿಯೂ ಮೂರು ದಿನಗಳ ದಸರಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಿದೆ.

ಮೈಸೂರು: ನೇಪಾಳ, ಮುಕ್ತಿನಾಥ್‌ಗೆ ಎಸಿ ರೈಲು ಪ್ರವಾಸ

ಕಳೆದ ವರ್ಷ ಫಲಾನುಭವಿಗಳಿಗೆ 50 ರಿಯಾಯಿತಿ ದರದ ಬಸ್‌ ಪಾಸ್‌ಗಳ ಮೊತ್ತವನ್ನು ಪಡೆಯಲಾಗಿತ್ತು. ಆದರೆ, ಈ ಬಾರಿ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರ ಸೂಚನೆಯ ಮೇರೆಗೆ ಉಚಿತವಾಗಿ ಬಸ್‌ ಪಾಸ್‌ ಒದಗಿಸಲಾಗುತ್ತಿದೆ. ದಸರಾ ದರ್ಶನಕ್ಕಾಗಿಯೇ ಸಚಿವ ವಿ. ಸೋಮಣ್ಣ ಅವರು ತಮ್ಮ ಟ್ರಸ್ಟ್‌ ಮೂಲಕ 5 ಲಕ್ಷವನ್ನು ಜಿಲ್ಲಾಡಳಿತಕ್ಕೆ ನೀಡಿದ್ದರು. ಇದರಿಂದಾಗಿ ಗ್ರಾಮೀಣ ಮತ್ತು ಹಾಡಿ ಜನರು ಈ ಹಾರಿ ಉಚಿತವಾಗಿ ದಸರಾ ದರ್ಶನ ಮಾಡುವ ಅವಕಾಶ ಸಿಕ್ಕಿದೆ.

5 ಜಿಲ್ಲೆಗಳ ಜನರಿಗೆ ದರ್ಶನ:

ಈ ಬಾರಿ ಅ.3, 4 ಮತ್ತು 5 ರಂದು ದಸರಾ ದರ್ಶನ ಏರ್ಪಡಿಸಲಾಗಿದ್ದು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಕೊಡಗು ಸೇರಿದಂತೆ 5 ಜಿಲ್ಲೆಗಳ ಒಟ್ಟು 11,150 ಜನರಿಗೆ ದಸರಾ ದರ್ಶನ ಮಾಡಿಸಲಾಗುತ್ತಿದೆ.

ಮೈಸೂರು ಜಿಲ್ಲೆಯ 8 ತಾಲೂಕು, ಮಂಡ್ಯ ಜಿಲ್ಲೆಯ 7, ಚಾಮರಾಜನಗರ ಜಿಲ್ಲೆಯ 5, ಹಾಸನ ಜಿಲ್ಲೆಯ 8 ಹಾಗೂ ಕೊಡಗು ಜಿಲ್ಲೆಯ 3 ತಾಲೂಕುಗಳಿಂದ ಪ್ರತಿ ದಿನ ಜನರನ್ನು 70 ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕರೆದುಕೊಂಡು ಬರಲಾಗುತ್ತದೆ. 5 ಜಿಲ್ಲೆಗಳ 31 ತಾಲೂಕುಗಳಿಂದ 210 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 11,150 ಜನರನ್ನು ಕರೆತಲಾಗುತ್ತದೆ.

ಮೈಸೂರು: ಮಹಿಷ ದಸರಾ ರದ್ದತಿ ಖಂಡಿಸಿ ಗ್ರಾಮೀಣ ದಸರಾಗೆ ಅಡ್ಡಿ

ಮೈಸೂರು ಜಿಲ್ಲೆ ಎಲ್ಲಾ ತಾಲೂಕುಗಳಿಂದ ಪ್ರತಿ ದಿನ ತಲಾ 3 ಬಸ್‌ಗಳಲ್ಲಿ ಹಾಗೂ ಉಳಿದ ಜಿಲ್ಲೆಗಳ ಎಲ್ಲಾ ತಾಲೂಕುಗಳಿಂದ ಪ್ರತಿ ದಿನ ತಲಾ 2 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ದಸರಾ ವೀಕ್ಷಿಸಲು ವೃದ್ಧರು, ಮಹಿಳೆಯರು, ಮಕ್ಕಳು ಮತ್ತು ಬಡತನ ರೇಖೆಗಿಂತ ಕಡಿಮೆ ಜನರನ್ನು ಕರೆತರಲು ಆಯಾ ತಾಲೂಕು ತಹಸೀಲ್ದಾರ್‌ಗಳು ಕ್ರಮ ವಹಿಸಿದ್ದಾರೆ. ದಸರಾ ದರ್ಶನಕ್ಕೆ ಬರುವವರನ್ನು ಮೈಸೂರು ಅರಮನೆ, ಮೃಗಾಲಯ, ರೈತ ದಸರಾ ಮತ್ತು ಚಾಮುಂಡಿಬೆಟ್ಟವನ್ನು ತೋರಿಸಲಾಗುತ್ತದೆ.

ದಸರಾ ದರ್ಶನಕ್ಕೆ ಹಸಿರು ನಿಶಾನೆ

ದಸರಾ ದರ್ಶನ ಕಾರ್ಯಕ್ರಮಕ್ಕೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಹಸಿರು ನಿಶಾನೆ ತೋರುವ ಮೂಲಕ ಗುರುವಾರ ಚಾಲನೆ ನೀಡಿದರು.

ಸಂಸದ ಪ್ರತಾಪ್‌ ಸಿಂಹ, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌, ದಸರಾ ದರ್ಶನ ಉಪ ಸಮಿತಿ ಅಧ್ಯಕ್ಷ ಎಸ್‌. ಮಹದೇವಯ್ಯ, ಉಪಾಧ್ಯಕ್ಷ ಬೋರೇಗೌಡ, ಕಾರ್ಯಾಧ್ಯಕ್ಷ ಆರ್‌. ಅಶೋಕ್‌ಕುಮಾರ್‌, ಕಾರ್ಯದರ್ಶಿ ದಶರಥ್‌, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ. ರಾಜೇಂದ್ರ ಮೊದಲಾದವರು ಇದ್ದರು.

ಅರಣ್ಯ ವ್ಯಾಪ್ತಿಯಲ್ಲಿ ವಾಸಿಸುವ ಹಾಡಿ ಜನರೂ ಸೇರಿದಂತೆ ಗ್ರಾಮೀಣ ಭಾಗದ ಬಡ ಜನರಿಗೆ ಈ ಬಾರಿ ಉಚಿತವಾಗಿ ದಸರಾ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಳೇ ಮೈಸೂರು ವ್ಯಾಪ್ತಿಯ ಐದು ಜಿಲ್ಲೆಗಳ 31 ತಾಲೂಕುಗಳ ಆದಿವಾಸಿಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಈ ದಸರಾ ದರ್ಶನ ಸೌಲಭ್ಯ ಒದಗಿಸಲಾಗಿದೆ. ಒಟ್ಟು 11,150 ಬಡಜನರಿಗೆ ದಸರಾ ದರ್ಶನ ಮಾಡಿಸುವ ಉದ್ದೇಶವಿದ್ದು, ದಸರೆಗೆ ಬರುವ ಜನರಿಗೆ ಮೈಸೂರಿನ ಅರಮನೆ, ಮೃಗಾಲಯ, ರೈತ ದಸರಾ ಹಾಗೂ ಚಾಮುಂಡಿ ಬೆಟ್ಟವೀಕ್ಷಿಸಲು ಅನುವು ಮಾಡಿಕೊಡಲಾಗಿದೆ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

-ಬಿ. ಶೇಖರ್‌ ಗೋಪಿನಾಥಂ

Follow Us:
Download App:
  • android
  • ios