* ಮೂವರು ಆಸ್ಪತ್ರೆಯಲ್ಲಿ, ಒಬ್ಬರು ಮನೆಯಲ್ಲಿ ಸಾವು* ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಚಿಕ್ಕಗುಂಜಳ ಗ್ರಾಮದಲ್ಲಿ ನಡೆದ ಘಟನೆ* ಮನೆಯ ಮೂವರು ಗಂಡು ಮಕ್ಕಳು ಕೊರೋನಾಗೆ ಸಾವು 

ಹುಬ್ಬಳ್ಳಿ(ಜೂ.04): ಕಳೆದ 10-15 ದಿನಗಳಲ್ಲಿ ಒಂದೇ ಕುಟುಂಬದ ನಾಲ್ವರು ಕೊರೋನಾಕ್ಕೆ ಬಲಿಯಾಗಿದ್ದಾರೆ. ಇದು ಇಡೀ ಕುಟುಂಬವನ್ನು ದುಃಖದಲ್ಲಿ ಮಡುವಿನಲ್ಲಿ ದೂಡಿದೆ. ಕುಂದಗೋಳ ತಾಲೂಕಿನ ಚಿಕ್ಕಗುಂಜಳ ಗ್ರಾಮದ ಹಿರೇತನದ ಎಂಬುವವರ ಮನೆಯಲ್ಲಿನ ತಾಯಿ, ಮೂವರು ಮಕ್ಕಳು ಕೊರೋನಾಕ್ಕೆ ಬಲಿಯಾಗಿದ್ದಾರೆ. ತಂದೆ ಆಸ್ಪತ್ರೆಯಲ್ಲಿದ್ದಾರೆ.

Add Asianetnews Kannada as a Preferred SourcegooglePreferred

ಹೇಗೆ ಬಂತು?:

ಈ ಮನೆಯ ಹಿರಿಯ ಸದಸ್ಯರಾದ 80 ವರ್ಷದ ನಿವೃತ್ತ ಶಿಕ್ಷಕರಿಗೆ ಕೊರೋನಾ ಕಾಣಿಸಿಕೊಂಡಿತ್ತು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರನ್ನು ಆರೈಕೆ ಮಾಡುತ್ತಿದ್ದರಿಂದ ಪತ್ನಿ ಶಾಂತಮ್ಮ (75) ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆನ್ನುವಷ್ಟರಲ್ಲೇ ಕೊನೆಯುಸಿರೆಳೆದಿದ್ದಾರೆ. ಬಳಿಕ ಎರಡು ದಿನಗಳಲ್ಲಿ ದೊಡ್ಡ ಮಗ ಮಂಜುನಾಥನಿಗೂ ಕೊರೋನಾ ದೃಢಪಟ್ಟಿದೆ. ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ 23 ಗ್ರಾಮಗಳು ಕೊರೋನಾ ಮುಕ್ತ..!

ಅದೇ ರೀತಿ ಎರಡನೆಯ ಮಗ ಅರವಿಂದ ಹಾಗೂ ಮೂರನೆಯ ಮಗ ಸುರೇಶ ಎಂಬುವವರೆಗೂ ಕೊರೋನಾ ಕಾಣಿಸಿಕೊಂಡಿದೆ. ಕಳೆದ 2 ದಿನ​ಗಳ ಹಿಂದೆ ಅರವಿಂದ, ಇಂದು ಗುರು​ವಾರ ಸುರೇಶ ಸಾವಿಗೀಡಾಗಿದ್ದಾರೆ. ಹೀಗೆ 10-15 ದಿನಗಳಲ್ಲಿ ತಾಯಿ ಹಾಗೂ ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ. ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಮೂವರು ಗಂಡು ಮಕ್ಕಳು ಮೃತಪಟ್ಟಂತಾಗಿದೆ.

ಮನೆಯಲ್ಲಿನ ಮೂವರು ಪುರುಷರು ಮೃತಪಟ್ಟಿರುವುದರಿಂದ ದಿಕ್ಕೆ ತೋಚದಂತಾಗಿದೆ ಎಂದು ಕುಟುಂಬದ ಸದಸ್ಯರು ಕಣ್ಣೀರು ಸುರಿಸುತ್ತಿದ್ದಾರೆ. ಸಾಂತ್ವನ ಹೇಳಲು ಕೂಡ ಯಾರು ಇವರ ಮನೆಯತ್ತ ಹೋಗದಿರುವುದು ಇವರ ಕಣ್ಣೀರು ಅರಣ್ಯ ರೋಧನದಂತಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona