ಮಂಡ್ಯ: ಹಂದಿ ಬೇಟೆಯಾಡಿದ ನಾಲ್ವರ ಬಂಧನ
ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ನಿಷೇಧಿಸಲಾಗಿದ್ದರೂ ಅಕ್ರಮವಾಗಿ ಮೃಗಬೇಟೆ ನಡೆಯುತ್ತಲೇ ಇರುತ್ತದೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಕಾಡು ಹಂದಿ ಬೇಟೆಯಾಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬೇಟೆಗೆ ಬಳಸಿದ ಬಂದೂಕು ಹಾಗೂ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಮಂಡ್ಯ(ಆ.28): ಬಂದೂಕು ಬಳಸಿ ಕಾಡು ಹಂದಿ ಬೇಟೆ ಮಾಡಿದ ಆರೋಪದ ಮೇಲೆ ನಾಲ್ವರನ್ನು ಶ್ರೀರಂಗಪಟ್ಟಣದ ಅರಕೆರೆ ಪೊಲೀಸರು ಬಂಧಿಸಿದ್ದಾರೆ. ಬೇಟೆಗೆ ಬಳಸಿದ ಬಂದೂಕು ಹಾಗೂ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬೆಂಗಳೂರಿನ ಚನ್ನಸಂದ್ರದ ರಮೇಶ (41) ನಾಗೇಶ್ (55) ತಿಮ್ಮರಾಯಪ್ಪ (60) ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಮೊಳೆಕೊಪ್ಪಲು ಗ್ರಾಮದ ಭೈರಪ್ಪ (38) ಬಂಧಿತರು. ನಾಲ್ಕು ಮಂದಿ ತಾಲೂಕಿನ ಗೊಬ್ಬರಗಾಲ ಬಳಿ ಕಾಡುಹಂದಿ ಬೇಟೆ ಆಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಮಂಡ್ಯ ಜಿಲ್ಲಾ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಬೇಟೆಗೆ ಬಳಸಿದ್ದ ಬಂದೂಕು ಹಾಗೂ ಗೂಡ್ಸ್ ವಾಹನ ವಶಪಡಿಸಿಕೊಂಡಿದ್ದಾರೆ. ರಕ್ಷಣೆಗಾಗಿ ಬಂದೂಕು ಬಳಸಲು ಲೈಸನ್ಸ್ ಪಡೆದು ಪ್ರಾಣಿ ಬೇಟೆಯಾಡಲು ಬಳಕೆ ಮಾಡಿಕೊಂಡಿದ್ದಾರೆ.
ದೊಡ್ಡಕೆರೆ, ಮಾರೇಹಳ್ಳಿ ಕೆರೆಗೆ ಶಾಸಕ ಡಾ.ಕೆ.ಅನ್ನದಾನಿ ಬಾಗಿನ
ವನ್ಯ ಜೀವಿ ಸಂರಕ್ಷಣೆ ಕಾಯ್ದೆ ಉಲ್ಲಂಘನೆ ಹಾಗೂ ಪ್ರಾಣಿ ಬೇಟೆಗೆ ಬಂದೂಕು ಬಳಕೆ ಮಾಡಿರುವ ಆರೋಪದ ಮೇಲೆ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ವರನ್ನು ನ್ಯಾಯಾಲಯ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.