ಪ್ರಧಾನಿ ಮೋದಿ ಯಾವುದಕ್ಕೆ ಕೈ ಹಾಕುತ್ತಾರೋ ಆ ಎಲ್ಲ ವ್ಯವಸ್ಥೆ ಭಸ್ಮವಾಗುತ್ತಿದೆ| ಅವರು ನೀಡಿದ್ದ ಕಪ್ಪುಹಣ ತಡೆ, ಭ್ರಷ್ಟಾಚಾರ, ನಕಲಿ ಹಣ ತಡೆ, 2 ಕೋಟಿ ಉದ್ಯೋಗ, ಬೆಲೆ ನಿಯಂತ್ರಣ ಭರವಸೆಗಳೆಲ್ಲ ವಿರುದ್ಧವಾಗಿ ನಡೆಯುತ್ತಿದೆ| ಜಿಎಸ್‌ಟಿ, ಅಮಾನ್ಯಿಕರಣದಿಂದ ದೇಶದ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ| ಸುಬ್ರಹ್ಮಣ್ಯ ಸ್ವಾಮಿಯವರೆ ಹೇಳಿದಂತೆ ಈ ಸಮಸ್ಯೆ ಇತ್ಯರ್ಥ ಪಡಿಸದಿದ್ದರೆ ಬಿಜೆಪಿ ಮುಕ್ತ ಭಾರತ ಸ್ಥಿತಿ ಬರಲಿದೆ|

ಹುಬ್ಬಳ್ಳಿ[ಡಿ.27]: ಪ್ರಧಾನಿ ನರೇಂದ್ರ ಮೋದಿ ಆಧುನಿಕ ಭಸ್ಮಾಸುರ ಎಂದು ಟೀಕೆ ಮಾಡಿರುವ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ದೇಶದ ನಿರುದ್ಯೋಗ, ಆರ್ಥಿಕ ಕುಸಿತ ಸಮಸ್ಯೆಯಿಂದ ಜನರ ಚಿತ್ತವನ್ನು ಭಾವನಾತ್ಮಕವಾಗಿ ಬೇರೆಡೆ ಸೆಳೆಯಲು ಸಿಎಎ, ಎನ್‌ಆರ್‌ಸಿ ಕಾಯಿದೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. 

Add Asianetnews Kannada as a Preferred SourcegooglePreferred

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಯಾವುದಕ್ಕೆ ಕೈ ಹಾಕುತ್ತಾರೋ ಆ ಎಲ್ಲ ವ್ಯವಸ್ಥೆ ಭಸ್ಮವಾಗುತ್ತಿದೆ. ಅವರು ನೀಡಿದ್ದ ಕಪ್ಪುಹಣ ತಡೆ, ಭ್ರಷ್ಟಾಚಾರ, ನಕಲಿ ಹಣ ತಡೆ, 2 ಕೋಟಿ ಉದ್ಯೋಗ, ಬೆಲೆ ನಿಯಂತ್ರಣ ಭರವಸೆಗಳೆಲ್ಲ ವಿರುದ್ಧವಾಗಿ ನಡೆಯುತ್ತಿದೆ. ಜಿಎಸ್‌ಟಿ, ಅಮಾನ್ಯಿಕರಣದಿಂದ ದೇಶದ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ. ವಿರೋಧ ಪಕ್ಷದವರು ಹೋಗಲಿ, ಅವರ ಪಕ್ಷದ ಹಿರಿಯರಾದ ಸುಬ್ರಹ್ಮಣ್ಯ ಸ್ವಾಮಿಯವರೆ ಹೇಳಿದಂತೆ ಈ ಸಮಸ್ಯೆ ಇತ್ಯರ್ಥ ಪಡಿಸದಿದ್ದರೆ ಬಿಜೆಪಿ ಮುಕ್ತ ಭಾರತ ಸ್ಥಿತಿ ಬರಲಿದೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೇಂದ್ರ ಸರ್ಕಾರವು ಸೈನ್ಯಕ್ಕೆ ನೀಡಬೇಕಿದ್ದ 1 ಲಕ್ಷ ಕೋಟಿ ಅನುದಾನ ನೀಡಿಲ್ಲ. ರಿಸರ್ವ್ ಬ್ಯಾಂಕಿನಿಂದ 1.75 ಲಕ್ಷ ಕೋಟಿ ಹಣ ಡ್ರಾ ಮಾಡಿಕೊಂಡಿದೆ. ಇದಲ್ಲದೆ, ರಾಜ್ಯಕ್ಕೆ ನೀಡಬೇಕಿರುವ 5600 ಕೋಟಿ ಜಿಎಸ್‌ಟಿ ಹಣವನ್ನೂ ಕೊಟ್ಟಿಲ್ಲ. ಇಂತಹ ಸ್ಥಿತಿಗೆ ಕೇಂದ್ರ ಸರ್ಕಾರ ತಲುಪಿದೆ. ಆದರೆ, ಕೇಂದ್ರದ ಈ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸಿಎಎ, ಎನ್‌ಆರ್‌ಸಿ ಕಾಯಿದೆ ಎಂದು ಜನತೆಯ ದಿಕ್ಕು ತಪ್ಪಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ ಎಂದರು. ಬಿಜೆಪಿ ಯುವ ನಾಯಕನೊಬ್ಬ ಅನಕ್ಷರಸ್ಥರ, ಪಂಕ್ಚರ್ ಹಾಕುವವರ ಹೋರಾಟ ಎಂಬ ಹೇಳಿಕೆ ನೀಡಿ ಕಾಯಕಯೋಗಿಗಳಿಗೆ ಅವಮಾನ ಮಾಡಿದ್ದಾರೆ. ಕನಿಷ್ಠ ಈ ಹೇಳಿಕೆ ನೀಡಿದವರು ಕ್ಷಮೆ ಕೇಳಿಲ್ಲ. ಇವೆಲ್ಲ ಬಿಜೆಪಿ ಮೈಂಡ್ ಸೆಟ್ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮಂಗಳೂರು ಘಟನೆಗೆ ಬಿಎಸ್‌ವೈ ಸರ್ಕಾರ ನೇರ ಹೊಣೆ. ಘಟನೆಯಲ್ಲಿ ಮೃತರಿಗೆ ಮೊದಲು ಅಧಿಕಾರಿಗಳು, ಸಂಬಂಧಿಕರಿಂದ ಮಾಹಿತಿ ಪಡೆದು 10 ಲಕ್ಷ ಪರಿಹಾರ ಘೋಷಿಸಿ ಬಳಿಕ ನಿರಾಕರಣೆ ಮಾಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ರಿಮೋಟ್ ಕಂಟ್ರೋಲ್‌ನಲ್ಲಿದ್ದಾರೆ ಎಂಬುದನ್ನು ತೋರಿಸುತ್ತದೆ. ಅಷ್ಟಕ್ಕೂ ಈ ಘಟನೆ ಗುಪ್ತಚರ ದಳದ ವೈಫಲ್ಯವಾಗಿದ್ದು, ರಾಜ್ಯ ಗುಪ್ತಚರದಳ ಜೀವಂತವಾಗಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದರು. 

ಅಧಿಕಾರಕ್ಕೆ ಬಂದ 24 ಗಂಟೆಯಲ್ಲೆ ಮಹದಾಯಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಬಿಎಸ್‌ವೈ ಹೇಳಿದ್ದರು. ಆದರೆ, ಒಂದು ಲವ್ ಲೆಟರ್ ತಂದಿದ್ದನ್ನು ಹೊರತುಪಡಿಸಿ ಅವರಿಂದ ಮತ್ತೇನೂ ಆಗಲಿಲ್ಲ. ಈ ಭಾಗದವಾಗಿ ಪ್ರಭಾವಿ ಸ್ಥಾನದಲ್ಲಿರುವ ಸಚಿವ ಪ್ರಹ್ಲಾದ ಜೋಶಿ ಹಾಗೂ ರಾಜ್ಯದ 26 ಸಂಸದರ ವೈಫಲ್ಯ ಇದಾಗಿದೆ. ಕುಡಿಯುವ ನೀರಿಗೆ ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳದ ಬಿಜೆಪಿ ಮಾನ ಮರ್ಯಾದೆ ಇಲ್ಲವೆಂದ ಅವರು, ಕೇಂದ್ರದಿಂದ ನೆರೆ ಪರಿಹಾರ ತಂದು ನೀಡದ ಸರ್ಕಾರ ಜನತೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಜನಶಕ್ತಿ ನಾಯಕನನ್ನು ಹುಟ್ಟು ಹಾಕಲಿದೆ ಹೋರಾಟದ ಕುರಿತಾಗಿ ಕಾಂಗ್ರೆಸ್‌ನಲ್ಲಿ ನಾಯಕರಿಲ್ಲಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಉಗ್ರಪ್ಪನವರು, ಸಿಎಎ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಯಾವುದೇ ಪಕ್ಷಗಳ ಪ್ರಾಯೋಜಕತ್ವ ಇಲ್ಲ. ಸರ್ಕಾರದ ವಿರುದ್ಧ ಹೋರಾಡಲು ಜನಶಕ್ತಿ ಜಾಗೃತವಾಗಿದೆ. ಈ ಜನಶಕ್ತಿಯೆ ನಾಯಕನನ್ನು ಹುಟ್ಟು ಹಾಕಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಅನೀಲಕುಮಾರ ಪಾಟೀಲ, ಅಲ್ತಾಪ ಹಳ್ಳೂರ, ಶಿವ ನಾಯಕ ಸೇರಿ ಇತರರಿದ್ದರು.