ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲವಾಗಿದೆ|ವಿದೇಶಗಳಲ್ಲಿ ಶೋಕಿ ಮಾಡುವ ಪ್ರಧಾನಿಗೆ ಪ್ರಕೃತಿ ವಿಕೋಪದಿಂದ ತತ್ತರಿಸಿದ ರಾಜ್ಯಕ್ಕೆ ಭೇಟಿ ನೀಡಲು ಸಮಯ ಇಲ್ಲವಾಗಿತ್ತು|ಯಡಿಯೂರಪ್ಪ ಪಕ್ಷದಲ್ಲಿನ ಗುಂಪುಗಳ ಸಮಸ್ಯೆ ಪರಿಹರಿಸುವುದರಲ್ಲಿಯೇ ತಲ್ಲಿನರಾಗಿದ್ದಾರೆಯೇ ಹೊರತು ಜನರ ನೋವು, ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಈ ಎಲ್ಲ ಕಾರಣಗಳಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ಗಾಳಿ ಬೀಸುತ್ತಿದೆ|ಉಪಚುನಾವಣೆ ನಡೆಯುತ್ತಿರುವ ಎಲ್ಲಾ 15 ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ| 

ರಾಣಿಬೆನ್ನೂರು(ನ.25): ರಾಜ್ಯದ ಜನತೆ ಉಪಚುನಾವಣೆ ಬಯಸಿರಲಿಲ್ಲ. ಸ್ವಾರ್ಥ ರಾಜಕಾರಣ ಮತ್ತು ಮತದಾರರು ನೀಡಿದ ಜನಾದೇಶವನ್ನು ಧಿಕ್ಕರಿಸಿ ಶಾಸಕರು ನೀಡಿದ ರಾಜೀನಾಮೆಯಿಂದಾಗಿ ಚುನಾವಣೆ ಉಂಟಾಗಿದೆ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಅವರು ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲವಾಗಿದೆ. ವಿದೇಶಗಳಲ್ಲಿ ಶೋಕಿ ಮಾಡುವ ಪ್ರಧಾನಿಗೆ ಪ್ರಕೃತಿ ವಿಕೋಪದಿಂದ ತತ್ತರಿಸಿದ ರಾಜ್ಯಕ್ಕೆ ಭೇಟಿ ನೀಡಲು ಸಮಯ ಇಲ್ಲವಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದಲ್ಲಿನ ಗುಂಪುಗಳ ಸಮಸ್ಯೆ ಪರಿಹರಿಸುವುದರಲ್ಲಿಯೇ ತಲ್ಲಿನರಾಗಿದ್ದಾರೆಯೇ ಹೊರತು ಜನರ ನೋವು, ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಈ ಎಲ್ಲ ಕಾರಣಗಳಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ಗಾಳಿ ಬೀಸುತ್ತಿದ್ದು ಉಪ ಚುನಾವಣೆ ನಡೆಯುತ್ತಿರುವ ಎಲ್ಲಾ 15 ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅನರ್ಹರನ್ನು ಮತ್ತೆ ಶಾಸಕರನ್ನಾಗಿ ಆಯ್ಕೆ ಮಾಡುವುದು ಸರಿಯಲ್ಲ. ಅನರ್ಹಗೊಂಡಿರುವ ಆರ್‌. ಶಂಕರ್‌ ಅವರಲ್ಲಿ ಆತ್ಮಸ್ಥೈರ್ಯ ಇಲ್ಲ. ಕೆಪಿಜೆಪಿಯಿಂದ ಆಯ್ಕೆಯಾಗಿದ್ದ ಅವರನ್ನು ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯನ್ನಾಗಿ ಮಾಡಲಾಗಿತ್ತು. ಆದರೂ ಅವರು ಕ್ಷೇತ್ರದ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದರು.

ಎಐಸಿಸಿ ವೀಕ್ಷಕ ಪ್ರಭಾಕರ ಮಾತನಾಡಿ, ಬಿಜೆಪಿಯವರು ಮೊದಲಿಗೆ ಸಮ್ಮಿಶ್ರ ಸರ್ಕಾರ ಪತನದಲ್ಲಿ ತಮ್ಮ ಪಾತ್ರವಿಲ್ಲ ಎನ್ನುತ್ತಿದ್ದರು. ಆದರೆ, ಇದೀಗ ಅವರಿಗೆಲ್ಲಾ ಬಿಜೆಪಿ ಟಿಕೆಟ್‌ ನೀಡಿದ್ದಾರೆ. ಇದರ ಬಗ್ಗೆ ಅವರು ಉತ್ತರ ನೀಡಬೇಕು. ಮಹಾರಾಷ್ಟ್ರದ ಘಟನಾವಳಿಗಳು ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಮುಜುಗರ ಪಡುವಂತಾಗಿದೆ. ಕಾಂಗ್ರೆಸ್‌ ಪಕ್ಷ 70 ವರ್ಷದಲ್ಲಿ ಏನು ಮಾಡಿದ್ದಾರೆ ಎನ್ನುತ್ತಾರೆ. ನಮ್ಮ ಪಕ್ಷ ಅಭಿವೃದ್ಧಿ ಜತೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜೀವಂತವಾಗಿಟ್ಟಿದೆ. ದೇಶದ ಹಣಕಾಸು ಪರಿಸ್ಥಿತಿ ಗಂಭೀರವಾಗಿದ್ದು ಜಿಡಿಪಿ ದರ ಕುಸಿತಗೊಂಡಿದೆ. ನಿರುದ್ಯೋಗ ಸಮಸ್ಯೆಗೆ ಯಾವುದೇ ಪರಿಹಾರ ರೂಪಿಸಲಾಗಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಕುಂದಗೋಳದ ಶಾಸಕಿ ಕುಸುಮಾ ಶಿವಳ್ಳಿ, ಪ್ರಕಾಶ ಕೋಳಿವಾಡ, ಸಣ್ಣತಮ್ಮಪ್ಪ ಬಾರ್ಕಿ ಸೇರಿದಂತೆ ಇತರರಿದ್ದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.