ಮದ್ದೂರಿನಲ್ಲಿ ಕೋಡಿ ಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹವಾಮಾನ ವೈಪರಿತ್ಯದಿಂದ ದೇಶಕ್ಕೆ ಅನ್ನ, ನೀರಿನ ಹಾಹಾಕಾರ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ, ಈ ಸಂಕಷ್ಟದಿಂದ ಕರ್ನಾಟಕಕ್ಕೆ ಯಾವುದೇ ದೊಡ್ಡ ಸಮಸ್ಯೆ ಉಲ್ಬಣವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮದ್ದೂರು: ಹವಾಮಾನ ವೈಪರಿತ್ಯಗಳಿಂದಾಗಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಅನ್ನ, ನೀರಿಗೆ ಹಾಹಾಕಾರ ಎದುರಾಗಲಿದೆ ಎಂದು ಶ್ರೀ ಕೋಡಿ ಮಠದ ಮಹಾ ಸಂಸ್ಥಾನದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

Add Asianetnews Kannada as a Preferred SourcegooglePreferred

ತಾಲೂಕಿನ ಚಾಮನಹಳ್ಳಿಯಲ್ಲಿ ನಡೆದ ಶ್ರೀಬಂಡೆ ಶನೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಮಹಾ ರಾಜಗೋಪುರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ದಿನದಿಂದ ದಿನಕ್ಕೆ ಹವಾಮಾನ ವೈಪರಿತ್ಯರಿಂದ ಪ್ರಕೃತಿಯಲ್ಲಿ ಏರುಪೇರಾಗುತ್ತಿದೆ. ಅಪಮೃತ್ಯುಗಳು ಹೆಚ್ಚಾಗಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಅನ್ನ, ನೀರಿನ ಹಾಹಾಕಾರದ ಸಮಸ್ಯೆಯಾಗಲಿದೆ. ಆದರೆ, ಕರ್ನಾಟಕಕ್ಕೆ ಯಾವುದೇ ರೀತಿಯ ಸಮಸ್ಯೆ ಉಲ್ಬಣವಾಗುವುದಿಲ್ಲ ಎಂದರು.

ಶ್ರೀಬಂಡೆ ಶನೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಕೋಡಿಶ್ರೀ

ಚಾಮನಹಳ್ಳಿಯ ಶ್ರೀಬಂಡೆ ಶನೇಶ್ವರಸ್ವಾಮಿಯ ಕ್ಷೇತ್ರಕ್ಕೆ ಆಗಮಿಸಿರುವುದು ನನ್ನ ಪುಣ್ಯ. ಶನೇಶ್ವರ ಸ್ವಾಮಿಯೂ ಪ್ರತಿಯೊಬ್ಬ ಮನುಷ್ಯನಿಗೂ ಗುರು ಸ್ಥಾನದಲ್ಲಿದ್ದು, ಸರಿ ತಪ್ಪುಗಳನ್ನು ತಿದ್ದಿ ಬುದ್ಧಿ ಸನ್ಮಾರ್ಗದಲ್ಲಿ ನಡೆಸಲಿದ್ದಾರೆ. ಈ ಕ್ಷೇತ್ರವು ಮತ್ತಷ್ಟು ಅಭಿವೃದ್ಧಿ ಹೊಂದಲು ದೇವರ ಅನುಗ್ರಹ ಮುಖ್ಯವಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸಾಕಷ್ಟು ದೈವಾರಾಧನೆಗಳು ನಡೆಯುತ್ತಿರುವ ಪರಿಣಾಮ ಮಳೆ, ಬೆಳೆಯಿಂದ ರಾಜ್ಯದ ಜನರು ದೈವಾರಾಧನೆಯ ಮೂಲಕ ಸಮೃದ್ಧಿ ಜೀವನ ನಡೆಸಲಿದ್ದಾರೆ ಎಂದರು.

ಬಂಡೆ ಶನೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಮಹಾ ರಾಜಗೋಪುರ ಉದ್ಘಾಟನೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು..

ಶನಿವಾರ ಬೆಳಗ್ಗೆಯಿಂದ ಅಭಿಷೇಕ, ಸುಪ್ರಭಾತ, ವೇದಪಾರಾಯಣ, ಕಲಶರಾಧನೆ, ಫಲ ಪಂಚಾಮೃತ ಹೋಮ, ಏಕವಾರ ರುದ್ರಾಭಿಷೇಕ ಮಧ್ಯಾಹ್ನ 12 ಗಂಟೆಗೆ ಮಹಾಕುಂಭಾಭಿಷೇಕ ಸೇರಿದಂತೆ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆದವು. ರಾತ್ರಿ ಶ್ರೀ ಛಾಯಾದೇವಿ ಅಮ್ಮ ಅವರ ಪುಜಾ ಕುಣಿತ, ಅಮ್ಮನವರಿಗೆ ಮಡಿಲಕ್ಕಿ ತುಂಬುವ ಕಾರ್ಯಕ್ರಮದ ನಂತರ ಗೀತಾ ಗಾಯನ ನಡೆಯಿತು.

ಇಂದು ಬೆಳಗ್ಗೆ 4 ಗಂಟೆಗೆ ಶನೇಶ್ವರಸ್ವಾಮಿ ಮುತ್ತಿನ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದು ಬೆಳಗ್ಗೆ 7 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ಏ.27ರ ಸೋಮವಾರ ಮರುಹಬ್ಬದ ಪ್ರಯುಕ್ತ ಆಶ್ರಯ ಬಡಾವಣೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಶ್ರೀ ಛಾಯಾದೇವಿ ಅಮ್ಮನವರ ಪೂಜಾ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ರಸಮಂಜರಿ ಹಾಗೂ ಅನ್ನ ಸಂತರ್ಪಣೆಯಲ್ಲಿ ಭಕ್ತಾದಿಗಳು ಆಗಮಿಸುವಂತೆ ಪ್ರಧಾನ ಅರ್ಚಕ ಕೃಷ್ಣಪ್ಪ ಮನವಿ ಮಾಡಿದ್ದಾರೆ.