Asianet Suvarna News Asianet Suvarna News

Udupi: ನಾಡದೋಣಿ ಮೀನುಗಾರರ ಬಗೆ ಹರಿಯದ ಸಂಕಷ್ಟ, ಸೀಮೆಎಣ್ಣೆಗೆ ಅಗ್ರಹಿಸಿ ಬೀದಿಗಿಳಿದ ಬೆಸ್ತರು

ನಾಡದೋಣಿ ಮೀನುಗಾರರ ಸೀಮೆಎಣ್ಣೆ ಸಮಸ್ಯೆಯ ಬಗ್ಗೆ ಅನೇಕ ಬಾರಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಮನವಿ ನೀಡಿ ಬೇಸತ್ತ ಮೀನುಗಾರರು ಉಡುಪಿ ಜಿಲ್ಲೆಯಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

fishermen protest demanding kerosene in Udupi gow
Author
First Published Dec 3, 2022, 3:43 PM IST

ಉಡುಪಿ (ಡಿ.3): ಕರಾವಳಿ ಭಾಗದಲ್ಲಿ ಮೀನುಗಾರಿಕೆ ಅತಿ ದೊಡ್ಡ ಉದ್ಯಮ. ಈ ಭಾಗದ ಆರ್ಥಿಕತೆಗೆ ಬೆನ್ನೆಲುಬೇ ಮೀನುಗಾರಿಕೆ ಅಂದರೂ ತಪ್ಪಲ್ಲ. ಯಂತ್ರಗಳನ್ನು ಬಳಸಿ ನಡೆಸುವ ಆಳ ಸಮುದ್ರ ಮೀನುಗಾರಿಕೆ ಸಾಕಷ್ಟು ಅಭಿವೃದ್ಧಿ ಕಂಡಿದೆ. ಆದರೆ ಸಾಂಪ್ರದಾಯಿಕ ರೀತಿಯಲ್ಲಿ ಮೀನುಗಾರಿಕೆ ನಡೆಸುವ ನಾಡ ದೋಣಿ ಮೀನುಗಾರರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ನಾಡದೋಣಿ ಮೀನುಗಾರರ ಸೀಮೆಎಣ್ಣೆ ಸಮಸ್ಯೆಯ ಬಗ್ಗೆ ಅನೇಕ ಬಾರಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಮನವಿ ನೀಡಿ ಬೇಸತ್ತ ಮೀನುಗಾರರು ಇಂದು ಬೈಂದೂರು ಹಾಗೂ ಕುಂದಾಪುರ ತಾಲೂಕು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಸುಮಾರು 5000ಕ್ಕೂ ಅಧಿಕ ಮೀನುಗಾರರು ಬೀದಿಗಿಳಿದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.

ಈ ವೇಳೆ ಬಹಳ ಮುಖ್ಯವಾದ ಐದು ಸಮಸ್ಯೆಗಳನ್ನು ಸರಕಾರದ ಮುಂದೆ ಇರಿಸಲಾಗಿದೆ. ಕರ್ನಾಟಕ ರಾಜ್ಯದ ಮೂರು ಜಿಲ್ಲೆಗಳಿಂದ 8030 ಸೀಮೆಎಣ್ಣೆ ರಹದಾರಿಗಳಿದ್ದು, ಪ್ರತಿ ರಹದಾರಿಗೂ 300 ಲೀಟರ್ ಸೀಮೆ ಎಣ್ಣೆಯಂತೆ, ಆಗಸ್ಟ್ ತಿಂಗಳಿಂದ ಮುಂದಿನ 10 ತಿಂಗಳು ನೀಡಲು ಸರಕಾರ ಆದೇಶ ಮಾಡಿದೆ. ಈಗಾಗಲೇ 3000 ಕೆ ಎಲ್ ಸೀಮೆ ಎಣ್ಣೆ ಕೇಂದ್ರದಿಂದ ಬಿಡುಗಡೆಯಾಗಿದ್ದರೂ, ಹಿಂದಿನವರೆಗೂ ನಾಡದೋಣಿ ಮೀನುಗಾರರಿಗೆ ಸಮರ್ಪಕವಾಗಿ ವಿತರಣೆ ಆಗಿಲ್ಲ. ಅದರಿಂದ ಈಗಾಗಲೇ ಬಿಡುಗಡೆಯಾಗಿರುವ ಸೀಮೆಎಣ್ಣೆ 15 ದಿನಗಳಲ್ಲಿ ಎಲ್ಲಾ ಮೀನುಗಾರರಿಗೂ ಸಿಗುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗದಿದ್ದರೂ ಇಂಡಸ್ಟ್ರಿಯಲ್ ಸೀಮೆಎಣ್ಣೆಯನ್ನು ಖರೀದಿ ಮಾಡಿ ಸಬ್ಸಿಡಿ ದರದಲ್ಲಿ ನಾಡದೋಣಿ ಮೀನುಗಾರರಿಗೆ ನಿಯಮಿತವಾಗಿ ನೀಡುವ ಮೂಲಕ ಶಾಶ್ವತ ಪರಿಹಾರ ನೀಡಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ. ಯಾವ ತಿಂಗಳಲ್ಲಿ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಸಿಮೆಎಣ್ಣೆ ಬಿಡುಗಡೆ ಯಾಗುವುದಿಲ್ಲವೋ, ಆ ತಿಂಗಳಲ್ಲಿ ಸೀಮೆಎಣ್ಣೆಯನ್ನು ಸ್ವತಹ ಖರೀದಿ ಮಾಡಿ ಸಬ್ಸಿಡಿ ದರದಲ್ಲಿ ಹಂಚಬೇಕು. ಈ ಬಗ್ಗೆ ಸರಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮೀನಿನ ಬಲೆಯಲ್ಲಿ ಸಿಲುಕಿದ ಡಾಲ್ಫಿನ್: ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು

ಉಡುಪಿ ಜಿಲ್ಲೆಯ ಶಿರೂರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಅಳಿವೆ ಕೂಡಿ, ಮುರುಡೇಶ್ವರ, ಹೊನ್ನಾವರದಲ್ಲಿ ಮೀನುಗಾರಿಕೆ ನಡೆಸಿದ ಬಲಿಕ ಅಲ್ಲಿಯೇ ದೋಣಿಗಳನ್ನು ಲಂಗರು ಹಾಕಲಾಗುತ್ತದೆ. ಕಳೆದ ಮಳೆಗಾಲದಲ್ಲಿ ಏಕಾಏಕಿ ಸುರಿದ ಗಾಳಿ ಮಳೆಗೆ ದೋಣಿ , ಬಲೆ, ಇಂಜಿನ್‌, ಫಿಶ್ ಫೈಂಡರ್ ಎಲ್ಲಾ ಸಲಕರಣೆಗಳು  ಮುಳುಗಿ ಸಮುದ್ರ ಪಾಲಾಗಿತ್ತು. ಅಂದಾಜು ಮೂರು ಕೋಟಿಗೂ ಅಧಿಕ ನಷ್ಟ ಉಂಟಾಗಿತ್ತು. ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಅತಿ ಹೆಚ್ಚು ಪರಿಹಾರ ನೀಡಬೇಕೆಂದು ಮೀನುಗಾರರು ಈ ವೇಳೆ ಒತ್ತಾಯಿಸಿದರು.

ಉಡುಪಿ: ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಮೀನುಗಾರರ ಯತ್ನ

ರಾಜ್ಯ ಸರ್ಕಾರದ ಮುಂದಿನ ಬಜೆಟ್ ನಲ್ಲಿ ನಾಡ ದೋಣಿ ಮೀನುಗಾರರ ಅಭಿವೃದ್ಧಿಗೊಂತಲೇ 250 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಸಬೇಕು ಎಂದು ಆಗ್ರಹಿಸಿದರು.

Follow Us:
Download App:
  • android
  • ios