ರಾತ್ರಿ ವೇಳೆ‌‌ ಮಾತ್ರ ಓಡಾಡುತ್ತಿರುವ ಚಿರತೆ ಜಾನುವಾರು ಹಾಗೂ ನಾಯಿಗಳನ್ನು ಭೇಟೆಯಾಡುತ್ತಿರುವುದು ಅನ್ನದಾತನ ತಲೆಬಿಸಿಗೆ ಕಾರಣವಾಗಿದೆ. ಯಡಹಳ್ಳಿ‌ ಚೀಂಕಾರ ರಕ್ಷತಾರಣ್ಯಕ್ಕೆ ಹೊಂದಿಕೊಂಡಿರುವ ತ್ರಿವಳಿ ಗ್ರಾಮಗಳಲ್ಲಿ ಇದೀಗ ಚಿರತೆ ಹಾವಳಿಯೇ ದೊಡ್ಡ ಚಿಂತೆಯಾಗಿದೆ. ಹೆಚ್ಚಿನ ರೈತರು ಜಮೀನುಗಳಲ್ಲಿ‌ವಾಸವಾಗಿರುವ ಕಾರಣ ಜೀವಭಯದಲ್ಲಿ‌ ಓಡಾಡುವಂತಾಗಿದೆ.  

ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಬಾಗಲಕೋಟೆ(ಜು.21): ಕಳೆದ ಹಲವು ದಿನಗಳಿಂದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕಿಶೋರಿ ಭಾಗದಲ್ಲಿ ಓಡಾಡುತ್ತಿರುವ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಿಶೋರಿ-ಮಂಟೂರ ಹಾಗೂ ಮೆಳ್ಳಿಗೇರಿ ಗ್ರಾಮಗಳ ಜಮೀನು ಪ್ರದೇಶದಲ್ಲಿ ಓಡಾಡುತ್ತಿರುವ ಚಿರತೆ ಇದುವರೆಗೂ ಪ್ರತ್ಯಕ್ಷವಾಗಿ ಯಾರ ಕಣ್ಣಿಗೂ ಕಂಡ ಉದಾಹರಣೆಯಿಲ್ಲವಾದರೂ ರಾತ್ರಿ ವೇಳೆ‌ ಮಾತ್ರ ಅರಣ್ಯ ಇಲಾಖೆ‌ ವತಿಯಿಂದ ಅಳವಡಿಸಿರುವ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ರೈತರ ನಿದ್ದೆಗೆಡಿಸುತ್ತಿದೆ. 

ರಾತ್ರಿ ವೇಳೆ‌‌ ಮಾತ್ರ ಓಡಾಡುತ್ತಿರುವ ಚಿರತೆ ಜಾನುವಾರು ಹಾಗೂ ನಾಯಿಗಳನ್ನು ಭೇಟೆಯಾಡುತ್ತಿರುವುದು ಅನ್ನದಾತನ ತಲೆಬಿಸಿಗೆ ಕಾರಣವಾಗಿದೆ. ಯಡಹಳ್ಳಿ‌ ಚೀಂಕಾರ ರಕ್ಷತಾರಣ್ಯಕ್ಕೆ ಹೊಂದಿಕೊಂಡಿರುವ ತ್ರಿವಳಿ ಗ್ರಾಮಗಳಲ್ಲಿ ಇದೀಗ ಚಿರತೆ ಹಾವಳಿಯೇ ದೊಡ್ಡ ಚಿಂತೆಯಾಗಿದೆ. ಹೆಚ್ಚಿನ ರೈತರು ಜಮೀನುಗಳಲ್ಲಿ‌ವಾಸವಾಗಿರುವ ಕಾರಣ ಜೀವಭಯದಲ್ಲಿ‌ ಓಡಾಡುವಂತಾಗಿದೆ. 

ಮನೆ ಬಾಗಿಲಿಗೆ ಬಂದ ಚಿರತೆಯನ್ನು ಬೀದಿ ನಾಯಿಯಂತೆ ಓಡಿಸಿದ ಮಹಿಳೆ

ದಿನವಿಡೀ ಅಜ್ಞಾತ ಸ್ಥಳದಲ್ಲಿ ಅವಿತುಕೊಳ್ಳುವ ಚಿರತೆ ರಾತ್ರಿಯಾದಂತೆ ಬೇಟೆಗೆ ಇಳಿಯುತ್ತದೆ. ಇದೂವರೆಗೆ ಎರಡು ಎಮ್ಮೆ ಕರು ಹಾಗೂ ಎರಡು ನಾಯಿಯನ್ನು ಕೊಂದು ತಿಂದಿರುವ ಚಿರತೆ ಮನುಷ್ಯರ ಕಣ್ಣಿಗೆ ಮಾತ್ರ ಬೀಳುತ್ತಿಲ್ಲ. ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆದಿರುವ ಕಾರಣ ಚಿರತೆಗೆ ಅವಿತುಕೊಳ್ಳಲು ಅನುಕೂಲವಾಗಿದೆ. ಚಿರತೆ ಸುಳಿವು ತಿಳಿಯುತ್ತಿದ್ದಂತೆ ಸೆರೆಹಿಡಿಯಲು ಅಖಾಡಕ್ಕೆ ಇಳಿದಿರುವ ಅರಣ್ಯ ಇಲಾಖೆ ಸಿಬ್ಬಂದಿ ದಿನವಿಡೀ ಪರಿಶ್ರಮ ಹಾಕುತ್ತಿದ್ದಾರೆ. ಆದರೆ ಇದುವರೆಗೂ ಚಿರತೆ ಮಾತ್ರ ಪ್ರತ್ಯಕ್ಷವಾಗಿ ಕಾಣದಿರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ.

ಇಲಾಖೆ ವತಿಯಿಂದ ಆಯ್ದ ಜಾಗದಲ್ಲಿ ಅಳವಡಿಸಿರುವ ಕ್ಯಾಮೆರಾದಲ್ಲಿ ರಾತ್ರಿಹೊತ್ತು ಕಾಣಿಸಿಕೊಳ್ಳುವ ಚಿರತೆ ಮಾತ್ರ ಗಸ್ತು ತಿರುಗುವಾಗ ಕಣ್ಣಿಗೆ ಬೀಳುತ್ತಿಲ್ಲ. ಎರಡು ಕಡೆಗಳಲ್ಲಿ ಚಿರತೆ ಬೋನಿಟ್ಟಿದ್ದರು ಅತ್ತ ಕಡೆ ಮಾತ್ರ ಸುಳಿಯುತ್ತಿಲ್ಲ. 8-10 ಜನರ ಇಲಾಖೆ ಸಿಬ್ಬಂದಿ ಪ್ರತಿನಿತ್ಯ ಚಿರತೆ ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ.