- Home
- Karnataka Districts
- ಕಾಫಿನಾಡಿನ ಹೋಟೆಲ್ಗಳಿಗೆ ಗ್ಯಾಸ್ ಸಂಕಷ್ಟ; ಕಳಸ, ಹೊರನಾಡಿಗೆ ಹೋದ ಪ್ರವಾಸಿಗರಿಗೆ ಊಟಕ್ಕೂ ಪರದಾಟ!
ಕಾಫಿನಾಡಿನ ಹೋಟೆಲ್ಗಳಿಗೆ ಗ್ಯಾಸ್ ಸಂಕಷ್ಟ; ಕಳಸ, ಹೊರನಾಡಿಗೆ ಹೋದ ಪ್ರವಾಸಿಗರಿಗೆ ಊಟಕ್ಕೂ ಪರದಾಟ!
ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಕಳಸ ಮತ್ತು ಹೊರನಾಡಿನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ತೀವ್ರ ಕೊರತೆ ಉಂಟಾಗಿದೆ. ಇದರಿಂದಾಗಿ ಹೋಟೆಲ್ಗಳು ಮುಚ್ಚಿದ್ದು, ಪ್ರತಿನಿತ್ಯ ಆಗಮಿಸುವ ಸಾವಿರಾರು ಯಾತ್ರಿಕರು ಮತ್ತು ಪ್ರವಾಸಿಗರು ಆಹಾರಕ್ಕಾಗಿ ಪರದಾಡುವಂತಾಗಿದೆ.

ಕಾಫಿನಾಡಿನ ಧಾರ್ಮಿಕ ಸ್ಥಳಕ್ಕೆ ಗ್ಯಾಸ್ ಟ್ರಬಲ್
ಚಿಕ್ಕಮಗಳೂರು (ಮಾ.17): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಕಳಸ ಮತ್ತು ಹೊರನಾಡಿನಲ್ಲಿ ಈಗ ಗ್ಯಾಸ್ ಸಿಲಿಂಡರ್ ಸಂಕಷ್ಟ ಎದುರಾಗಿದೆ. ಕಳೆದ ಒಂದು ವಾರದಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಹೋಟೆಲ್ ಮತ್ತು ಬೇಕರಿಗಳ ಒಲೆಗಳು ಆರಿಹೋಗಿವೆ. ಇದರಿಂದಾಗಿ ಈ ಭಾಗಕ್ಕೆ ಬರುವ ಸಾವಿರಾರು ಭಕ್ತಾದಿಗಳು ಹಾಗೂ ಪ್ರವಾಸಿಗರು ಹಸಿವಿನಿಂದ ಪರದಾಡುವಂತಾಗಿದೆ.
ಸ್ತಬ್ಧವಾದ ಹೋಟೆಲ್ ಉದ್ಯಮ:
ಕಳಸ ತಾಲ್ಲೂಕಿನಾದ್ಯಂತ ವಾಣಿಜ್ಯ ಸಿಲಿಂಡರ್ಗಳ ಕೊರತೆ ಎದುರಾಗಿದ್ದು, ಜನಸಾಮಾನ್ಯರ ಹಾಗೂ ವರ್ತಕರ ಬದುಕು ಅಕ್ಷರಶಃ ಬೀದಿಗೆ ಬೀಳುವಂತಾಗಿದೆ. ಹೋಟೆಲ್, ಕ್ಯಾಂಟೀನ್ ಮತ್ತು ಬೇಕರಿ ಮಾಲೀಕರು ಸಿಲಿಂಡರ್ ಇಲ್ಲದೆ ವ್ಯಾಪಾರ ನಡೆಸಲಾಗದೆ ಅನಿವಾರ್ಯವಾಗಿ ಅಂಗಡಿಗಳಿಗೆ ಬೀಗ ಜಡಿಯುತ್ತಿದ್ದಾರೆ. ಕಳೆದ ಏಳು ದಿನಗಳಿಂದ ಸಿಲಿಂಡರ್ ಪೂರೈಕೆಯಾಗದ ಕಾರಣ, ಪರ್ಯಾಯ ವ್ಯವಸ್ಥೆಯೂ ಇಲ್ಲದೆ ವ್ಯಾಪಾರಸ್ಥರು ಕೈಚೆಲ್ಲಿ ಕುಳಿತಿದ್ದಾರೆ.
ಯಾತ್ರಿಕರಿಗೆ ತಪ್ಪದ ಹಸಿವಿನ ಸಂಕಟ
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಕಳಸೇಶ್ವರ ದೇವಸ್ಥಾನ ಮತ್ತು ಪವಿತ್ರ ಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದೂರದ ಊರುಗಳಿಂದ ಬರುವ ಈ ಪ್ರವಾಸಿಗರಿಗೆ ಕಳಸವೇ ಮುಖ್ಯ ಕೇಂದ್ರವಾಗಿದೆ. ಆದರೆ, ಈಗ ಇಲ್ಲಿನ ಹೋಟೆಲ್ಗಳು ಮುಚ್ಚಿರುವುದರಿಂದ ಹಸಿವು ನೀಗಿಸಿಕೊಳ್ಳಲು ದಾರಿ ಕಾಣದೆ ಯಾತ್ರಿಕರು ಕಂಗಾಲಾಗಿದ್ದಾರೆ. ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಸ್ಥಿತಿ ಹೇಳತೀರದಾಗಿದೆ.
ಆರ್ಥಿಕ ನಷ್ಟದ ಭೀತಿ
ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಕಳಸ ಮತ್ತು ಹೊರನಾಡು ಭಾಗದ ವರ್ತಕರು ಈ ಬಿಕ್ಕಟ್ಟಿನಿಂದಾಗಿ ಆರ್ಥಿಕವಾಗಿ ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಸೀಸನ್ ಸಮಯದಲ್ಲಿ ವ್ಯಾಪಾರ ಕುಂಠಿತವಾಗಿರುವುದು ಅವರ ಆತಂಕಕ್ಕೆ ಕಾರಣವಾಗಿದೆ. ‘ನಾವು ಸಿಲಿಂಡರ್ಗಾಗಿ ಕಾಯುತ್ತಿದ್ದೇವೆ, ಆದರೆ ಪೂರೈಕೆದಾರರಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಹೀಗೇ ಮುಂದುವರಿದರೆ ನಮ್ಮ ಜೀವನೋಪಾಯವೇ ಕಷ್ಟವಾಗುತ್ತದೆ’ ಎಂದು ಸ್ಥಳೀಯ ಹೋಟೆಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಅಧಿಕಾರಿಗಳೇ ಗಮನಹರಿಸಿ
ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಆಹಾರ ಇಲಾಖೆಯ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಸಿಲಿಂಡರ್ ಪೂರೈಕೆಯನ್ನು ಸಹಜ ಸ್ಥಿತಿಗೆ ತರಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಈ ಗ್ಯಾಸ್ ಬಿಕ್ಕಟ್ಟು ಶೀಘ್ರದಲ್ಲೇ ಬಗೆಹರಿಯದಿದ್ದರೆ, ಈ ಭಾಗದ ಪ್ರವಾಸೋದ್ಯಮದ ಮೇಲೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ.
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

