ಈ ವರ್ಷ ಕರ್ನಾಟಕದಾದ್ಯಂತ ಮಾವಿನ ಮರಗಳು ಹೂವುಗಳಿಂದ ತುಂಬಿ ತುಳುಕುತ್ತಿದ್ದು, ರೈತರಲ್ಲಿ ಆರಂಭಿಕ ಸಂತಸ ಮೂಡಿಸಿದೆ. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಹೂವು ಮತ್ತು ಮಿಡಿಗಳು ಉದುರುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ಇಳುವರಿ ಕುಸಿತ ಮತ್ತು ಬೆಲೆ ಏರಿಕೆಯ ಭೀತಿ ಎದುರಾಗಿದೆ.

ಹಾವೇರಿ/ಬೆಂಗಳೂರು (ಫೆ.20) ರಾಮನಗರ, ಕೋಲಾರ, ಮೈಸೂರು, ಹಾವೇರಿ ಸೇರಿ ರಾಜ್ಯದೆಲ್ಲೆಡೆ ಈ ಸಲ ಮಾವಿನ ಮರಗಳು ಮೈತುಂಬ ಹೂವು ಹೊದ್ದು ನಿಂತಿವೆ. ಇದು ರೈತರ ಮೊಗದಲ್ಲಿ ಸಂತಸ ಮೂಡಿಸಿದ್ದರೆ, ಹವಾಮಾನ ವೈಪರೀತ್ಯದಿಂದ ಹೂವು ಹಾಗೂ ಮಾವಿನ ಮಿಡಿ ವಿಪರೀತ ಪ್ರಮಾಣದಲ್ಲಿ ಉದುರುತ್ತಿರುವುದು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಇಳುವರಿ ಕಡಿಮೆಯಾದರೆ, ಬೆಲೆ ದುಬಾರಿಯಾಗಿ, ಗ್ರಾಹಕರ ಜೇಬಿಗೆ ಹೊರೆಯಾಗುವ ಸಾಧ್ಯತೆ ಇದೆ.

ಹವಾಮಾನ ವೈಪರೀತ್ಯದಿಂದಾಗಿ (ಹಠಾತ್ ಮಳೆ, ಗಾಳಿ, ಬಿಸಿಲು) ರಾಮನಗರ, ಕೋಲಾರ, ಹಾವೇರಿ ಸೇರಿ ರಾಜ್ಯದ ಹಲವೆಡೆ ಮಾವಿನ ಮಿಡಿಗಳು ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತಿವೆ. ಹೂ ಬಿಡುವ ಮತ್ತು ಕಾಯಿ ಕಚ್ಚುವ ಹಂತದಲ್ಲಿ ಉಂಟಾದ ಹವಾಮಾನ ಬದಲಾವಣೆ, ಆಲಿಕಲ್ಲು ಮಳೆಯಿಂದ ಫಸಲು ಕುಂಠಿತವಾಗಿ, ಕಾಯಿಯ ಗುಣಮಟ್ಟವೂ ಕಳಪೆಯಾಗಿದ್ದು, ಬೆಳೆಗಾರರಿಗೆ ಕೋಟಿಗಟ್ಟಲೆ ನಷ್ಟ ಉಂಟಾಗುತ್ತಿದೆ. ರಾಮನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ಮಾವಿನ ಉತ್ಪಾದನೆ ತೀವ್ರವಾಗಿ ಕುಂಠಿತಗೊಂಡಿದೆ.

ಮಾವು ಬೆಳೆಗಾರರು ಪ್ರತಿವರ್ಷ ಹವಾಮಾನ ವೈಪರೀತ್ಯ, ಕೀಟ ಹಾಗೂ ರೋಗಬಾಧೆ, ಅಧಿಕ ಖರ್ಚು ಕಡಿಮೆ ಆದಾಯದಿಂದ ಒಂದಿಲ್ಲೊಂದು ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಆದರೆ, ಪ್ರಸಕ್ತ ವರ್ಷ ಮಾವಿನ ತೋಪುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂವುಗಳು ಕಂಡು ಬಂದಿದ್ದು, ಕೆಲವು ಕಡೆಗಳಲ್ಲಿ ಈಗಾಗಲೇ ಮಿಡಿಗಾಯಿ ಕಟ್ಟಿದೆ. ಜನವರಿ ಅಂತ್ಯದೊಳಗೆ ಚಳಿ ಮುಗಿದು ಬಿಸಿಲು ಬಿದ್ದರೆ ಕಾಯಿ ಕಟ್ಟುವ ಪ್ರಮಾಣ ಜಾಸ್ತಿಯಿರುತ್ತದೆ. ಆದರೆ, ಕೆಲವೆಡೆ, ಈ ಸಲ ಚಳಿ ಹೆಚ್ಚಾಗಿ ಹೂವುಗಳು ಉದುರುತ್ತಿರುವುದು, ಮಂಜು ಬೀಳುತ್ತಿರುವುದು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ಶಿಗ್ಗಾಂವಿ, ಹಾನಗಲ್‌ ಸೇರಿ ಇನ್ನು ಕೆಲವೆಡೆ ಮಾವಿನ ತೋಪುಗಳಲ್ಲಿ ಮರಗಳು ಕಾಯಿಕಟ್ಟುವ ಹಂತದಲ್ಲಿದ್ದು, ಬಿಸಿಲಿನ ತೀವ್ರತೆ ಹೆಚ್ಚಾಗಿ ಕಾಯಿಗಳು ಉದುರಿ ಬೀಳುತ್ತಿವೆ. ಮಾವು ಕೃಷಿ, ಹವಾಮಾನದೊಂದಿಗೆ ಆಡುವ ಜೂಜಾಟವಾಗಿದ್ದು, ಹೂವುಗಳು, ಕಾಯಿಗಳು ಉದುರುವುದು, ರೋಗಬಾಧೆ ನಿಯಂತ್ರಣಕ್ಕೆ ರೈತರು ಹತ್ತಾರು ಸಾವಿರ ರು.ಮೊತ್ತದ ಔಷಧಗಳನ್ನು ಸಿಂಪಡಿಸುವುದು ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ..

ಹಾವೇರಿ ಜಿಲ್ಲೆಯಲ್ಲಿ ಈ ಬಾರಿ ಮಾವಿನ ಮರಗಳಲ್ಲಿ ಹೂವುಗಳ ಪ್ರಮಾಣ ಅಧಿಕವಾಗಿದೆ. ಆದರೆ, ಜನವರಿಯಲ್ಲಿ ಚಳಿ ಹಾಗೂ ಇಬ್ಬನಿ ಹೆಚ್ಚಾಗಿದ್ದರಿಂದ ಮಾವಿನ ಮರದಲ್ಲಿದ್ದ ಹೂವುಗಳು ಉದುರುತ್ತಿರುವುದು ಕಂಡು ಬಂದಿದೆ. ರೋಗಬಾಧೆ, ಕೀಟಗಳ ನಿರ್ವಹಣೆ ಕುರಿತು ಭಿತ್ತಿಪತ್ರಗಳ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ರೋಗಬಾಧೆ ಕಾಣಿಸಿಕೊಂಡರೆ ತೋಟಗಾರಿಕಾ ಇಲಾಖೆಯ ತಜ್ಞರ ಸಲಹೆಯಂತೆ ರೈತರು ಔಷಧ ಸಿಂಪರಣೆ ಮಾಡಬೇಕು.

- ಎಸ್.ಎಚ್. ಬರಗಿಮಠ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಹಾವೇರಿ. 

YouTube video player