ಲಕ್ಷಾಂತರ ಲೀಟರ್ ಹಾಲು ಉಳಿಕೆ : ಹಾಲಿನ ದರ ಹೆಚ್ಚಳ
ರೈತರು ಉತ್ಪಾದಿಸಿದ ಹಾಲಿನಲ್ಲಿ ಲಕ್ಷಾಂತರ ಲೀಟರ್ ಹಾಲು ಉಳಿಕೆಯಾಗುತ್ತಿದ್ದು, ಉಳಿಕೆಯಾದ ಹಾಲಿನಲ್ಲಿ ಹಾಲಿನ ಪುಡಿ ತಯಾರಿಸಿ ಹಾಲಿಗೆ ಹೆಚ್ಚಿನ ದರ ಹಚ್ಚಳ ಮಾಡಲಾಗುತ್ತದೆ.
ತುರುವೇಕೆರೆ (ಆ.22): ಕೊರೋನಾ ಹಾಗೂ ಇನ್ನಿತರ ಕಾರಣಗಳಿಂದ ಹಾಲಿನ ಮಾರಾಟ ಕಡಿಮೆಯಾಗಿದೆ. ಪ್ರತಿದಿನ ಲಕ್ಷಾಂತರ ಲೀಟರ್ ಹಾಲು ಖರೀದಿಯಾಗದೇ ಉಳಿಯುತ್ತಿದೆ. ಉಳಿದ ಹಾಲನ್ನು ಪೌಡರ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ. ಪೌಡರ್ ಮಾರುಕಟ್ಟೆಯಲ್ಲಿ ಮಾರಾಟವಾದ ನಂತರ ರೈತರಿಗೆ ಹಾಲಿನ ದರ ಹೆಚ್ಚಳ ಮಾಡಲಾಗುತ್ತದೆ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಹೇಳಿದರು.
ತಾಲೂಕಿನ ದೇವನಾಯಕನ ಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ತಾವು ಅಧಿಕಾರ ವಹಿಸಿಕೊಂಡ ನಂತರ ಪ್ರತಿ ಲೀಟರ್ ಹಾಲಿಗೆ ಸುಮಾರು 6.50 ರು.ಗಳ ಹೆಚ್ಚಳ ಮಾಡಲಾಗಿದೆ. ಸದ್ಯ ಪ್ರತಿದಿನ ಸುಮಾರು 8.7 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ ಕೇವಲ 4.50 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದರೆ, ಉಳಿದ 4.20 ಲಕ್ಷ ಲೀಟರ್ ಹಾಲನ್ನು ಪೌಡರ್ ಆಗಿ ಮಾರ್ಪಾಡು ಮಾಡಲಾಗುತ್ತಿದೆ. ಸದ್ಯ 65 ಕೋಟಿಯಷ್ಟುಮೌಲ್ಯದ ಪೌಡರ್ ದಾಸ್ತಾನಿನಲ್ಲಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಹಾಲಿನ ಪೌಡರ್ಗೆ ಕೇವಲ 150 ರು. ಇರುವುದರಿಂದ ಒಕ್ಕೂಟಕ್ಕೆ ನಷ್ಟಸಂಭವಿಸುತ್ತಿದೆ. ಅದನ್ನು ತಡೆಯುವ ಸಲುವಾಗಿ ಉತ್ತಮ ಮಾರುಕಟ್ಟೆಬರುವ ತನಕ ಹಾಲಿನ ಪೌಡರನ್ನು ದಾಸ್ತಾನು ಮಾಡಲಾಗುತ್ತಿದೆ. ಹಾಗಾಗಿ ದರ ಕಡಿಮೆ ಮಾಡಲಾಗಿದೆ. ಪೌಡರ್ ಮಾರಾಟವಾದ ನಂತರ ಪುನಃ ಯಥಾ ಸ್ಥಿತಿಯಲ್ಲಿ ಹಾಲಿಗೆ ದರ ನೀಡಲಾಗುವುದು ಎಂದು ಮಹಲಿಂಗಯ್ಯ ಹೇಳಿದರು.
ಆಯುರ್ವೇದಿಕ್ ನಂದಿನಿ ಹಾಲು: ಕೊರೋನಾ ವಿರುದ್ಧ 5 ರೀತಿಯ ಹಾಲಿನ ಉತ್ಪನ್ನ.
ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು ಮಾತನಾಡಿ ಕೊರೋನಾ ಬಂದ ನಂತರ ನಗರಪ್ರದೇಶಗಳಲ್ಲಿದ್ದ ಜನರು ಗ್ರಾಮೀಣ ಪ್ರದೇಶಗಳಿಗೆ ವಲಸೆ ಬಂದಿದ್ದಾರೆ. ಬಹುಪಾಲು ಮಂದಿ ಹೈನುಗಾರಿಕೆಯನ್ನು ಅವಲಂಭಿಸಿರುವ ಕಾರಣ ಹಾಲು ಶೇಖರಣೆ ಹೆಚ್ಚಾಗಿದೆ. ಆದಾಗ್ಯೂ ಸಹ ರೈತರಿಗೆ ಹಾಲು ಒಕ್ಕೂಟ ಇಳಿಸಿರುವ ದರವನ್ನು ರದ್ದುಗೊಳಿಸಿ ಕೂಡಲೇ ಹೆಚ್ಚು ದರ ನೀಡಲು ಮುಂದಾಗಬೇಕು ಎಂದು ಹೇಳಿದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಕೊಬ್ಬರಿ ಬೆಲೆ ಸಂಪೂರ್ಣ ಕುಸಿದಿದೆ. ನೆಫೆಡ್ನಲ್ಲಿ 10300 ರೂಗಳಿಗೆ ಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರ ಒಂದು ಸಾವಿರ ರೂ ಪ್ರೋತ್ಸಾಹ ಧನ ನೀಡುತ್ತಿದೆ. ಆದಾಗ್ಯೂ ಸಹ ಕೊಬರಿಗೆ ವೈಜ್ಞಾನಿಕ ಬೆಲೆ ಕೊಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದೆ. ಕೂಡಲೇ ಎರಡೂ ಸರ್ಕಾರಗಳು ಸೇರಿ ಪ್ರತಿ ಕ್ವಿಂಟಾಲ್ ಕೊಬರಿಗೆ 15 ಸಾವಿರ ರೂಗಳನ್ನು ನೀಡಬೇಕೆಂದು ಆಗ್ರಹಿಸಿದರು.
ಕೆಮ್ಮು ಶೀತದ ರಾಮಬಾಣ ಅರಿಶಿನದ ಹಾಲು ಮಾಡುವ ಪರ್ಫೆಕ್ಟ್ ವಿಧಾನ
ಸಂಘದ ಅಧ್ಯಕ್ಷ ಡಿ.ಜಿ.ಗೋಪಾಲಯ್ಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಸುಬ್ರಾಯ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಪಂಚಾಯ್ತಿ ಸದಸ್ಯೆ ತೇಜಾವತಿ ನಾಗೇಶ್, ಎಪಿಎಂಸಿ ಅಧ್ಯಕ್ಷ ಮಧುಸೂಧನ್, ಸದಸ್ಯ ವಿಜಯೇಂದ್ರ ಕುಮಾರ್, ಪಟ್ಟಣ ಪಂಚಾಯ್ತಿ ಸದಸ್ಯ ನದೀಂ, ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೋಳಾಲ ಗಂಗಾಧರ್, ಗುತ್ತಿಗೆದಾರ ತ್ಯಾಗರಾಜು, ಗ್ರಾಮದ ಮುಖಂಡರಾದ ಉಮರ್, ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಚಂದ್ರಶೇಖರ್ ಬಿ.ಕೇದೂರಿನವರು, ವಿಸ್ತೀರ್ಣಾಕಾರಿಗಳಾದ ಮಂಜುನಾಥ್, ಕಿರಣ್ ಕುಮಾರ್, ದಿವಾಕರ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.