ವಾರ್ಡ್‌ ಮರು ವಿಂಗಡಣೆಕ್ಕೆ ಕೈ ಹಾಕದೆ ಮಳೆಗಾಲ ಮುಗಿಯುತ್ತಿದ್ದಂತೆ ಚುನಾವಣೆಗೆ ಒಲವು, ಸಮಿತಿ ಸಭೆಯಲ್ಲಿ ಸದಸ್ಯರ ಅಭಿಪ್ರಾಯ

ಬೆಂಗಳೂರು(ಜೂ.04): ಮತ್ತೆ ವಾರ್ಡ್‌ ಮರು ವಿಂಗಡಣೆಯ ಗೋಜಿಗೆ ಹೋಗದೇ, ವರ್ಷಾಂತ್ಯಕ್ಕೆ ಬಿಬಿಎಂಪಿಯ ಚುನಾವಣೆ ನಡೆಸುವುದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

Add Asianetnews Kannada as a Preferred SourcegooglePreferred

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಕೆಪಿಸಿಸಿಯಿಂದ ರಚಿಸಲಾದ ‘ಬಿಬಿಎಂಪಿ ಚುನಾವಣಾ ಪೂರ್ವ ತಯಾರಿ ಸಮಿತಿ’ಯ ಮೊದಲ ಸಭೆ ಶನಿವಾರ ಬಿಎಂಟಿಸಿ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆಸಲಾಯಿತು. ಈ ವೇಳೆ ಬಿಬಿಎಂಪಿಯ ಚುನಾವಣೆ ಸಾಧ್ಯವಾದಷ್ಟುಬೇಗ ನಡೆಸಬೇಕು. ಜೂನ್‌ನಿಂದ ಸೆಪ್ಟಂಬರ್‌ವರೆಗೆ ಮಳೆಗಾಲ ಇರಲಿದೆ. ಹೀಗಾಗಿ, ಮಳೆಗಾಲ ಮುಕ್ತಾಯಗೊಳ್ಳುತ್ತಿದಂತೆ ನವೆಂಬರ್‌ಗೆ ಬಿಬಿಎಂಪಿ ಚುನಾವಣೆ ನಡೆಸಬೇಕೆಂಬ ಅಭಿಪ್ರಾಯವನ್ನು ಸಮಿತಿ ಸದಸ್ಯರು ವ್ಯಕ್ತಪಡಿಸಿದ್ದಾರೆ.

ಪಾಲಿಕೆಯಿಂದ ಪಾಲಿಕೆಗೆ ಅನಧಿಕೃತ 34,541 ಕೋಟಿ ರೂ. ಫಲಕ ತೆರವು

ಮತ್ತೆ ವಾರ್ಡ್‌ ಮರು ವಿಂಗಡಣೆ ಬೇಡ:

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ವಾರ್ಡ್‌ಗಳನ್ನು ಮರು ವಿಂಗಡಣೆ ಮಾಡಿ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ, ಮತ್ತೆ ವಾರ್ಡ್‌ ಮರು ವಿಂಗಡಣೆಗೆ ಕೈಹಾಕಿ ಕಾಲಹರಣ ಮಾಡುವುದು ಬೇಡ. ಈಗಾಗಲೇ ಅಂತಿಮ ಗೊಂಡಿರುವ 243 ವಾರ್ಡ್‌ಗೆ ಚುನಾವಣೆ ನಡೆಸುವುದಕ್ಕೆ ಚಿಂತನೆ ನಡೆಸಲಾಗಿದೆ. ಇನ್ನು ಮೀಸಲಾತಿ ಅಂತಿಮಗೊಳಿಸುವುದು ಬಾಕಿ ಇದೆ. ಆ ಪ್ರಕ್ರಿಯೆ ಪೂರ್ಣಗೊಳಿಸಿ, ಸುಪ್ರೀಂ ಕೋರ್ಚ್‌ಗೆ ಈ ಬಗ್ಗೆ ಮಾಹಿತಿ ಸಲ್ಲಿಸಿ ನೇರವಾಗಿ ಚುನಾವಣೆ ಮಾಡುವುದು ಉತ್ತಮ ಎಂಬ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳು ಇಲ್ಲದೇ 32 ತಿಂಗಳಾಗಿದೆ. ಪಾಲಿಕೆಯಲ್ಲಿ ಸದಸ್ಯರು ಇಲ್ಲವಾದರೆ, ಅಭಿವೃದ್ಧಿಗೆ ತೊಡಕಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಬಿಬಿಎಂಪಿ ಚುನಾವಣೆ ನಡೆಸುವುದಕ್ಕೆ ಸೂಚಿಸಿದ್ದಾರೆ. ಹೀಗಾಗಿ, ಸಭೆ ನಡೆಸಿ ಸಮಿತಿಯ ಸದಸ್ಯರಿಂದ ಒಂದಿಷ್ಟುಸಲಹೆಗಳನ್ನು ಪಡೆಯಲಾಗಿದೆ. ಮತ್ತೊಂದು ಸುತ್ತಿನ ಸಭೆ ನಡೆಸಿ ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು: ಲೈಸನ್ಸ್‌ ಇಲ್ಲದೆ ಕೃಷಿ ಜಾಗದಲ್ಲಿ 7 ಅಂತಸ್ತಿನ ಕಾಲೇಜು ನಿರ್ಮಾಣ

ಸಭೆಯಲ್ಲಿ ತ್ವರಿತವಾಗಿ ಪಾಲಿಕೆ ಚುನಾವಣೆ ನಡೆಸಬೇಕೆಂಬ ಅಭಿಪ್ರಾಯವನ್ನು ಸದಸ್ಯರು ವ್ಯಕ್ತಪಡಿಸಿದ್ದಾರೆ. ಚುನಾವಣೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ಇದೆ. ಚುನಾವಣೆ ನಡೆಸುವ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ಕೊಟ್ಟು ಶೀಘ್ರದಲ್ಲಿ ಚುನಾವಣೆ ನಡೆಸುತ್ತೇವೆ ಎಂದರು.

ಸಭೆಯಲ್ಲಿ ಸಚಿವರಾದ ದಿನೇಶ್‌ ಗುಂಡೂರಾವ್‌, ಕೃಷ್ಣಬೈರೇಗೌಡ, ಕೆ.ಜೆ.ಜಾಜ್‌ರ್‍, ಶಾಸಕರಾದ ಎನ್‌.ಎ.ಹ್ಯಾರಿಸ್‌, ಎ.ಎಸ್‌.ಪೊನ್ನಣ್ಣ, ಮಾಜಿ ಮೇಯರ್‌ ಪಿ.ಆರ್‌.ರಮೇಶ್‌, ಜಿ.ಪದ್ಮಾವತಿ, ಮಾಜಿ ವಿಧಾನ ಪರಿಷತ್ತು ಸದಸ್ಯ ರಮೇಶ್‌ ಬಾಬು ಇದ್ದರು.