Asianet Suvarna News Asianet Suvarna News

ಎಲ್ಲ ಇಲಾಖೆಗಳಲ್ಲೂ ಇ-ಆಫೀಸ್‌ ಕಡ್ಡಾಯ

ಡಿಜಿಟಲೀಕರಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇ-ಆಫೀಸ್‌ ಅನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಇನ್ನು ಮುಂದೆ ಎಲ್ಲ ಇಲಾಖೆಗಳ ಕೆಲಸ-ಕಾರ್ಯಗಳು ಇ-ಆಫೀಸ್‌ನಲ್ಲಿಯೇ ನಿರ್ವಹಣೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಠಾರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

e office mandatory in chamarajnagar
Author
Bangalore, First Published Dec 18, 2019, 10:45 AM IST

ಚಾಮರಾಜನಗರ(ಡಿ.18): ಡಿಜಿಟಲೀಕರಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇ-ಆಫೀಸ್‌ ಅನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಇನ್ನು ಮುಂದೆ ಎಲ್ಲ ಇಲಾಖೆಗಳ ಕೆಲಸ-ಕಾರ್ಯಗಳು ಇ-ಆಫೀಸ್‌ನಲ್ಲಿಯೇ ನಿರ್ವಹಣೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಠಾರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸರ್ಕಾರದ ಸೂಚನೆಯಂತೆ ಸರ್ಕಾರಿ ಕಚೇರಿಗಳ ಎಲ್ಲ ಇಲಾಖೆಗಳು ಇ-ಆಫೀಸ್‌ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇದರಿಂದ ಸಮಯ ಉಳಿಯುವುದಲ್ಲದೇ, ಕೆಲಸಗಳು ಶೀಘ್ರವಾಗಿ ಪೂರ್ಣಗೊಳ್ಳಲಿವೆ. ಹೀಗಾಗಿ ಕಾರ್ಯಾಗಾರ ಆಯೋಜಿಸಿ, ಎಲ್ಲ ಅಧಿಕಾರಿಗಳಿಗೆ ಇ-ಆಫೀಸ್‌ ನಿರ್ವಹಿಸುವ ಬಗೆಗೆ ತರಬೇತಿ ನೀಡಬೇಕು. ಅಲ್ಲದೇ ಪ್ರತಿಯೊಂದು ಇಲಾಖೆಗಳಲ್ಲೂ ಇ-ಆಫೀಸ್‌ ತ್ವರಿತ ಜಾರಿಯಾಗಬೇಕು ಎಂದಿದ್ದಾರೆ.

ಸಾವಿನಲ್ಲಿ ಸಾರ್ಥಕತೆ: ಸತ್ತ ಮೇಲೂ ನಾಲ್ವರ ಜೀವ ಉಳಿಸಿದ..!

ಕೃಷಿ ಇಲಾಖೆಯ ಯೋಜನೆಗಳ ಅನುಷ್ಟಾನದ ಕುರಿತು ಪರಿಶೀಲಿಸಿದ ಕಠಾರಿಯಾ ಅವರು ರೈತರಿಗೆ ಸರ್ಕಾರಿ ಯೋಜನೆಗಳ ಸೌಲಭ್ಯ ದೊರೆಯುವಂತಾಗಲು, ಬ್ಯಾಂಕ್‌ ಅಕೌಂಟ್‌ಗೆ ಆಧಾರ್‌ ಲಿಂಕ್‌ ಆಗಿರುವುದು ಅವಶ್ಯ. ಹೀಗಾಗಿ ಜಿಲ್ಲೆಯ ಪ್ರತಿಯೊಬ್ಬ ರೈತರು ತಮ್ಮ ಖಾತೆಗೆ ಆಧಾರ್‌ ಜೋಡಣೆ ಮಾಡಿರುವ ಕುರಿತು ಪರಿಶೀಲನೆ ನಡೆಸಬೇಕು. ಮಾರ್ಗದರ್ಶಿ ಬ್ಯಾಂಕ್‌ ವ್ಯವಸ್ಥಾಪಕರು ವಿಶೇಷ ಗಮನ ತೆಗೆದುಕೊಂಡು ಆಧಾರ್‌ ಜೋಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದ್ದಾರೆ.

ಸಾವಿನಲ್ಲಿ ಸಾರ್ಥಕತೆ: ಸತ್ತ ಮೇಲೂ ನಾಲ್ವರ ಜೀವ ಉಳಿಸಿದ..!

ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯಡಿ ಇನ್ನೂ ನೋಂದಣಿಯಾಗದ ಜಿಲ್ಲೆಯ ರೈತರನ್ನು ಗುರುತಿಸಿ, ಅವರನ್ನು ಯೋಜನೆಯಡಿ ಸೇರುವಂತೆ ಮಾಡಬೇಕು. ಜತೆಗೆ ಯೋಜನೆಯಲ್ಲಿ ತಿರಸ್ಕೃತವಾದ ಅರ್ಜಿದಾರರಿಗೆ ಅಗತ್ಯ ಮಾರ್ಗದರ್ಶನ ನೀಡಿ ಮತ್ತೊಮ್ಮೆ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು. ಅಲ್ಲದೇ ಗ್ರಾಮ ಮಟ್ಟದಿಂದ ಕಿಸಾನ್‌ ಯೋಜನೆಯ ಪ್ರಯೋಜನೆಗಳ ಕುರಿತು ಪ್ರಚಾರ ನೀಡಬೇಕು ಎಂದು ಹೇಳಿದರು.

ವಿಶೇಷ ಘಟಕ, ಗಿರಿಜನ ಉಪ ಯೋಜನೆಯಡಿ ಪ್ರತಿ ಇಲಾಖೆಗಳು ನಿಗದಿಪಡಿಸಲಾಗಿರುವ ಗುರಿ ಅನ್ವಯ ಸಾಧನೆ ಮಾಡಬೇಕು. ನಿಗದಿತ ಗುರಿಗಿಂತ ಕಡಿಮೆ ಸಾಧನೆ ಮಾಡಿರುವ ಇಲಾಖೆಗಳ ಬಗ್ಗೆ ವಿಶೇಷ ಒತ್ತು ನೀಡಿ ಕಾರ್ಯಕ್ರಮಗಳ ಪರಾಮರ್ಶೆ ಮಾಡಬೇಕು. ಶೇ. 100ರಷ್ಟುಗುರಿ ತಲುಪಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜದ ದಾಸ್ತಾನು, ವಿತರಣೆ ಹಾಗೂ ರಸಗೊಬ್ಬರ ಲಭ್ಯತೆ, ಕುಡಿಯುವ ನೀರಿನ ವ್ಯವಸ್ಥೆ, ಅಂತರ್ಜಲ ಮಟ್ಟ, ಕೆರೆ ತುಂಬುವ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಪ್ರಗತಿ ಇತರೆ ಇಲಾಖೆಗಳ ಕಾರ್ಯಕ್ರಮಗಳ ಪರಾಮರ್ಶೆ ನಡೆಸಿದ್ದಾರೆ.

ಟಾಯ್ಲೆಟ್ ಕಟ್ಟಲು ಹಣ: 4 ವರ್ಷವಾದ್ರೂ ಅನುದಾನ ಖರ್ಚೇ ಆಗಿಲ್ಲ..!

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಅನಿತಾ ಹದ್ದಣ್ಣನವರ ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Follow Us:
Download App:
  • android
  • ios