ಪಟ್ಟಣದಲ್ಲಿ ನವರಾತ್ರಿ ಉತ್ಸವ ಕಮಿಟಿ, ಸ್ವಾತಂತ್ರ್ಯ ಸೇನಾನಿ ವೀರ ಸಾವರಕರ ಪ್ರತಿಷ್ಠಾನದ ನೇತೃತ್ವದಲ್ಲಿ ದೌಡ್‌ ಮೆರವಣಿಗೆಯಲ್ಲಿ ಪಾಲ್ಗೊಂಡ ಯುವಕರು ಭಾವೈಕ್ಯತೆ ಮೆರೆದರು| ದುರ್ಗಾಮಾತಾ ದೌಡ್‌ ಕಾರ್ಯಕ್ರಮಕ್ಕೆ ಮುಸ್ಲಿಂ ಯುವಕ ಹಾಗೂ ಪುರಸಭೆ ಸದಸ್ಯ ಶಾನೂರ ಯಾದವಾಡ, ರಫೀಕ್‌ ಸಂಗಳ ಕೇಸರಿ ಭಗವಾಧ್ವಜ ಹಿಡಿದು ಚಾಲನೆ ನೀಡಿದರು| ದೌಡ್‌ ಮೆರವಣಿಗೆಯಲ್ಲಿ ಹಲವು ಮುಸ್ಲಿಂ ಯುವಕರು ಹೆಜ್ಜೆ ಹಾಕುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾದರು| 

ರಾಮದುರ್ಗ(ಅ.7): ಪಟ್ಟಣದಲ್ಲಿ ನವರಾತ್ರಿ ಉತ್ಸವ ಕಮಿಟಿ, ಸ್ವಾತಂತ್ರ್ಯ ಸೇನಾನಿ ವೀರ ಸಾವರಕರ ಪ್ರತಿಷ್ಠಾನದ ನೇತೃತ್ವದಲ್ಲಿ ಸುಮಾರು 9 ದಿನಗಳವರೆಗೆ ನಡೆಯುತ್ತಿರುವ ದುರ್ಗಾಮಾತಾ ದೌಡ್‌ ಕಾರ್ಯಕ್ರಮ ದಿನೇ ದಿನೆ ಹಲವು ಭಕ್ತಿಪೂರ್ವಕ ವಿಶೇಷತೆ ಸಾರುತ್ತಿದ್ದು, ಭಾನುವಾರ ದೌಡ ಮೆರವಣಿಗೆಯಲ್ಲಿ ಪಾಲ್ಗೊಂಡ ಯುವಕರು ಭಾವೈಕ್ಯತೆ ಮೆರೆದರು.

Add Asianetnews Kannada as a Preferred SourcegooglePreferred

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪಟ್ಟಣದ ಆಂಜನೇಯ ನಗರದ ಆಂಜನೇಯ ದೇವಸ್ಥಾನದಿಂದ ಪ್ರಾರಂಭಗೊಂಡ ದುರ್ಗಾಮಾತಾ ದೌಡ್‌ ಕಾರ್ಯಕ್ರಮಕ್ಕೆ ಮುಸ್ಲಿಂ ಯುವಕ ಹಾಗೂ ಪುರಸಭೆ ಸದಸ್ಯ ಶಾನೂರ ಯಾದವಾಡ, ರಫೀಕ್‌ ಸಂಗಳ ಕೇಸರಿ ಭಗವಾಧ್ವಜ ಹಿಡಿದು ಚಾಲನೆ ನೀಡಿ, ದೌಡ್‌ ಮೆರವಣಿಗೆಯಲ್ಲಿ ಹಲವು ಮುಸ್ಲಿಂ ಯುವಕರು ಹೆಜ್ಜೆ ಹಾಕುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾದರು. ಆಂಜನೇಯ ನಗರದಿಂದ ಪ್ರಾರಂಭವಾದ ಮೆರವಣಿಗೆ ಪಟ್ಟಣದ ಕಿಲ್ಲಾಗಲ್ಲಿಯ ಅಂಭಾ ಭವಾನಿ ದೇವಸ್ಥಾನಕ್ಕೆ ಆಗಮಿಸಿ ಸಮಾವೇಶಗೊಂಡಿತು.

ರಂಗವಲ್ಲಿ ಸ್ವಾಗತ:

ದೌಡ್‌ ಸಂಚರಿಸುವ ಮಾರ್ಗದುದ್ದಕ್ಕೂ ಪಟ್ಟಣದ ಜಯನಗರ, ಆಂಜನೇಯ ನಗರ, ಮಲ್ಲಮ್ಮ ನವರದ ಮಹಿಳೆಯರು ರಸ್ತೆಯುದ್ದಕ್ಕೂ ಬಣ್ಣ ಬಣ್ಣದ ರಂಗವಲ್ಲಿ ಚಿತ್ತಾರ ಬಿಡಿಸಿ, ದೌಡ್‌ ಮೆರೆವಣಿಗೆಗೆ ಹೂ ತೂರುವ ಮೂಲಕ ಭವ್ಯ ಸಾಗತ ಕೋರಿದ್ದು ವಿಶೇಷವಾಗಿತ್ತು.

ಮೆರವಣಿಗೆಯೊಂದಿಗೆ ಸಮಾರೋಪ:

ದುರ್ಗಾಮಾತಾ ದೌಡ್‌ ಕೊನೆಯ ದಿನವಾದ ಅ.8 ರಂದು ಕಾರ್‌ ಸ್ಟ್ಯಾಂಡ್‌ ಬಳಿ ಇರುವ ದ್ಯಾಮವ್ವನ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ ದುರ್ಗಾಮಾತಾ ಮೂರ್ತಿಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉತ್ಸವ ಸಮಾರೋಪಗೊಳ್ಳಲಿದೆ. ಉತ್ಸವದಲ್ಲಿ ವಿವಿಧ ವಾಧ್ಯಮೇಳಗಳು ಪಾಲ್ಗೊಳ್ಳಲಿವೆ. ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಜನತೆ ಹಾಗೂ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ.