ಬೆಳಗಾವಿಯ ಈ ಪ್ರಸಿದ್ಧ ಜಲಪಾತದಲ್ಲಿ ಕುಡುಕರದ್ದೇ ಹಾವಳಿ
ಬೆಟ್ಟಗುಡ್ಡಗಳ ಜಟಿಲ ಸಸ್ಯ ರಾಶಿಗಳ ಮಧ್ಯೆ ನೊರೆ ಹಾಲಿನಂತೆ ಪಾತಾಳದಂಚಿಗೆ ಬೀಳುವ ಜಲಧಾರೆ ಒಂದು ಕಡೆಯಾದರೆ, ಕಂದರಕ್ಕೆ ಬೀಳುವ ಅಣತಿ ದೂರದಲ್ಲಿರುವ ನೀರಿನಲ್ಲಿ ಕುಳಿತು ಎಣ್ಣೆ ಹಾಕುವ ಪಡ್ಡೆಗಳ ತಂಡದ ಸಿಳ್ಳೆ, ಕೇಕೆ, ಕುಣಿತ ಮತ್ತೊಂದು ಕಡೆ.
ಮಂಜುನಾಥ ಪ್ಯಾಟಿ ಬೆಳಗಾವಿ
ಬೆಳಗಾವಿ[ಜು.27] ಹೌದು. ಇದು ಮಹಾರಾಷ್ಟ್ರದ ಪಶ್ಚಿಮಬೆಟ್ಟದ ಸಾಲಿನಲ್ಲಿರುವ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ಕವಳೆಸಾತ ಜಲಪಾತದ ಬೆಟ್ಟದ ಮೇಲೆ ನಡೆಯುತ್ತಿರುವ ನಿತ್ಯ ಕಾಯಕ ಎಂಬಂತಾಗಿದೆ. ಒಂದು ಕಡೆ ಪ್ರಕೃತಿಯ ಸಂಪತ್ತು ನೋಡುಗರನ್ನು ಸೂಜಿಗಲ್ಲಿನ ಮೇಲೆ ನಿಲ್ಲಿಸಿದರೆ, ಇನ್ನೊಂದೆಡೆ ಮದ್ಯಪ್ರಿಯರ ವಿಕೃತಿ ಆ ಪ್ರಕೃತಿಯ ಸವಾಲುಗಳ ನಿಂತ ಸೂಜಿಗಲ್ಲು ಕಣ್ಣಂಚಿಗೆ ನಾಟಿದ ಅನುಭವವಾಗದಿರದು.
ಜೂನ್ ಹಾಗೂ ಜುಲೈನಲ್ಲಿ ಮಹಾರಾಷ್ಟ್ರ, ಗೋವಾ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಸರ್ಕಾರಿ ರಜೆ ಸೇರಿದಂತೆ ವಾರದ ಶನಿವಾರ ಹಾಗೂ ಭಾನುವಾರ ಜಲಪಾತ ನೋಡುವ ಪ್ರವಾಸಿಗರ ಸಂಖ್ಯೆ ಲೆಕ್ಕವಿಲ್ಲದಷ್ಟು. ಬರುವ ಪ್ರವಾಸಿಗರಲ್ಲಿ ವಿದ್ಯಾರ್ಥಿಗಳು, ಕುಟುಂಬ ವರ್ಗ, ಯುವ ಸಮೂಹ, ಮಧ್ಯಯಸ್ಕಿನವರೇ ಹೆಚ್ಚು. ಧೋ ಎಂದು ಸುರಿಯುತ್ತಿರುವ ಮಳೆಹನಿಯಲ್ಲಿ ಮದ್ಯ ಸೇವಿಸುವ ಯುವಕರ ಗುಂಪಿಗೇನೂ ಕಡಿಮೆಯಿಲ್ಲ. ಇವರ ಈ ವರ್ತನೆ ಅವಾಂತರಕ್ಕೆ ರಹದಾರಿಯಾಗುವುದರಲ್ಲಿ ಎರಡು ಮಾತಿಲ್ಲ.
ರಕ್ಷಣಾ ಸಿಬ್ಬಂದಿ ಯಾರೆಂದು ತಿಳಿಯುವುದಿಲ್ಲ: ಭಾರಿ ಜನಸಂದಣಿಯಿಂದ ಕೂಡಿದ ಜಲತಾಣದಲ್ಲಿ ಮಳೆಗಾಲದ ಈ ವೇಳೆ ಪ್ರವಾಸಿಗರು ಹೆಚ್ಚುತ್ತಿದ್ದಾರೆ. ಅಪಾಯದ ಸ್ಥಳಕ್ಕೆ ಯಾರೂ ಹೋಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರ ಪೊಲೀಸರು ಅಲ್ಲಲ್ಲಿ ನಿಯೋಜನೆಗೊಂಡಿದ್ದಾರೆ. ನಿತ್ಯ ಬರುವ ವರ್ಷಧಾರೆ ರಕ್ಷಣೆಗಾಗಿ ಮಳೆ ರಕ್ಷಾಕವಚ (ರೈನ್ಕೋಟ್) ಹಾಕಿರುವ ಪೊಲೀಸರು ಬರುವ ಪ್ರವಾಸಿಗರಿಗೆ ತಿಳಿಯುವುದೇ ಇಲ್ಲ. ಹೀಗಾಗಿ ಅಸಭ್ಯಗಿ ವರ್ತಿಸುವ ಯುವಕರಿಗೆ ತಿಳಿ ಹೇಳಲು ಹೋದರೆ ಅವರೊಂದಿಗೆ ವಾಗ್ವಾದ ನಡೆದ ಉದಾಹರಣೆಗಳೂ ಉಂಟು.
ಅಂಬೋಲಿ: ಮೂಲ ಸೌಕರ್ಯವಿಲ್ಲದೇ ಗಲಿಬಿಲಿ!
ಇಲ್ಲಿ ನಿತ್ಯವೂ ಮಳೆ. ಆಗಾಗ ಬಿಡುವು ನೀಡುತ್ತದೆ. ಮಳೆ ಸುರಿಯಲು ಆರಂಭಿಸಿದರೆ, ನಿಲ್ಲುವುದು ತುಂಬಾ ಹೊತ್ತು ಬೇಕು. ಅಂತಹ ಮಳೆಯಲ್ಲಿಯೇ ರಕ್ಷಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಅದು ಅನಿವಾರ್ಯ ಎಂಬಂತಾಗಿದೆ. ಬೀಳುವ ನೀರಿನ ಜಲಪಾತ ದೃಶ್ಯವನ್ನು ನೋಡಲು ಸುತ್ತಲೂ ಗೋಡೆರಹತಿ ಮನೆಯನ್ನು ನಿರ್ಮಿಸಲಾಗಿದೆ. ಅಲ್ಲಿ ಕೆಲವರು ರಕ್ಷಣೆ ಪಡೆಯುತ್ತಾರೆ.
ದಟ್ಟವಾದ ಆವೆ: ಕಂದಕಕ್ಕೆ ಬೀಳುವ ನೀರಿನ ವಿರುದ್ಧ ದಿಕ್ಕಿಗೆ ಗಾಳಿ ರಭಸವಾಗಿ ಬೀಸುತ್ತದೆ. ಇದರಿಂದ ಕೆಳಗೆ ಬೀಳುವ ನೀರು ಗಾಳಿಗೆ ವಿರುದ್ಧ ದಿಕ್ಕಿಗೆ ಚಿಮ್ಮುತ್ತದೆ. ಇದೇ ವೇಳೆ ನೀರು ಬೀಳುವ ಪಕ್ಕದಲ್ಲಿಯೇ ಸಿಮೆಂಟ್ನ ತಡೆಗೋಡೆ ಕಟ್ಟಲಾಗಿದೆ. ಆದರೆ, ಅಲ್ಲಿ ಯುವಕರು ಕೇಕೆ ಹಾಕುವುದು, ಗೋಡೆ ಆಚೆ ಹೋಗಿ ಇಣುಕು ನೋಡುವಂತಹ ಅಪಾಯಕ್ಕೆ ಹೋಗುತ್ತಾರೆ. ಜತೆಗೆ ಪ್ಲಾಸ್ಟಿಕ್ ಬಾಟಲ್ಗಳನ್ನು ಎಸೆಯುವಂತಹ ದುಸ್ಸಾಹಸಕ್ಕೂ ಮುಂದಾಗುತ್ತಾರೆ. ಇಂತಹ ಸಂದರ್ಭಲ್ಲಿ ದಟ್ಟವಾದ ಆವೆ ಸುತ್ತಮುತ್ತಲ ಪ್ರದೇಶವನ್ನು ಆವರಿಸುತ್ತದೆ. ಮುಂದೆ ಏನಿದೆ ಎಂಬುವುದು ಕಾಣುವುದೇ ಇಲ್ಲ. ಇಂತಹ ಸಂದರ್ಭಲ್ಲಿಯೂ ಯುವಕರು, ಅದರಲ್ಲಿ ಮದ್ಯ ಸೇವಿಸಿದವರು ಮನಸೋ ಇಚ್ಛೆ ವರ್ತನೆ ಮಾಡುವುದರಿಂದ ಅಪಾಯಕ್ಕೆ ಒಳಗಾಗುವುದರಲ್ಲಿ ಅನುಮಾನವೇ ಇಲ್ಲ.
ಸೋರುತಿಹುದು ಬೆಳಗಾವಿ ಜಿಲ್ಲಾಸ್ಪತ್ರೆ; ಹೇಳೋರಿಲ್ಲ, ಕೇಳೋರಿಲ್ಲ!
ಅಪಾಯದ ಕಿರಿದಾದ ದಾರಿಗಳು: ಅಂಬೋಲಿಗೆ ಹೋಗುವ ಮುಖ್ಯ ರಸ್ತೆಯಿಂದ ಕವಳೆಸಾತಗೆ ಹೋಗುವ ರಸ್ತೆಯೂ ತುಂಬಾ ಇಕ್ಕಟ್ಟಾಗಿದೆ. ಪ್ರಸಕ್ತ ವರ್ಷದಲ್ಲಿ ರಸ್ತೆ ಡಾಂಬರೀಕರಣವಾಗಿದ್ದರೂ ವಿಸ್ತಾರವಾಗಿಲ್ಲ. ಮುಂಗಾರು ಹೆಚ್ಚಾಗುವುದರಿಂದ ಜನಸಂಚಾರ ಹೆಚ್ಚು. ಹೀಗಾಗಿ ವಾಹನಗಳ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಇದರಿಂದ ಕಿರಿದಾದ ಈ ರಸ್ತೆಯಲ್ಲಿ ಸಂಚಾರ ಮಾಡುವುದೇ ದುಸ್ತರವಾಗಿದೆ. ಕಿರಿದಾದ ಈ ಒಂದೇ ರಸ್ತೆಯಲ್ಲಿ ಎದುರು ಬದುರು ವಾಹನಗಳು ಬರುವುದರಿಂದ ಅಪಾಯ ತಪ್ಪಿದ್ದಲ್ಲ. ಎದುರು ಬಂದ ವಾಹನಕ್ಕೆ ರಸ್ತೆ ಬಿಡಲು ಹೋದರೆ, ಪಕ್ಕದಲ್ಲಿಯೇ ನೀರು ಹರಿಯುತ್ತಿರುತ್ತದೆ. ಹೀಗಾಗಿ ದಾರಿಬಿಟ್ಟು ಕೆಳಗೆ ವಾಹನ ಇಳಿಸದಂತಹ ಪರಿಸ್ಥಿತಿ ಇರುತ್ತದೆ. ಹೀಗಾಗಿ ಸುರಕ್ಷಿತ ಚಾಲನೆಯೊಂದೇ ಇಲ್ಲಿರುವ ದಾರಿ.
ಅವ್ಯವಸ್ಥೆಯ ಪಾರ್ಕಿಂಗ್: ನಿತ್ಯ ನೂರಾರು ವಾಹನ ಬರುತ್ತವೆ. ಆದರೆ, ಅವುಗಳನ್ನು ಮನಸೋ ಇಚ್ಛೆ ನಿಲ್ಲಿಸುತ್ತಾರೆ ಪ್ರವಾಸಿಗರು. ಇದರಿಂದ ಪಾರ್ಕಿಂಗ್ಗೆ ಜಾಗವಿದ್ದರೂ, ಸಮರ್ಪಕವಾಗಿ ನಿಲುಗಡೆ ಆಗದ ಪರಿಸ್ಥಿತಿ ಇದೆ. ಮೇಲಾಗಿ ನಿಲುಗಡೆ ಮಾಡಿದ ವಾಹನ ಸವಾರರು ಜಲಪಾತ ನೋಡಲು ತೆರಳಿದರೆ, ಬರುವುದು ಹಲವು ಗಂಟೆಗಳ ನಂತರ. ಇದರಿಂದ ಅವರು ಬರುವವರೆಗೆ ಇನ್ನೊಬ್ಬ ಸವಾರರು ಕಾಯಲೇಬೇಕು. ಹೀಗಾಗಿ ವ್ಯವಸ್ಥಿತವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕವಳೆಸಾತ್ನಲ್ಲಿ ಇನ್ನೂ ಆಗಬೇಕಿದೆ.
ಮಹಾದಾಯಿ ತೀರ್ಪು ತಡೆಗೆ ಗೋವಾ ಕ್ಯಾತೆ..ಏನಿದು ಕತೆ?
ಬಿಟ್ಟೆನೆಂದರೂ ಬೀಡದು ಸೇಲ್ಫಿ ಗೀಳು: ಸುರಿಯುವ ಮಳೆ ಲೆಕ್ಕಿಸದೇ ನೀರಿನಲ್ಲಿಯೇ ನಿಂತು ಸೇಲ್ಫಿ ತೆಗೆದುಕೊಳ್ಳುವ ಸಂಖ್ಯೆಗೆ ಇಲ್ಲಿ ಬರವಿಲ್ಲ. ಮಳೆ ಜತೆಗೆ ಕಂದರಕ್ಕೆ ಬೀಳುವ ನೀರಿಗೆ ಅಭಿಮುಖವಾಗಿ ಬರುವ ಗಾಳಿಯೊಂದಿಗೆ ನೀರಿನ ಸಿಂಚನವಾಗುತ್ತಿದ್ದರೂ ಇದನ್ನು ಗಮನಿಸದೇ ರಮಣೀಯ ದೃಶ್ಯಗಳ ಸವಿ ನೆನಪುಗಳ ಗ್ಯಾಲರಿ ಸಂಗ್ರಹಕ್ಕಾಗಿ ಫೋಟೋ ಕಿಕ್ಕರಿಕೊಳ್ಳುವರು. ಒದ್ದೆಯಾದ ಮೊಬೈಲ್ ಮನೆಗೆ ಬಂದಾಗ ರಿಪೇರಿ ಆಸ್ಪತ್ರೆಗೆ ಕರೆದ್ಯೊಯುವದರೊಂದಿಗೆ ಬಿಲ್ ಮೂಲಕ ಚಳಿ ಬಿಡಿಸದೇ ಇರದು.
ಸ್ವಚ್ಛತೆ ಇಲ್ಲಿ ಮರೀಚಿಕೆ: ಚಳಿ ತಾಳಲಾರದೇ ಟೀ ಸೇರಿದಂತೆ ಸುಟ್ಟ ಮೆಕ್ಕೆಜೋಳಕ್ಕೆ ಪ್ರವಾಸಿಗರು ಮೊರೆ ಹೋಗುತ್ತಾರೆ. ಟೀ ಕುಡಿದ ನಂತರ ಪ್ಲಾಸ್ಟಿಕ್ ಕಪ್ಗಳನ್ನು ಹಾಗೂ ಮೆಕ್ಕೆಜೋಳದ ರವದಿ ಸೇರಿದಂತೆ ತೆನೆಯ ಬೆಂಡನ್ನು ಎಲ್ಲಿಬೇಕೆಂದರಲ್ಲಿ ಬಿಸಾಡುತ್ತಿದ್ದಾರೆ. ಇದರಿಂದ ಪ್ರವಾಸಿತಾಣ ಅಸ್ವಚ್ಛತೆಯ ತವರೂರ ಆಗಿದೆ. ಸ್ವಚ್ಛತೆ ಕಾಪಾಡಿ ಎಂಬ ಒಂದೇ ಒಂದು ಲಕ ಕೂಡ ಇಲ್ಲಿಲ್ಲ.