Asianet Suvarna News Asianet Suvarna News

Belagavi: ಅನೇಕರಿಗೆ ಅನ್ನದ ದಾರಿ ಮಾಡಿಕೊಟ್ಟವರು ಕಲ್ಯಾಣರಾವ ಮುಚಳಂಬಿ: ಡಾ.ಸಿದ್ಧರಾಮ ಮಹಾಸ್ವಾಮಿಗಳು

• ರೈತ ಹೋರಾಟಗಾರ, ಪತ್ರಕರ್ತ ದಿವಂಗತ ಕಲ್ಯಾಣರಾವ ಮುಚಳಂಬಿ ಪ್ರಥಮ ಪುಣ್ಯಸ್ಮರಣೆ
• ಸರ್ಕಾರಗಳೇ ರೈತರ ಮಾರಾಟಕ್ಕೆ ಮುಂದಾಗಿವೆ - ಮಾಜಿ ಉಪಸಭಾಪತಿ ಬಿ.ಆರ್‌.ಪಾಟೀಲ್ ಬೇಸರ
• ಕಲ್ಯಾಣರಾವ ಮುಚಳಂಬಿ ಕಲ್ಯಾಣ ಗುಣದವರು ಎಂದ ಹುಕ್ಕೇರಿ ಸ್ವಾಮೀಜಿ

dr siddarama mahaswamiji talks about farmer leader kalyanrao muchalambi at belagavi gvd
Author
First Published Oct 16, 2022, 8:39 PM IST

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಅ.16): ಉತ್ತರ ಕರ್ನಾಟಕದ ರೈತ ಹೋರಾಟಗಾರ, ಪತ್ರಕರ್ತ ದಿವಂಗತ ಕಲ್ಯಾಣರಾವ ಮುಚಳಂಬಿ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಇಂದು ಬೆಳಗಾವಿಯ ನೆಹರು ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾ ಭವನದಲ್ಲಿ ಏರ್ಪಡಿಸಲಾಗಿತ್ತು. ಕಲ್ಯಾಣರಾವ ಮುಚಳಂಬಿ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಕಲ್ಯಾಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ, ಸ್ನೇಹಸೇತು ಕಥಾ ಸಂಕಲನ ಬಿಡುಗಡೆ ಹಾಗೂ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ನೆರವೇರಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗದಗ - ಡಂಬಳದ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ಸಿದ್ದರಾಮ ಮಹಾಸ್ವಾಮಿಗಳು ವಹಿಸಿದ್ದರೆ, ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಶಶಿಕಾಂತ ನಾಯಕ ವಹಿಸಿದ್ದರೆ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಉಪಸಭಾಪತಿ ಬಿ.ಆರ್.ಪಾಟೀಲ್ ಆಗಮಿಸಿದ್ದರು. 

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಗದಗ ಡಂಬಳದ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ಸಿದ್ಧರಾಮ ಮಹಾಸ್ವಾಮಿಗಳು, 'ನಾವು ಅನೇಕ ಪುಣ್ಯಸ್ಮರಣೆ ಕಾರ್ಯಕ್ರಮ ಗಳಲ್ಲಿ ಭಾಗವಹಿಸುತ್ತೇವೆ. ಇಂದಿನ ಕಾರ್ಯಕ್ರಮ ಪುಣ್ಯಸ್ಮರಣೆ ಕಾರ್ಯಕ್ರಮ ಮಾಡುವವರಿಗೆ ಮಾದರಿ ಕಾರ್ಯಕ್ರಮ ಆಗಿತ್ತು. ಕೇವಲ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ಅವರ ಬಗ್ಗೆ ಮಾತನಾಡಲು ಸೀಮಿತಗೊಳಿಸಲಿಲ್ಲ‌. ಸ್ನೇಹಸೇತು ಕೃತಿ ಲೋಕಾರ್ಪಣೆ, ಕಥಾ ಸ್ಪರ್ಧೆ ಏರ್ಪಡಿಸಿರೋದು, ಕಲ್ಯಾಣರಾವ ಮುಚಳಂಬಿ ಸ್ಮರಣೆಯಲ್ಲಿ ಕಲ್ಯಾಣಶ್ರೀ ಪ್ರಶಸ್ತಿ ನೀಡಿದ್ದು, ಕಥೆಗಾರರ ಗೌರವಿಸಿದ್ದು ಅತ್ಯಂತ ಮಹತ್ವದ ಕಾರ್ಯಕ್ರಮ ಇದಾಗಿತ್ತು ಎಂದು ಅಭಿಪ್ರಾಯಪಟ್ಟರು. 

ಬೆಳಗಾವಿ ಮೂರು ರಾಜ್ಯಗಳ ಕೇಂದ್ರ ಸ್ಥಾನ: ಗೋವಾ ಸಿಎಂ ಸಾವಂತ

ಸ್ನೇಹಸೇತು ಕಥಾಸಂಕಲನದ ಮುನ್ನುಡಿಯಲ್ಲಿ ಎಲ್ಲಾ ಕಥೆಗಳ ಸಾರದ ಮುನ್ನುಡಿ ಬರೆದಿದ್ದಾರೆ. ಕಲ್ಯಾಣರಾವ ಮುಚಳಂಬಿ ಕಲ್ಯಾಣ ಕರ್ನಾಟಕದಿಂದ ಕಿತ್ತೂರು ಕರ್ನಾಟಕಕ್ಕೆ ಬಂದರು. ಅವರು ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಸೇತು ಆಗಿದ್ದರು‌. ಅನೇಕ ಹೃದಯ ಸ್ನೇಹ ಬೆಸೆಯುವ ಕಾರ್ಯಕ್ರಮಗಳನ್ನು ಕಲ್ಯಾಣರಾವ ಮುಚಳಂಬಿ ಮಾಡಿಕೊಂಡು ಬಂದರು‌‌‌. ತಮ್ಮ ಬಳಿ ಸಮಯ ಇತ್ತಂದ್ರೆ ಅಲ್ಲಿ ಹೋಗಿ ಬರೋಣ ಆ ಕೆಲಸ ಮಾಡೋಣ ಅನ್ನೋರು. ಹಸಿರು ಕ್ರಾಂತಿ ಕನ್ನಡ ದಿನಪತ್ರಿಕೆ, ರೈತ ಹೋರಾಟ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಸುತ್ತಿದ್ದರು. ಬೆಳಗಾವಿಯ ಹಸಿರು ಕ್ರಾಂತಿ ಪತ್ರಿಕಾಲಯ ಆಡಿಟೋರಿಯಂ ರೀತಿ ಆಗಿತ್ತು. ಈ ಕಚೇರಿಯಲ್ಲಿ ಅನೇಕ ವರ್ಷಗಳ ಕಾಲ ನಾಡ ಹಬ್ಬ ಕಾರ್ಯಕ್ರಮ ನಡೆಸಿದ್ದರು‌. ಕಲ್ಯಾಣರಾವ ಸಾಮಾನ್ಯ ವ್ಯಕ್ತಿ ಅಲ್ಲ ಸಾಂಸ್ಕೃತಿಕ ವ್ಯಕ್ತಿ ಆಗಿ ನಮಗೆ ಕಾಣುತ್ತಿದ್ದರು. 

ಕಲ್ಯಾಣ ಕರ್ನಾಟಕದಿಂದ ಕಿತ್ತೂರು ಕರ್ನಾಟಕಕ್ಕೆ ಬಂದು ಹಸಿರು ಕ್ರಾಂತಿ ಪತ್ರಿಕೆ ಹೊರ ತಂದರು. ನನ್ನ ಪತ್ರಿಕೆ ಮೂಲಕ ರೈತ ಚಿಂತನೆ, ರೈತರ ಹಿತಕ್ಕಾಗಿ, ಸರ್ಕಾರ ಗಮನ ಸೆಳೆಯಬೇಕು ಎಂದು ಪ್ರತ್ಯಕ್ಷವಾಗಿ ಹೇಳುತ್ತಿದ್ದರು. ಅವರು ಬಹುಮುಖ ವ್ಯಕ್ತಿತ್ವ ಹೋರಾಟಗಾರರು. ಕಲ್ಯಾಣರಾವ ಮುಚಳಂಬಿರನ್ನು ಬೆಳಗಾವಿ ಜನ ಎಂದೆಂದೂ ಮರೆಯಲ್ಲ. ಸಾಹಿತಿಗಳಾದ ಸ.ರಾ.ಸುಳಕೊಡೆ, ಜಲತ್ಕುಮಾರ ಪುಣಜಗೌಡ ಕಲ್ಯಾಣರಾವ ಮುಚಳಂಬಿರವರ ರೈಟ್ ಹ್ಯಾಂಡ್ ಲೆಫ್ಟ್ ಹ್ಯಾಂಡ್ ರೀತಿ ಇದ್ದವರು‌. ಇಬ್ಬರ ಸಂಪಾದಕತ್ವದಲ್ಲಿ ಸ್ನೇಹಸೇತು ಕಥಾಸಂಕಲನ ಬಹಳ ಮಹತ್ವ ಪೂರ್ಣವಾಗಿ ಬಂದಿವೆ. ಕಾದಂಬರಿಯಲ್ಲಿ ಇರುವ ವಿಷಯ ವಸ್ತುಗಳು ಕಥೆಗಳಲ್ಲಿ ಬಂದಿದೆ. ಇದು ಅಪೂರ್ವವಾದ ಕಥಾ ಸಂಕಲನ, ಆದರ್ಶಪ್ರಾಯ ಕಾರ್ಯಕ್ರಮ. ತಾವು ಬೆಳೆಯುವ ಜೊತೆ ಮತ್ತೊಬ್ಬರನ್ನೂ ಬೆಳೆಸುವ ಕೆಲಸ ಮಾಡಿದ್ದಾರೆ. ಅನೇಕ ವ್ಯಕ್ತಿಗಳಿಗೆ ಅನ್ನದ ದಾರಿ ಮಾಡಿಕೊಟ್ಟಿದ್ದು ಇವರನ್ನು ನಿಜಕ್ಕೂ ಸ್ಮರಿಸಿ ಕೊಳ್ಳಬೇಕು‌.‌ ಸಾಹಿತ್ಯಕ ಸಾಂಸ್ಕೃತಿಕ ಚಟುವಟಿಕೆ ಹಸಿರು ಕ್ರಾಂತಿ ಕಾರ್ಯಾಲಯ ಮೂಲಕ ನಡೆಯುತ್ತಿದ್ದವು' ಎಂದು ಹೇಳಿದರು.

ಕಲ್ಯಾಣರಾವ ಮುಚಳಂಬಿ ಕಲ್ಯಾಣ ಗುಣದವರು: ಇನ್ನು ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಷ ಬ್ರ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ಚಾಮೀಜಿ ಮಾತನಾಡಿ, ಕಲ್ಯಾಣರಾವ ಮುಚಳಂಬಿ ಅವರು ಹೆಸರಿತೆ ತಕ್ಕಂತೆ ‘ಕಲ್ಯಾಣ’ ಗುಣದವರು. ಯಾರೊಂದಿಗೂ, ಯಾವುದೇ ವಿಷಯಕ್ಕೂ, ಎಂದೂ ರಾಜೀ ಮಾಡಿಕೊಳ್ಳದ ಅವರ ನಾಯಕತ್ವ ಗುಣವೇ ಎಲ್ಲರಿಗೂ ಬೇಕಾಗುತ್ತದೆ. ಅಪಾರ ಸಂಖ್ಯೆಯ ಪತ್ರಕರ್ತರನ್ನು, ಅಪಾರ ಸಂಖ್ಯೆಯ ರೈತ ಹೋರಾಟಗಾರರನ್ನು ಹುಟ್ಟು ಹಾಕಿ ಅವರಿಗೆ ಬದುಕು ಕಟ್ಟಿಕೊಟ್ಟವರು. ಹೊಳೆಗೆ ವಿಮುಖವಾಗಿ ಈಜುವುದು ಬಹಳ ಕಷ್ಟ. ಮುಚಳಂಬಿ ಅವರು ಜೀವನಪೂರ್ತಿ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಈಜಿದರು. ರೈತರಿಗಾಗಿಯೇ ಒಂದು ಪತ್ರಿಕೆ ತೆರೆದರು, ರೈತರಿಗಾಗಿಯೇ ಒಂದು ಪಕ್ಷ ಕಟ್ಟಿದರು, ರೈತರಿಗಾಗಿಯೇ ಅವರು ಜೀವ ಬಿಟ್ಟರು' ಎಂದು ತಿಳಿಸಿದರು.

ಸರ್ಕಾರಗಳೇ ರೈತರ ಮಾರಾಟಕ್ಕೆ ಮುಂದಾಗಿವೆ: ಸರ್ಕಾರಗಳೇ ರೈತರ ಮಾರಾಟಕ್ಕೆ ಮುಂದಾಗಿವೆ. ಇಂಥ ದಿನಗಳಲ್ಲಿ ರೈತ ಚಳವಳಿ ಮತ್ತೆ ಕಸುವು ಪಡೆಯಬೇಕಿದೆ. ಕಲ್ಯಾಣರಾವ ಮುಚಳಂಬಿ ಅವರ ಆದರ್ಶಗಳನ್ನು ಮುಂದಿಟ್ಟುಕೊಂಡು ಹೋರಾಟಗಳು ನಡೆಯಬೇಕಿದೆ’ ಎಂದು ವಿಧಾನ ಪರಿಷತ್‌ನ ಮಾಜಿ ಉಪ ಸಭಾಪತಿ ಬಿ.ಆರ್. ಪಾಟೀಲ ಆಶಯ ವ್ಯಕ್ತಪಡಿಸಿದರು. ‘ರೈತ ಚಳವಳಿಗೆ ಪ್ರೊ.ನಂಜುಂಡಸ್ವಾಮಿ ಅವರ ಕಾಲದಲ್ಲಿದ್ದ ದೊಡ್ಡ ಶಕ್ತಿ ಈಗ ಉಳಿದಿಲ್ಲ. ಬಂಡವಾಳ ಶಾಹಿಗಳಿಗೆ ದೇಶವನ್ನು ಒಪ್ಪಿಸಿಬಿಡಲಾಗಿದೆ. ಹೀಗೇ ಮುಂದುವರಿದರೆ ಮುಂದೊಂದು ದಿನ ರೈತರಿಗೆ ಉಳಿಗಾಲವಿಲ್ಲ. ಇಂಥ ಸಂದರ್ಭದಲ್ಲಿ ಕಲ್ಯಾಣರಾವ ಶ್ರೀಲಂಕಾವನ್ನು ಅವರಂಥ ಧೀಮಂತ, ನಿಸ್ವಾರ್ಥದ ನಾಯಕರ ಗೈರು ಕಾಡುತ್ತಿದೆ. ಅವರ ಆದರ್ಶಗಳ ನೆರಳಲ್ಲಿ ಹೋರಾಟ ಮುಂದುವರಿಸಿದರೆ ಮಾತ್ರ ನಾವು ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತೆ ಆಗುತ್ತದೆ’ ಎಂದು ಹೇಳಿದರು.

'ಪತ್ರಿಕೋದ್ಯಮ ಹಾಗೂ ಚಳವಳಿ ಎರಡೂ ಮಾರ್ಗಗಳಲ್ಲಿ ಮುಂಚೂಣಿಯಲ್ಲಿದ್ದವರು ಕಲ್ಯಾಣರಾವ ಮುಚಳಂಬಿ': ರೈತ ಮುಖಂಡ ಕೆ.ಟಿ. ಗಂಗಾಧರ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ‘ಪತ್ರಿಕೋದ್ಯಮ ಹಾಗೂ ಚಳವಳಿ ಎರಡೂ ಮಾರ್ಗಗಳಲ್ಲಿ ಕಲ್ಯಾಣರಾವ ಅವರು ಮುಂಚೂಣಿಯಲ್ಲಿ ಇದ್ದವರು. ರೈತರಿಗೆ ಅನ್ಯಾಯವಾದಾಗ ಸರ್ಕಾರವನ್ನು ಎಚ್ಚರಿಸಿದವರು’ ಎಂದರು. ‘ರೈತ ಚಳವಳಿ ಕೇವಲ ರೈತರಿಗೆ ಮಾತ್ರ ಬೇಕಾಗಿದೆ ಎಂಬ ತಪ್ಪು ಕಲ್ಪನೆ ದೇಶದಲ್ಲಿದೆ. ಆದರೆ, ಯಾರು ಯಾರು ಅನ್ನ ತಿನ್ನುತ್ತಾರೋ ಎಲ್ಲರಿಗೂ ಇದು ಸಂಬಂಧಿಸಿದ್ದು. ರೈತರ ಕೈಯಲ್ಲಿ ಭೂಮಿ ಇದ್ದರೆ ಮಾತ್ರ ಅವರು ಬೆಳೆ ಬೆಳೆಯುತ್ತಾರೆ. ಕೃಷಿಯಿಂದ ಮಾತ್ರ ಸಾಮಾಜಿಕ, ಔದ್ಯೋಗಿಕ ಹಾಗೂ ಆರ್ಥಿಕ ವಲಯಗಳು ಬದುಕಲು ಸಾಧ್ಯ. ಇಂಥ ದೊಡ್ಡ ಸಂಗತಿಗಳನ್ನು ಮುಂದಿಟ್ಟುಕೊಂಡೇ ಮುಚಳಂಬಿ ಅವರು ಪ್ರಬಲವಾಗಿ ವಿಷಯ ಮಂಡಿಸುತ್ತಿದ್ದರು’ ಎಂದು ಹೋರಾಟದ ದಿನಗಳನ್ನು ಸ್ಮರಿಸಿದರು.

ಕಲ್ಯಾಣರಾವ ಮುಚಳಂಬಿರವರ ಕುರಿತು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ, ರೈತ ಹೋರಾಟಗಾರ ಮಲ್ಲಿಕಾರ್ಜುನ ವಾಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ದಿಲೀಪ್ ಕುರಂದವಾಡೆ, ಪತ್ರಕರ್ತರಾದ ಮುರುಗೇಶ್ ನಿರಾಣಿ, ಈಶ್ವರ ಹೂಟಿ, ಕೆ.ಎನ್.ದೊಡ್ಡಮನಿ, ಚಿತ್ರ ನಟ ಸಿ.ಕೆ‌.ಮೆಕ್ಕೆದ ಸಂಸ್ಮರಣೆ ನುಡಿಗಳನ್ನಾಡಿದರು.ಶಿವಾಪುರದ ಕಾಡಸಿದ್ಧೇಶ್ವರ ಸ್ವಾಮೀಜಿ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್,  ರೈತ ಮುಖಂಡ ಕೆ.ಟಿ.ಗಂಗಾಧರ, ಸಾಹಿತಿಗಳಾದ ಮೈತ್ರಾಯಿಣಿ ಗದಿಗೆಪ್ಪಗೌಡರ, ಸಾಹಿತಿ ಲೀಲಾ ಕುಲಕೋಟಿ, ಪತ್ರಕರ್ತ ರಾಜೇಂದ್ರ ಪಾಟೀಲ್, ದಿ.ಕಲ್ಯಾಣರಾವ ಮುಚಳಂಬಿ ಧರ್ಮಪತ್ನಿ ಶ್ರೀಮತಿ ನಿರ್ಮಲಾ ಕ. ಮುಳಚಂಬಿ ಸೇರಿ ಹಲವರು ಉಪಸ್ಥಿತರಿದ್ದರು‌. 

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಪ್ರಭಾಕರ ಕೋರೆ: ಸಿಎಂ ಬೊಮ್ಮಾಯಿ

ಕಲ್ಯಾಣರಾವ ಮುಚಳಂಬಿ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಐವರಿಗೆ ಕಲ್ಯಾಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರ, ರೈತ ಮುಖಂಡ ಕೆ.ಟಿ‌‌.ಗಂಗಾಧರ, ಸಾವಯವ ಕೃಷಿಕ ಅಶೋಕ ತುಬಚಿ, ಹಿರಿಯ ಪತ್ರಕರ್ತರಾದ ವಿಜಯಕುಮಾರ್ ಪಾಟೀಲ್, ಮಹಾವೀರ ಮೆಕ್ಕಳಕಿರವರಿಗೆ ಕಲ್ಯಾಣಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಿವಂಗತ ಕಲ್ಯಾಣರಾವ ಮುಚಳಂಬಿ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಕಥಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶ್ರೀಮತಿ ಯಶಸ್ವಿನಿ ಶ್ರೀಧರಮೂರ್ತಿಯವರ 'ಅವಳು ತಾಯಿ' ಕಥೆಗೆ ಪ್ರಥಮ ಬಹುಮಾನ, ಶ್ರೀಮತಿ ಸುನಂದಾ ಹಾಲಭಾವಿಯವರ 'ಉಡುಗೊರೆ' ಕಥೆಗೆ ದ್ವಿತೀಯ ಬಹುಮಾನ, ಡಾ.ಪ್ರಕಾಶ್ ಕಾಡೆರವರ 'ಅಕ್ಕರೆ ತಾಯವ್ವ' ಕಥೆಗೆ ತೃತೀಯ ಬಹುಮಾನ ನೀಡಲಾಯಿತು. ಮೆಚ್ಚುಗೆ ಪಡೆದ ಐದು ಕಥೆಗಳು ಸೇರಿ ಹತ್ತು ಕಥೆಗಾರರಿಗೆ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಮುಚಳಂಬಿ ಕುಟುಂಬಸ್ಥರು ಹಾಗೂ ಜನಕಲ್ಯಾಣ ಪ್ರತಿಷ್ಠಾನ ಸದಸ್ಯರು ದಿವಂಗತ ಕಲ್ಯಾಣರಾವ ಮುಚಳಂಬಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು‌.

Follow Us:
Download App:
  • android
  • ios