ಭಿಕ್ಷಾಟನೆ, ಲೈಂಗಿಕ ಕಾರ್ಯಕರ್ತೆಯರಾಗಿ ತೃತೀಯ ಲಿಂಗಿಗಳು ಬಹಳಷ್ಟು ಮಂದಿ ಇದ್ದಾರೆ. ವಿದ್ಯಾವಂತರು, ಅವಿದ್ಯಾವಂತರೂ ಇದ್ದಾರೆ. ಇವರೆಲ್ಲರಿಗೆ ದುಡಿಯಲು ಕೆಲಸ ಬೇಕು. ನಾಲ್ಕನೇ ದರ್ಜೆ ನೌಕರನಿಂದ ತೊಡಗಿ ವಿವಿಧ ಹುದ್ದೆಗಳಿಗೆ ಅರ್ಹತೆ ಹೊಂದುವ ವಿದ್ಯಾವಂತ ತೃತೀಯ ಲಿಂಗಿಗಳೂ ಇದ್ದಾರೆ. ಅಂತಹವರಿಗೆ ಕೆಲಸ ನೀಡಲು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಮುಂದೆ ಬರಬೇಕು: ಮಂಜಮ್ಮ ಜೋಗತಿ 

ಮಂಗಳೂರು(ಅ.20): ತೃತೀಯ ಲಿಂಗಿಗಳಿಗೆ ಕೇವಲ ಪ್ರೀತಿ, ಅನುಕಂಪ ತೋರಿಸಿದರೆ ಪ್ರಯೋಜನವಿಲ್ಲ, ಅದರ ಬದಲು ಅವರ ಸ್ವಂತ ಜೀವನಕ್ಕೆ ನೆರವಾಗಲು ಸಮಾಜ ಬಾಂಧವರು ಉದ್ಯೋಗ ನೀಡಲು ಮುಂದೆ ಬರಬೇಕು ಎಂದು ಕರ್ನಾಟಕ ಜನಪದ ಅಕಾಡೆಮಿ ಮಾಜಿ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತ ಡಾ.ಮಾತಾ ಬಿ.ಮಂಜಮ್ಮ ಜೋಗತಿ ಹೇಳಿದ್ದಾರೆ. ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಹೊರತಂದ ಡಾ.ರೇಶ್ಮಾ ಉಳ್ಳಾಲ್‌ ಅವರ ‘ಬಿಂಬದೊಳಗೊಂದು ಬಿಂಬ’ ಸಂಶೋಧನಾ ಕೃತಿಯನ್ನು ಇಲ್ಲಿನ ರೋಶನಿ ನಿಲಯ ಸಭಾಂಗಣದಲ್ಲಿ ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಭಿಕ್ಷಾಟನೆ, ಲೈಂಗಿಕ ಕಾರ್ಯಕರ್ತೆಯರಾಗಿ ತೃತೀಯ ಲಿಂಗಿಗಳು ಬಹಳಷ್ಟು ಮಂದಿ ಇದ್ದಾರೆ. ವಿದ್ಯಾವಂತರು, ಅವಿದ್ಯಾವಂತರೂ ಇದ್ದಾರೆ. ಇವರೆಲ್ಲರಿಗೆ ದುಡಿಯಲು ಕೆಲಸ ಬೇಕು. ನಾಲ್ಕನೇ ದರ್ಜೆ ನೌಕರನಿಂದ ತೊಡಗಿ ವಿವಿಧ ಹುದ್ದೆಗಳಿಗೆ ಅರ್ಹತೆ ಹೊಂದುವ ವಿದ್ಯಾವಂತ ತೃತೀಯ ಲಿಂಗಿಗಳೂ ಇದ್ದಾರೆ. ಅಂತಹವರಿಗೆ ಕೆಲಸ ನೀಡಲು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಮುಂದೆ ಬರಬೇಕು ಎಂದು ಅವರು ಹೇಳಿದರು.

ಹುಬ್ಬಳ್ಳಿ ಮಂಗಳೂರು ನಡುವೆ ದಸರಾ ಸ್ಪೆಷಲ್‌ ಟ್ರೇನ್‌, VIA ಬೆಂಗಳೂರು!

ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮಾತನಾಡಿ, ಸಮಾಜಸೇವಾ ಕಾರ್ಯದ ವಿದ್ಯಾರ್ಥಿಗಳು ಕೂಡ ತೃತೀಯ ಲಿಂಗಿಗಳ ಬದುಕು ಹಸನಾಗಲು ಸಮಾಜದಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಆಶಿಸಿದರು.

ಕಾಲೇಜುಗಳಲ್ಲಿ ಸಿನಿಮಾ ಕ್ಲಬ್‌:

ಈ ಕೃತಿಗೆ ಮುನ್ನುಡಿ ಬರೆದ ರಾಷ್ಟ್ರ ಪುರಸ್ಕೃತ ಚಲನಚಿತ್ರ ನಿರ್ದೇಶಕ ಬಿ.ಎಸ್‌.ಲಿಂಗದೇವರು ಮಾತನಾಡಿ, ಸಲಿಂಗ ವಿವಾಹವನ್ನು ಸುಪ್ರೀಂ ಕೋರ್ಟ್‌ ತಿರಸ್ಕೃರಿಸಿದ ಇಂದಿನ ದಿನಗಳಲ್ಲಿ ಈ ಕೃತಿ ಹೊರತಂದಿರುವುದು ಸಕಾಲಿಕವಾಗಿದೆ. ತೃತೀಯ ಲಿಂಗಿಗಳ ಬದುಕನ್ನು ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನೋಡಬೇಕು. ಈಗಿನ ಜಾತಿ ಗಣತಿಯಲ್ಲಿ ತೃತೀಯ ಲಿಂಗಿಗಳ ಬದುಕನ್ನು ಹೇಗೆ ಗುರುತಿಸುತ್ತಾರೆ ಎಂಬುದನ್ನು ಪರಿಶೀಲಿಸಬೇಕಾಗಿದೆ. ತೃತೀಯ ಲಿಂಗಿಗಳ ಜೀವನಕ್ಕೆ ಬೇಕಾದ ಸವಲತ್ತುಗಳನ್ನು ಸರ್ಕಾರ ನೀಡಬೇಕು. ನಾನು ತೃತೀಯ ಲಿಂಗಿಗಳ ಕುರಿತಾಗಿ ಮಾಡಿದ ಸಿನಿಮಾ ‘ನಾನು ಅವನಲ್ಲ, ಅವಳು’ ಮುಂತಾದ ಸದಭಿರುಚಿಯ ಚಿತ್ರಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ತೋರಿಸಬೇಕಾಗಿದೆ. ಅದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಸಿನಿಮಾ ಕ್ಲಬ್‌ ರೂಪುಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ತೃತೀಯ ಲಿಂಗಿಗಳ ಸರ್ವೆ:

ಪಯಣ ಸಂಸ್ಥೆಯ ನಿರ್ದೇಶಕಿ ಸವಿತಾ ಮಾತನಾಡಿ, ಮೈಸೂರು ಹಾಗೂ ವಿಜಯಪುರಗಳಲ್ಲಿ ತೃತಿಯ ಲಿಂಗಿಗಳ ಬಗ್ಗೆ ಪ್ರಾಯೋಗಿಕವಾಗಿ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಬೇಕು, ತೃತೀಯ ಲಿಂಗಿಗಳಿಗೆ ಪೊಲೀಸರ ತೊಂದರೆ ತಪ್ಪಬೇಕು ಎಂದರು.

ರೋಶನಿ ನಿಲಯದ ಉಪಪ್ರಾಂಶುಪಾಲೆ ಡಾ.ಜೆನಿಸ್ ಮೇರಿ, ಸಂಶೋಧಕಿ ಡಾ.ರೇಷ್ಮಾ ಉಳ್ಳಾಲ್‌, ಹಿರಿಯ ಪತ್ರಕರ್ತ ರಾಮಕೃಷ್ಣ ಆರ್‌., ಪುತ್ರಿ ಆರ್‌. ತನ್ವಿ, ರಕ್ಷಿತ್‌ ಉಳ್ಳಾಲ್‌, ಡಾ.ಕಿಶೋರ್‌ ಕುಮಾರ್‌ ರೈ ಶೇಣಿ ಮತ್ತಿತರರಿದ್ದರು.

ಧರ್ಮಸ್ಥಳದಲ್ಲಿ ದುಷ್ಟರಿಗೆ ಬಲಿಯಾದ ಸೌಜನ್ಯಾ ಪ್ರತಿಮೆ ಪ್ರತಿಷ್ಠಾಪನೆ: 28ನೇ ಹುಟ್ಟುಹಬ್ಬ ಆಚರಣೆ

ಸಮಾನತೆ ಸೀಮಂತ ಮಾಡಿ:

ಸೀಮಂತ ಕಾರ್ಯ ನಡೆಸುವವರು ಸಮಾನತೆಯ ಸೀಮಂತ ನಡೆಸಿ, ಅಂದರೆ, ನನಗೆ ತೃತೀಯ ಲಿಂಗಿ ಮಗು ಜನಿಸಿದರೆ ಅದನ್ನು ಮನೆಯಿಂದ ಹೊರಗೆ ಹಾಕುವುದಿಲ್ಲ, ಅದಕ್ಕೆ ವಿದ್ಯಾಭ್ಯಾಸ ನೀಡಿ ಸಮಾಜದ ಮುಖ್ಯವಾಹಿನಿಗೆ ತರುತ್ತೇನೆ ಎಂದು ಪ್ರತಿಜ್ಞೆ ಮಾಡಬೇಕು. ಈಗಾಗಲೇ ಶಿವಮೊಗ್ಗ, ಕೇರಳ, ತಮಿಳ್ನಾಡುಗಳಲ್ಲಿ ಈ ರೀತಿಯ ಸಮಾನತೆಯ ಸೀಮಂತ ನಡೆಸುತ್ತಿದ್ದಾರೆ ಎಂದರು.

ಸುಯೆಝ್‌ ಉದ್ಯೋಗ ಆಫರ್‌!

ತೃತೀಯ ಲಿಂಗಿಗಳ ಜೀವನಕ್ಕೆ ನೆರವಾಗಲು ಮಂಗಳೂರಿನಲ್ಲಿರುವ ಸುಯೆಝ್‌ ಕಂಪನಿ ಉದ್ಯೋಗದ ಆಫರ್‌ ನೀಡಿದೆ. ಕನಿಷ್ಠ ವಿದ್ಯಾರ್ಹತೆ ಹೊಂದಿರುವ ತೃತೀಯ ಲಿಂಗಿಗಳ ಪಟ್ಟಿಯನ್ನು ಕಳುಹಿಸಿದಲ್ಲಿ ಅವರೆಲ್ಲರಿಗೆ ತಮ್ಮದೇ ಕಂಪನಿಯಲ್ಲಿ ಉದ್ಯೋಗ ನೀಡುವ ಭರವಸೆಯನ್ನು ಆಡಳಿತ ಮಂಡಳಿ ಹೇಳಿದೆ. ಹಾಗಾಗಿ ಆದಷ್ಟು ಶೀಘ್ರ ಮಂಗಳೂರಿನಲ್ಲಿರುವ ತೃತೀಯ ಲಿಂಗಿಗಳ ಸಮಗ್ರ ವಿವರಗಳ ಪಟ್ಟಿಯನ್ನು ಕಳುಹಿಸಿಕೊಡುವಂತೆ ಸುಯೆಝ್‌ ಕಂಪನಿಯ ಎಚ್ಆರ್‌ ರಾಕೇಶ್‌ ಶೆಟ್ಟಿ ಹೇಳಿದರು.