ಜಿಲ್ಲಾಡಳಿತದಿಂದ ವರ್ಷಾಂತ್ಯಕ್ಕೆ ಕಾಲೋನಿ ಸ್ಥಳಾಂತರ?
ಮಂಡ್ಯದಲ್ಲಿ ಡಿಸೆಂಬರ್ ವೇಳೆಗೆ ತಮಿಳು ಕಾಲೋನಿ ಸ್ಥಳಾಂತರ ಮಾಡುವ ವಿಶ್ವಾಸವನ್ನು ಜಿಲ್ಲಾಡಳಿತ ವ್ಯಕ್ತಪಡಿಸಿದೆ.
ವರದಿ : ಮಂಡ್ಯ ಮಂಜುನಾಥ
ಮಂಡ್ಯ(ಸೆ.07): ಜಿಲ್ಲಾಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿ ತೆರವುಗೊಳಿಸುವಂತೆ ರಾಜ್ಯ ಉಚ್ಛ ನ್ಯಾಯಾಲಯ ಆದೇಶ ಹೊರಡಿಸಿ ಐದು ವರ್ಷಗಳಾಗಿವೆ. ಆದರೆ, ಇಲ್ಲಿಯವರೆಗೂ ಅದು ಸಾಧ್ಯವಾಗಿಲ್ಲ. ನಿರೀಕ್ಷೆಯಂತೆ ಕಾಮಗಾರಿಗಳು ನಡೆದಿದ್ದರೆ ದಶಕದ ಹಿಂದೆಯೇ ಸ್ಥಳಾಂತರಗೊಳ್ಳುತ್ತಿತ್ತು. ಹಲವು ಅಡೆ- ತಡೆಗಳಿಂದ ತಮಿಳು ಕಾಲೋನಿ ಸ್ಥಳ ಬಿಟ್ಟು ಕದಲಲಿಲ್ಲ. ಈ ವರ್ಷದ ಡಿಸೆಂಬರ್ ವೇಳೆಗೆ ತಮಿಳು ಕಾಲೋನಿ ಸ್ಥಳಾಂತರ ಮಾಡುವ ವಿಶ್ವಾಸವನ್ನು ಜಿಲ್ಲಾಡಳಿತ ವ್ಯಕ್ತಪಡಿಸಿದೆ.
ತಮಿಳು ಕಾಲೋನಿಯ 575 ನಿವಾಸಿಗಳಿಗೆ ಚಿಕ್ಕ ಮಂಡ್ಯ ಕೆರೆಯ ನಿರ್ಮಿತಿ ಕೇಂದ್ರ ಪಕ್ಕ ಮನೆಗಳ ನಿರ್ಮಾಣ ಕಾರ್ಯ ನಡೆದಿದೆ. ಕೊರೋನಾ ಕಾರಣದಿಂದ ಸ್ಥಗಿತಗೊಂಡಿದ್ದ ಕಾಮಗಾರಿಗೆ ಕೊಳಚೆ ನಿರ್ಮೂಲನಾ ಮಂಡಳಿ ಇದೀಗ ಮತ್ತೆ ಚಾಲನೆ ನೀಡಿದೆ.
ತಮಿಳು ಕಾಲೋನಿ ಸ್ಥಳಾಂತರಿಸದಿದ್ದರೆ ನ್ಯಾಯಾಂಗ ನಿಂದನೆಗೆ ಗುರಿಯಾಗುವ ಆತಂಕದಲ್ಲಿರುವ ಜಿಲ್ಲಾಡಳಿತ ಕಾಮಗಾರಿಗೆ ಚುರುಕು ನೀಡುವಂತೆ ಸೂಚಿಸಿದೆ. ಇತ್ತೀಚೆಗಷ್ಟೇ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳೊಂದಿಗೆ ನಡೆಸಲಾದ ಸಭೆಯಲ್ಲಿ ಡಿಸೆಂಬರ್ ಅಂತ್ಯಕ್ಕೆ ಮನೆಗಳ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲೇಬೇಕು ಎಂದು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಕಾಮಗಾರಿ ಮುಗಿಸದಿದ್ದ ಪಕ್ಷದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ಡಬ್ಬಲ್ ಮರ್ಡರ್: 24 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸ್ರು, ಮಾಹಿತಿ ಕೊಟ್ಟವನೇ ಕೊಲೆಗಾರ ...
ಈ ಸಭೆಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ತಮಿಳು ಕಾಲೋನಿ ನಿವಾಸಿಗಳಿಗೆ ಮನೆಗಳನ್ನು ನಿರ್ಮಿಸುತ್ತಿರುವ ಸ್ಥಳದಲ್ಲಿ ರಸ್ತೆ, ಒಳಚರಂಡಿ, ವಿದ್ಯುತ್, ಕುಡಿವ ನೀರು ಸೇರಿದಂತೆ ಇನ್ನಿತರ ಮೂಲಸೌಕರ್ಯ ಕಲ್ಪಿಸಲು .4.25 ಕೋಟಿ ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ. ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಹಾಗೂ ಡಿಸೆಂಬರ್ ಅಂತ್ಯಕ್ಕೆ ಮನೆಗಳ ನಿರ್ಮಾಣ ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದ್ದಾರೆ.
ಮಳವಳ್ಳಿಯಲ್ಲೂ ಡ್ರಗ್ಸ್ ಸಿಗುತ್ತೆ ಎಂದ ಜೆಡಿಎಸ್ ಮುಖಂಡ
ಕೊರೋನಾ ಸಂಕಷ್ಟಪರಿಸ್ಥಿತಿ ಎದುರಾಗಿದ್ದರಿಂದ ನಗರದ ವಿವಿಧೆಡೆ ತಮಿಳು ಕಾಲೋನಿಯ 575 ನಿವಾಸಿಗಳಿಗೆ ನಿರ್ಮಿಸಲಾಗುತ್ತಿದ್ದ ಮನೆಗಳ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಕಾಮಗಾರಿಗೆ ಚಾಲನೆ ದೊರಕಿದೆ. ತಮಿಳು ಕಾಲೋನಿ ಸ್ಥಳಾಂತರಿಸುವುದರೊಂದಿಗೆ ನ್ಯಾಯಾಂಗ ನಿಂದನೆ ಗಂಡಾಂತರದಿಂದ ತಪ್ಪಿಸಿಕೊಳ್ಳಲು ಜಿಲ್ಲಾಡಳಿತ ತುರ್ತು ಕ್ರಮ ವಹಿಸಿದೆ.