Asianet Suvarna News Asianet Suvarna News

Republic day 2023: ಪ್ರಜೆಗಳ ಕಲ್ಯಾಣಕ್ಕಾಗಿ ತಾರತಮ್ಯ ಮುಕ್ತ ಆಡಳಿತ: ಸಚಿವ ಬಿ.ಸಿ. ನಾಗೇಶ್‌

ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರಗತಿಯನ್ನು ಸಾಧಿಸಿ, ಗೌರವಯುತ ಜೀವನ ನಡೆಸಬೇಕು. ಯಾರೊಬ್ಬರಿಗೂ ತಾರತಮ್ಯ ಮಾಡಬಾರದು ಎನ್ನುವುದು ನಮ್ಮ ಸಂವಿಧಾನದ ಮೂಲ ಆಶಯವಾಗಿದ್ದು, ಇದಕ್ಕೆ ಅನುಗುಣವಾಗಿ ಸರ್ವರ ಕಲ್ಯಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಶಿಕ್ಷಣ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

Discrimination free administration for welfare of citizens says Minister B.C. Nagesh at rav
Author
First Published Jan 27, 2023, 11:40 AM IST

ಮಡಿಕೇರಿ (ಜ.27) : ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರಗತಿಯನ್ನು ಸಾಧಿಸಿ, ಗೌರವಯುತ ಜೀವನ ನಡೆಸಬೇಕು. ಯಾರೊಬ್ಬರಿಗೂ ತಾರತಮ್ಯ ಮಾಡಬಾರದು ಎನ್ನುವುದು ನಮ್ಮ ಸಂವಿಧಾನದ ಮೂಲ ಆಶಯವಾಗಿದ್ದು, ಇದಕ್ಕೆ ಅನುಗುಣವಾಗಿ ಸರ್ವರ ಕಲ್ಯಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಶಿಕ್ಷಣ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ.

ಜಿಲ್ಲಾಡಳಿತದ ವತಿಯಿಂದ ನಗರದ ಜನರಲ್‌ ಕೆ.ಎಸ್‌. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 74ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

Disha Amrit: ಗಣರಾಜ್ಯೋತ್ಸವದಲ್ಲಿ ನೌಕಾ ಪರೇಡ್‌ ಮುನ್ನಡೆಸಿದ ಕುಡ್ಲಾದ ಕುವರಿ ದಿಶಾ ಅಮೃತ್‌

ಕೈಗಾರಿಕೆ, ಕೃಷಿ, ನೀರಾವರಿ, ಉದ್ಯಮ, ಉದ್ಯೋಗ, ಸಂಪರ್ಕ, ಸಾರಿಗೆ, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ವೇಗದ ಬೆಳವಣಿಗೆಗೆ ಒತ್ತು ನೀಡುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ಜೀವನ ಮಟ್ಟವನ್ನು ಮೇಲಕ್ಕೆತ್ತುವ ಗುರಿಯನ್ನು ಹೊಂದಲಾಗಿದೆ. ಅದಕ್ಕಾಗಿ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ತೋರಿಸಲಿರುವ ಬೃಹತ್‌ ಮಾಸ್ಟರ್‌ ಪ್ಲಾನ್‌ ಗತಿ ಶಕ್ತಿ ಮೂಲಕ ನವ ಭಾರತ ನಿರ್ಮಾಣದ ಕಡೆ ದಾಪುಗಾಲು ಇಡಲಾಗುತ್ತಿದೆ ಎಂದರು. ರಾಜ್ಯವು ಪ್ರಗತಿಯ ಹಾದಿಯಲ್ಲಿದ್ದು, ಸಮಗ್ರ ಅಭಿವೃದ್ಧಿಗೆ ಅನೇಕ ಜನಪರ ಯೋಜನೆಗಳನ್ನು ರೂಪಿಸಲಾಗಿದೆಯೆಂದು ಹೇಳಿದರು.

ಗಾಂಧಿ ಉದ್ಯಾನವನ: ಗಾಂಧಿ ಮಂಟಪದಲ್ಲಿ 30 ಸೆಂಟ್ಸ್‌ ಜಾಗದಲ್ಲಿ ಮಹಾತ್ಮ ಗಾಂಧೀಜಿ ಉದ್ಯಾನವನ ನಿರ್ಮಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸದ್ಯದಲ್ಲಿಯೇ ಚಾಲನೆ ದೊರೆಯಲಿದೆಯೆಂದು ಸಚಿವ ನಾಗೇಶ್‌ ಮಾಹಿತಿ ನೀಡಿದರು.

ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ ಜೇನುಕುರುಬ ಜನಾಂಗದ 485 ಫಲಾನುಭವಿಗಳಿಗೆ ಮನೆ ನಿರ್ಮಿಸಲು ತಲಾ 3.50 ಲಕ್ಷದಂತೆ ಒಟ್ಟು 1,697.50 ಲಕ್ಷ ರುಪಾಯಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

13 ಸಾವಿರ ಶಿಕ್ಷಕರ ಸೇರ್ಪಡೆಗೆ ಕ್ರಮ: ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮತ್ತು ಸುಧಾರಣೆ ತರಲಿರುವ ರಾಷ್ಟ್ರೀಯ ಶಿಕ್ಷಣ ನೀತಿ- 2020’ನ್ನು ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಹಂತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟಸುಧಾರಣೆಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಯ್ಕೆಯಾಗಿರುವ 13 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲೇ ಸೇವೆಗೆ ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ. ಒಟ್ಟಾರೆಯಾಗಿ ಸರ್ಕಾರವು ರಾಜ್ಯದ ಸಮಗ್ರ ಹಾಗೂ ಸಮತೋಲಿತ ಅಭಿವೃದ್ಧಿಯೊಂದಿಗೆ ಮುನ್ನಡೆಯುತ್ತಿದೆ ಎಂದರು.

ಆಕರ್ಷಕ ಪಥ ಸಂಚಲನ

ಗಣರಾಜ್ಯೋತ್ಸವ ಸಮಾರಂಭದಲ್ಲಿ ಪೆರೇಡ್‌ ಕಮಾಂಡರ್‌ ಚನ್ನನಾಯಕ್‌ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರಿಕ ಸೇವಾ ಪೊಲೀಸ್‌ ತಂಡ, ಅರಣ್ಯ ಇಲಾಖೆ, ಗೃಹ ರಕ್ಷಕ ದಳ ಸೇರಿದಂತೆ ವಿವಿಧ ಶಾಲೆಗಳ ಎನ್‌ಸಿಸಿಸಿ, ಸ್ಕೌಟ್ಸ್‌ ಮತ್ತು ಗೈಡ್‌್ಸ, ಸೇವಾದಳದ ಒಟ್ಟು 22 ತಂಡಗಳು ಪಥ ಸಂಚಲನದಲ್ಲಿ ಪಾಲ್ಗೊಂಡು ಗಮನ ಸೆಳೆದವು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ನಗರಸಭೆ ಅಧ್ಯಕ್ಷೆ ಎನ್‌.ಪಿ. ಅನಿತಾ ಪೂವಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್‌, ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಯಾಪ್ಟನ್‌ ಎಂ.ಎ. ಅಯ್ಯಪ್ಪ, ಜಿ.ಪಂ. ಸಿಇಒ ಡಾ.ಎಸ್‌. ಆಕಾಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸುಂದರ ರಾಜ್‌, ಉಪ ವಿಭಾಗಾಧಿಕಾರಿ ಯತೀಶ್‌ ಉಲ್ಲಾಳ್‌, ತಹಸೀಲ್ದಾರ್‌ ಪಿ.ಎಸ್‌. ಮಹೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಗಮನ ಸೆಳೆದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ

ರಾಷ್ಟ್ರ ಪ್ರೇಮ ಉದ್ಧೀಪನಗೊಳಿಸುವ, ನಾಡಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅತ್ಯಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಶಾಲಾ ತಂಡಗಳು ಪ್ರದರ್ಶಿಸುವ ಮೂಲಕ ಗಮನ ಸೆಳೆದವು.

ಜವಾಹರ್‌ ನವೋದಯ ವಿದ್ಯಾಲಯ ತಂಡ ಕೊಡಗಿನ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಿ ಜನ ಮೆಚ್ಚುಗೆಗೆ ಪಾತ್ರವಾಯಿತಾದರೆ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮಕ್ಕಳು, ಕೋವಿಡ್‌ ಸಂದರ್ಭ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ರೂಪಿಸಿದ ಕ್ರಮಗಳು, ಕೋವಿಡ್‌ ನಂತರ ಸರ್ಕಾರ ಶೈಕ್ಷಣಿಕ ಉತ್ತೇಜನಕ್ಕಾಗಿ ರೂಪಿಸಿದ ಯೋಜನೆಗಳನ್ನು ತಿಳಿಸಿಕೊಡುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿ ಗಮನ ಸೆಳೆಯಿತು.

ನಗರದ ಸಂತ ಜೋಸೆಫರ ಶಾಲೆ, ಲಿಟಲ್‌ ಫ್ಲವರ್‌, ಬ್ಲಾಸಂ ಶಾಲೆ, ಸಂತ ಮೈಕೆಲರ ಶಾಲೆ, ಜನರಲ್‌ ತಿಮ್ಮಯ್ಯ ಶಾಲಾ ತಂಡಗಳು ವಿವಿಧ ದೇಶ ಭಕ್ತಿ ಗೀತೆಗಳಿಗೆ ಅತ್ಯಾಕರ್ಷಕವಾದ ನೃತ್ಯವನ್ನು ಪ್ರಸ್ತುತ ಪಡಿಸಿ ಗಮನ ಸೆಳೆದವು.

ಪದ್ಮಶ್ರೀ ಪುರಸ್ಕೃತೆ ರಾಣಿ ಮಾಚಯ್ಯಗೆ ಸನ್ಮಾನ

ಕೊಡವ ಸಾಂಪ್ರದಾಯಿಕ ಉಮ್ಮತ್ತಾಟ್‌ ಕಲಾ ಪ್ರದರ್ಶನವನ್ನು ದೇಶ, ವಿದೇಶಗಳಲ್ಲಿ ಪಸರಿಸಿದ ರಾಣಿ ಮಾಚಯ್ಯ ಅವರು ಈ ಬಾರಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಗಣರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್‌ ಶಾಲು ಹೊದಿಸಿ, ಫಲ ತಾಂಬೂಲ ನೀಡಿ ಗೌರವಿಸಿದರು.

ಇದೇ ಸಂದರ್ಭ ಜಿಲ್ಲೆಯಲ್ಲಿ ಗ್ರಾಮ ಒನ್‌ ಯೋಜನೆಯಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಫ್ರಾಂಚೈಸಿಗಳಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಉತ್ತರ ಕನ್ನಡ: 100 ಬೋಟುಗಳಿಗೆ 120 ಕೋಟಿ ರು. ಮಂಜೂರು: ಅಂಗಾರ

ಸಾಧಕರನ್ನು ಮೋದಿ ಸರ್ಕಾರ ಗುರುತಿಸುತ್ತಿದೆ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ರಾಣಿ ಮಾಚಯ್ಯ ಅವರನ್ನು ಅಭಿನಂದಿಸಿದ ಬಳಿಕ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ.ನಾಗೇಶ್‌, ಕೊಡಗಿನ ರಾಣಿ ಮಾಚಯ್ಯ ಅವರಿಗೆ ಪ್ರಶಸ್ತಿ ಬಂದಿರುವುದು ಸಂತಸದ ವಿಷಯ. ದೇಶದ ವಿವಿಧ ಕ್ಷೇತ್ರಗಳಲ್ಲಿ ಹೀಗೆ ಸೇವೆ ಸಲ್ಲಿಸುವವರನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಗುರುತ್ತಿಸಿದೆ. ಆ ಮೂಲಕ ಕೋಟ್ಯಂತರ ಜನರ ಬೆನ್ನುತಟ್ಟುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ಸಚಿವರು ಹೇಳಿದರು.

Follow Us:
Download App:
  • android
  • ios