ಹೊಸ ಮೊಬೈಲ್‍ಬದಲಿಗೆ ಹಳೆ ಮೊಬೈಲ್ ಕೊಟ್ಟು ಮೋಸವೆಸಗಿದ ಕಂಪನಿಗೆ. ಹೊಸ ಹ್ಯಾಂಡ್ ಸೆಟ್ ಹಾಗೂ ಪರಿಹಾರ ಕೊಡಲು ಆಯೋಗದ ಆದೇಶ.

ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ 

Add Asianetnews Kannada as a Preferred SourcegooglePreferred

ಧಾರವಾಡ (ಜೂ.2): ಧಾರವಾಡ ಬಸವನಗರದ ನಿವಾಸಿ ರಾಷ್ಟ್ರೀಕೃತ ಬ್ಯಾಂಕಿನ ಉದ್ಯೋಗಿ, ಕಿರಣ್ ಕುಮಾರ್ ಅನ್ನುವವರು ಅಕ್ಟೋಬರ್ 20.2022 ರಂದು ಡಾರ್ಕನೋವಾ, 128 ಜಿಬಿ ಮೊಬೈಲ್‍ನ್ನು ಫ್ಲಿಪ್‍ಕಾರ್ಟ್ ಮೂಲಕ ರೂ.26,990 ಗೆ ಖರೀದಿಸಿದ್ದರು. ದಿ.ಅಕ್ಟೋಬರ್ 24, 2022 ರಂದು ಆ ಮೊಬೈಲ್ ದೂರುದಾರರಿಗೆ ತಲುಪಿತು. ಬಾಕ್ಸ್ ತೆರೆದು ನೊಡಿದಾಗ ಸರಿಯಾಗಿ ಅದನ್ನು ಪ್ಯಾಕಿಂಗ್ ಮಾಡಿರಲಿಲ್ಲ. ಮೊಬೈಲ್ ಮೇಲಿನ ಸ್ಕ್ರೀನ್ ಧೂಳಿನಿಂದ ಆವರಿಸಿದ್ದು ಅದು ಹಳೆಯ ಮೊಬೈಲ್ ಹ್ಯಾಂಡ್ ಸೆಟ್ ಆಗಿತ್ತು.

ಈ ವಿಷಯವನ್ನು ದೂರುದಾರರು ಎದುರುದಾರರಿಗೆ ತಿಳಿಸಿ ತನಗೆ ಹೊಸ ಬ್ರಾಂಡ್ ಹ್ಯಾಂಡ್ ಸೆಟ್ ಕೊಡುವಂತೆ ವಿನಂತಿಸಿದ್ದರು. ಆದರೆ ಅವರ ವಿನಂತಿಯನ್ನು ಎದುರುದಾರರು ತಿರಸ್ಕರಿಸಿದ್ದರು. ಈ ವಿಷಯವಾಗಿ ದೂರುದಾರರು ನ್ಯಾಷನಲ್ ಕಂಜುಮರ್ ಹೆಲ್ಪಲೈನ್‍ಗೆ ದೂರು ಕೊಟ್ಟಿದ್ದರು. ಎದುರುದಾರರ ಟೆಕ್ನಿಷಿಯನ್‍ಗೆ ತೋರಿಸಿದಾಗ ಇದು ಹಳೆಯ ಮೊಬೈಲ್ ಹ್ಯಾಂಡ್ ಸೆಟ್ ಅಂತ ಅವರು ಖಚಿತಪಡಿಸಿದರು. 

ಈ ವಿಷಯವನ್ನು ಎದುರುದಾರರಿಗೆ ತಿಳಿಸಿದರೂ ಕೂಡ ಅವರು ಸಮಸ್ಯೆ ಬಗೆಹರಿಸದೆ ಹೊಸ ಮೊಬೈಲ್ ಹ್ಯಾಂಡ್ ಸೆಟ್ ಬದಲಿಗೆ ಹಳೆಯ ಮೊಬೈಲ್ ಕೊಟ್ಟು ಗ್ರಾಹಕನಾದ ತನಗೆ ಫ್ಲಿಪ್‍ಕಾರ್ಟ ಮತ್ತು ಅದನ್ನು ಸರಬರಾಜು ಮಾಡಿದ ಕಂಪನಿಯವರಿಂದ ಮೋಸವಾಗಿದೆ. ಕಾರಣ ಎದುರುದಾರರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿ ಅನ್ಯಾಯದ ವ್ಯಾಪಾರ ಅಭ್ಯಾಸ ಮಾಡಿದ್ದಾರೆಂದು ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಫಿರ್ಯಾದಿದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ, ವಿಶಾಲಾಕ್ಷಿ. ಅ. ಬೋಳಶೆಟ್ಟಿ ಹಾಗೂ ಪ್ರಭು ಸಿ. ಹಿರೇಮಠ ಸದಸ್ಯರು, ದೂರುದಾರರು ರೂ.26,990 ಗಳಷ್ಟು ಹೇರಳ ಮೊತ್ತದ ಹಣ ವಿನಿಯೋಗಿಸಿ ತಮ್ಮ ಇಚ್ಛಾನುಸಾರ ಉಪಯೋಗಿಸಲು ವಿನೂತನ ಮಾದರಿಯ ಹೊಸ ಮೊಬೈಲ್ ಖರೀದಿಸಿದ್ದರೂ ಎದುರುದಾರರು ಅವರಿಗೆ ಬಳಕೆಯಾದ ಹಳೆ ಮೊಬೈಲ್ ಸೆಟ್ ಸರಬರಾಜು ಮಾಡಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಹಾಗೂ ಅನ್ಯಾಯದ ವ್ಯಾಪಾರ ಪದ್ಧತಿ ಆಗುತ್ತದೆ ಅಂತ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.

Bengaluru: ಒಂಟಿ ಮಹಿಳೆಯ ರುಂಡ ಇಲ್ಲದ ದೇಹ ಚರಂಡಿಯಲ್ಲಿ ಪತ್ತೆ, ತುಂಡರಿಸಿದ ಅಂಗಾಗ ಜತೆ

ದೂರುದಾರರಿಗೆ ಮೋಸವೆಸಗಿರುವುದು ಮೇಲ್ನೊಟಕ್ಕೆ ಕಂಡು ಬರುತ್ತದೆ ಅಂತ ಆಯೋಗ ತೀರ್ಪು ನೀಡಿ ಅದಕ್ಕಾಗಿ ಅದನ್ನು ಸರಬರಾಜು ಮಾಡಿದ ಬೆಂಗಳೂರಿನ ಲಾಸ್ಟೋರ್ ಕಂಪನಿಯವರು ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಅದೇ ಮಾದರಿಯ ಹೊಸ ಮೊಬೈಲ್‍ನ್ನು ದೂರುದಾರರಿಗೆ ಕೊಡಲು ಆದೇಶಿಸಿದೆ. ಒಂದು ತಿಂಗಳೊಳಗಾಗಿ ಮೊಬೈಲ್ ಹ್ಯಾಂಡ್ ಸೆಟ್ ಕೊಡಲು ಅವರು ವಿಫಲರಾದಲ್ಲಿ ನಂತರ ಮೊಬೈಲ್‍ನ ಕಿಮ್ಮತ್ತು ರೂ.26,990 ಗಳನ್ನು 8% ಬಡ್ಡಿ ಸಮೇತ ಲೆಕ್ಕ ಹಾಕಿ ಮರಳಿಸುವಂತೆ ಆದೇಶದಲ್ಲಿ ತಿಳಿಸಿದೆ.

ಅಪ್ರಾಪ್ತೆಯನ್ನು ಸಾಮೂಹಿಕ ಅತ್ಯಾಚಾರವೆಸಗಿ ರೋಡಿಗೆ ಎಸೆದ ಅಲ್ಪಸಂಖ್ಯಾತ ಫೇಸ್‌ಬುಕ್ ಗೆಳೆಯ!

ಇಂತಹ ಅನುಚಿತ ವ್ಯಾಪಾರದಿಂದ ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗೆ ರೂ.15,000 ಪರಿಹಾರ ಮತ್ತು ಪ್ರಕರಣದ ಖರ್ಚು ಅಂತ ರೂ.5,000 ಕೊಡುವಂತೆ ಎದುರುದಾರರಿಗೆ ತನ್ನ ಆದೇಶದಲ್ಲಿ ಆಯೋಗ ತಿಳಿಸಿದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾರ್ ಮತ್ತು ಸಹಾಯಕ ಅಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.