Asianet Suvarna News Asianet Suvarna News

ವಿಜ್ಞಾನದ ಬೆಳವಣಿಗೆಯಿಂದ ಮಾತ್ರ ದೇಶ ಅಭಿವೃದ್ಧಿ ಸಾಧ್ಯ: ಸಿಎಂ ಸಿದ್ದರಾಮಯ್ಯ

ವಿಜ್ಞಾನದ ಬೆಳವಣಿಗೆಯಿಂದ ಮಾತ್ರ ದೇಶದ ಸರ್ವತೋಮುಖ ಪ್ರಗತಿ ಸಾಧ್ಯ. ಹಾಗಾಗಿ ಯುವಪೀಳಿಗೆಯಲ್ಲಿ ವಿಜ್ಞಾನ, ತಂತ್ರಜ್ಞಾನದ ಆಸಕ್ತಿ ಹೆಚ್ಚಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

Development of the country is possible only through the development of science Says CM Siddaramaiah gvd
Author
First Published Sep 28, 2024, 10:56 PM IST | Last Updated Sep 28, 2024, 10:56 PM IST

ಬೆಂಗಳೂರು (ಸೆ.28): ವಿಜ್ಞಾನದ ಬೆಳವಣಿಗೆಯಿಂದ ಮಾತ್ರ ದೇಶದ ಸರ್ವತೋಮುಖ ಪ್ರಗತಿ ಸಾಧ್ಯ. ಹಾಗಾಗಿ ಯುವಪೀಳಿಗೆಯಲ್ಲಿ ವಿಜ್ಞಾನ, ತಂತ್ರಜ್ಞಾನದ ಆಸಕ್ತಿ ಹೆಚ್ಚಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಜೆಎನ್‌ ಟಾಟಾ ಸಭಾಂಗಣದಲ್ಲಿ ನಡೆದ 2022 ಮತ್ತು 2023 ನೇ ಸಾಲಿನ ವಿಜ್ಞಾನಿ ಮತ್ತು ಎಂಜಿನಿಯರ್ ರಾಜ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು. 

ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳ ಸಾಧನೆ ಯುವ ಪೀಳಿಗೆಗೆ ಆದರ್ಶ. ಇವರ ಸಾಧನೆ ವಿಜ್ಞಾನ-ತಂತ್ರಜ್ಞಾನದಲ್ಲಿ ಯುವ ಪೀಳಿಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಲು ಅನುಕೂಲ ಆಗುತ್ತದೆ. ಭಾರತ ರತ್ನ ಸಿ.ಎನ್.ರಾವ್ ಅವರ ಸಾಧನೆ ಇಡಿ ಮನುಷ್ಯ ಕುಲದ ಹೆಮ್ಮೆ. ವಿಜ್ಞಾನದ ಬೆಳವಣಿಗೆಗೆ ಇವರ ತುಡಿತ ಶ್ಲಾಘನೀಯ. ಪ್ರತಿಭೆ ಅನುವಂಶೀಯ ಅಲ್ಲ. ಅವಕಾಶ ಮತ್ತು ನಿರಂತರ ಶ್ರಮದಿಂದ ಪ್ರತಿಭೆ ವಿಸ್ತಾರಗೊಳ್ಳುತ್ತದೆ ಎಂದು ಹೇಳಿದರು. ನಮ್ಮ ರಾಜ್ಯ ವಿಜ್ಞಾನ-ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ನಂಬರ್ ಒನ್ ಇದೆ. ಈ ವಿಜ್ಞಾನ ತಂತ್ರಜ್ಞಾನದ ಫಲ ಜನ ಸಾಮಾನ್ಯರಿಗೆ ತಲುಪಬೇಕು. 

ತನಿಖೆ ಮಾಡುವವರ ವಿರುದ್ಧ ಆರೋಪ ಮಾಡುವುದು ಎಷ್ಟು ಸರಿ: ಎ.ಎಸ್.ಪೊನ್ನಣ್ಣ ಅಸಮಾಧಾನ

ಬೆಂಗಳೂರು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಆಗಿದೆ ಎಂದರೆ ಇದರಲ್ಲಿ ಹಲವು ವಿಜ್ಞಾನಿಗಳ, ತಂತ್ರಜ್ಞರ ಕೊಡುಗೆ ಇದೆ. ವಿಜ್ಞಾನದ ಆಸಕ್ತಿ ಹೆಚ್ಚಿ, ವಿಜ್ಞಾನಿಗಳ ಸಂಖ್ಯೆ ಹೆಚ್ಚಾದರೆ ದೇಶದ ಬೆಳವಣಿಗೆ ಸಾಧ್ಯ. ಸಮಾಜದ ತಾರತಮ್ಯ ಅಳಿಯಬೇಕಾದರೆ ಎಲ್ಲಾ ಜಾತಿ, ಧರ್ಮ, ವರ್ಗಗಳಿಗೆ ಸಮಾನ ಅವಕಾಶಗಳು‌ ಸಿಗುವಂತಾಗಬೇಕು ಎಂದರು. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಭೋಸರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾರತ ರತ್ನ ಪ್ರೊ.ಸಿಎನ್ಆರ್.ರಾವ್ ಉಪಸ್ಥಿತರಿದ್ದರು.

ತಪ್ಪು ಮಾಹಿತಿ ನೀಡಿದ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ತರಾಟೆ: ಸಭೆಗೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು. ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ ಅಂಗಡಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸಭೆಗೆ ಬರುವಾಗ ಸರಿಯಾದ ಸಿದ್ಧತೆ ಮಾಡಿಕೊಂಡಿಲ್ಲ. ಸಭೆಗೆ ಈ ರೀತಿ ತಪ್ಪು ಮಾಹಿತಿ ನೀಡಿದರೆ ಹೇಗೆ? ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದರು.

ರೇಷ್ಮೆಗೆ ಸಿಬ್ಬಂದಿ ಕೊರತೆ: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಈಗ ನಮ್ಮ ಸಿದ್ದರಾಮನಹುಂಡಿಯಲ್ಲಿ ಯಾರೂ ರೇಷ್ಮೆ ಬೆಳೆಯುತ್ತಿಲ್ಲ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಈ ಬಗ್ಗೆ ಉತ್ತರಿಸಿದ ಅಧಿಕಾರಿಗಳು, ಸಿದ್ದರಾಮನಹುಂಡಿಯಲ್ಲಿ ಇಬ್ಬರು ಮಾತ್ರ ರೇಷ್ಮೆ ಬೆಳೆಯುತ್ತಿದ್ದಾರೆ. ರೇಷ್ಮೆ ಬೆಳೆ ಪ್ರದೇಶ ವಿಸ್ತರಿಸಲು ಏನು ಕ್ರಮ ಕೈಗೊಂಡಿದ್ದೀರಿ ಎಂಬ ಮುಖ್ಯಮಂತ್ರಿ ಪ್ರಶ್ನೆಗೆ, ಲಭ್ಯವಿರುವ ಸಿಬ್ಬಂದಿಯಲ್ಲೇ 10 ಹಳ್ಳಿ ಆಯ್ಕೆ ಮಾಡಿಕೊಂಡು ವಿಸ್ತರಣೆಗೆ ಕೆಲಸ ಮಾಡುತ್ತಿದ್ದೇವೆ. ನಾವೇ ಗೂಡನ್ನು ನಿರ್ಮಿಸಿ ಕೊಟ್ಟು, ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ವಿವರಿಸಿದರು.

ಹುಟ್ಟಿನಿಂದಲೇ ಗಿನ್ನೆಸ್‌ ರೆಕಾರ್ಡ್‌ ಜೊತೆ ಲಿಂಕ್‌ ಇರಿಸಿಕೊಂಡೇ ಬಂದ ಮೆಗಾಸ್ಟಾರ್‌ ಚಿರಂಜೀವಿ!

ಮಧ್ಯಪ್ರವೇಶಿಸಿದ ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್, ಸಿಬ್ಬಂದಿ ಕೊರತೆ ಇದೆ ಎಂದರು. ಆ ಮಾತನ್ನು ಒಪ್ಪದ ಸಿಎಂ, ರೇಷ್ಮೆ ಕೃಷಿ ಕಡಿಮೆಯಾಗಲು ಇದೊಂದೇ ಕಾರಣ ಅಲ್ಲ. ಬೇರೆ ಬೇರೆ ಕಾರಣಗಳಿವೆ. ಅಧಿಕಾರಿಗಳು ಅವನ್ನೆಲ್ಲಾ ಗುರುತಿಸಿ ಪರಿಹಾರ ರೂಪಿಸಬೇಕು ಎಂದು ಅವರು ಸೂಚಿಸಿದರು. ಸಂಸತ್ತಿನಲ್ಲಿ ನಡೆದಿದ್ದ ಚರ್ಚೆಯೊಂದನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಹಳ್ಳಿ ಜನರು ಉತ್ಪಾದಿಸುವ ಹಾಲು ಪಟ್ಟಣಗಳಿಗೆ ಬರುತ್ತಿದೆ. ಪಟ್ಟಣದಲ್ಲಿ ತಯಾರಾಗುವ ಮದ್ಯ ಹಳ್ಳಿಗಳಿಗೆ ಬಂದಿದೆ ಎಂದರು.

Latest Videos
Follow Us:
Download App:
  • android
  • ios