ಇಲ್ಲಿನ ಫ್ರೀಡಂ ಪಾರ್ಕ್ ಅನ್ನು 5 ಕೋಟಿ ವೆಚ್ಚದಲ್ಲಿ ಸುಂದರ ಮತ್ತು ಸ್ವಚ್ಛ ಪಾರ್ಕ್ ಆಗಿ ಅಭಿವೃದ್ಧಿ ಪಡಿಸಿ, ಆಧುನಿಕ ಸ್ಪರ್ಶ ನೀಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.

ಶಿವಮೊಗ್ಗ (ಸೆ.23): ಇಲ್ಲಿನ ಫ್ರೀಡಂ ಪಾರ್ಕ್ ಅನ್ನು 5 ಕೋಟಿ ವೆಚ್ಚದಲ್ಲಿ ಸುಂದರ ಮತ್ತು ಸ್ವಚ್ಛ ಪಾರ್ಕ್ ಆಗಿ ಅಭಿವೃದ್ಧಿ ಪಡಿಸಿ, ಆಧುನಿಕ ಸ್ಪರ್ಶ ನೀಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಸ್ಮಾರ್ಟ್‌ಸಿಟಿ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳೊಂದಿಗೆ ಫ್ರೀಡಂ ಪಾರ್ಕ್ಗೆ ಭೇಟಿ ನೀಡಿ ಅವ್ಯವಸ್ಥೆಗಳನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫ್ರೀಡಂ ಪಾರ್ಕ್ ಬಿ.ಎಸ್‌.ಯಡಿಯೂರಪ್ಪ ಅವರ ಕನಸಾಗಿತ್ತು. ಪಾರ್ಕ್ನಲ್ಲಿ ಇತ್ತೀಚೆಗೆ ಫ್ರೀಡಂ ಪಾರ್ಕ್ ನಿರ್ವಹಣೆ ಸರಿಯಿಲ್ಲ ಎಂದು ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿವೆ. 

ಈಗಾಗಲೇ ಜಿಲ್ಲಾಧಿಕಾರಿ ಜತೆ ಮಾತನಾಡಿದ್ದೇನೆ. ಶೌಚಾಲಯಕ್ಕೆ ಟೆಂಡರ್‌ ಕರೆದು, ನಿರ್ವಹಣೆಗೆ ವ್ಯವಸ್ಥೆ ಮಾಡಲಾಗುವುದು. ರಾತ್ರಿ 8 ಗಂಟೆಗೆ ಸಾರ್ವಜನಿಕರ ವಾಕಿಂಗ್‌ಗೆ ಅವಕಾಶ ನೀಡಲಾಗುವುದು. ಎರಡು ಪಾಳಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು. ನಗರದ ಮಧ್ಯದಲ್ಲಿರುವ ವಿಶಾಲವಾದ 45 ಎಕರೆ ಜಾಗ ಬಂದೀಖಾನೆ ಇಲಾಖೆ ಸೇರಿದ್ದು, ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ನಗರದ ನಾಗರಿಕರಿಗೆ ಅನುಕೂಲ ಆಗಬೇಕೆನ್ನುವ ದೃಷ್ಟಿಯಿಂದ ಸಭೆ, ಸಮಾರಂಭ ನಡೆಸಲು ಮತ್ತು ವಾಯು ವಿಹಾರಕ್ಕೆ ಫ್ರೀಡಂ ಪಾರ್ಕ್ ಅನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 

Sexual assault: ದೂರು ಕೊಡಲು ಬಂದ ಮಹಿಳೆ ನಂಬರ್ ಪಡೆದು ಪದೇಪದೆ ಕರೆ ಮಾಡುತ್ತಿದ್ದ 'ಪೋಲಿ'ಸಪ್ಪ!

ಆದರೆ, ಪಾರ್ಕ್ ವ್ಯವಸ್ಥೆಗೆ ಸದ್ಯಕ್ಕೆ ಅದಗೆಟ್ಟಿದೆ. ಪ್ರಮುಖವಾಗಿ ವಾಕಿಂಗ್‌ ಪಾತ್‌ ಅಸಮರ್ಪಕ ನಿರ್ವಹಣೆ, ವಿದ್ಯುತ್‌ ದೀಪ ಕೊರತೆ, ಶೌಚಾಲಯದ ನಿರ್ವಹಣೆಯಲ್ಲಿ ಲೋಪ, ಭದ್ರತಾ ಸಿಬ್ಬಂದಿಗಳ ಕೊರತೆ, ಪುಂಡುಪೋಕರಿಗಳ ಹಾವಳಿ, ವಾಕಿಂಗ್‌ ಪಾತ್‌ನಲ್ಲಿ ದ್ವಿಚಕ್ರವಾಹನ ಸವಾರರು ಜೋರಾಗಿ ಓಡಿಸುವುದು, ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಎಸೆದಿರುವುದು, ಅನೈತಿಕ ಚಟುವಟಿಕೆಗಳ ತಾಣವಾಗಿರುವುದು. ಅಲ್ಲದೇ ಇತ್ತೀಚೆಗೆ ಪಾಲಿಕೆಯ ಗಾರ್ಬೆಜ್‌ ಅನ್ನು ಕೂಡ ತಂದು ಇಲ್ಲಿ ಸುರಿಯುತ್ತಿರುವುದರ ಗಮನಕ್ಕೆ ಬಂದಿದೆ ಎಂದರು.

ಶಿವಮೊಗ್ಗ ಸ್ಮಾರ್ಟ್‌ಸಿಟಿ ವತಿಯಿಂದ ನಾಲ್ಕು ಹಂತದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದ್ದು, ಸ್ವಚ್ಚತೆ, ವಾಕಿಂಗ್‌ ಟ್ರ್ಯಾಕ್‌, ಕುಡಿಯುವ ನೀರು, ಶೌಚಾಲಯಕ್ಕೆ ಮತ್ತು ವಿದ್ಯುತ್‌ ದೀಪಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಪರಿಸರ ಪ್ರೇಮಿಗಳ ಸಲಹೆಯಂತೆ ಒಂದು ಭಾಗದಲ್ಲಿ ಕಿರು ದಟ್ಟಅರಣ್ಯ ನಿರ್ಮಾಣ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಮಹಾಪುರುಷರ ಗ್ಯಾಲರಿ ನಿರ್ಮಾಣ, ಕೆಲವೆಡೆ ಕಾಂಪೌಂಡ್‌ ಕುಸಿದಿದ್ದು, ಅದನ್ನು ದುರಸ್ತಿ ಮಾಡಿಸಲಾಗುವುದು. ಇಡೀ 45 ಎಕರೆಗೂ ಸೇರಿಸಿ ಉದ್ದನೆಯ ವಾಕಿಂಗ್‌ ಪಾತ್‌ ನಿರ್ಮಾಣ ಮಾಡಲಾಗುವುದು. ಈಗಾಗಲೇ 3 ವೇದಿಕೆಗಳ ನಿರ್ಮಾಣವಾಗಿದ್ದು, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. 

ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕುಮಾರ್ ಬಂಗಾರಪ್ಪಗೆ ಬಿಗ್‌ ಶಾಕ್!

ಕಾರ್ಯಕ್ರಮ ಆಯೋಜಕರಿಗೆ ಸ್ವಲ್ಪಮಟ್ಟಿನ ಶುಲ್ಕ ವಿಧಿಸಿ, ಅದನ್ನು ಪಾರ್ಕ್ ನಿರ್ವಹಣೆಗೆ ಬಳಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಆರ್‌ .ಸೆಲ್ವಮಣಿ, ಉಪಮೇಯರ್‌ ಶಂಕರ್‌ ಗನ್ನಿ, ಸ್ಮಾರ್ಟ್‌ಸಿಟಿ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ, ಪಾಲಿಕೆ ಸದಸ್ಯರಾದ ನಾಗರಾಜ್‌ ಕಂಕಾರಿ, ಇ.ವಿಶ್ವಾಸ್‌, ಪ್ರಮುಖರಾದ ಎಸ್‌.ದತ್ತಾತ್ರಿ, ದಿವಾಕರ್‌ ಶೆಟ್ಟಿ, ಸಿ.ಎಚ್‌. ಮಾಲತೇಶ್‌, ಬಿ.ಎಂ. ಕುಮಾರಸ್ವಾಮಿ, ಪೊ›. ಚಂದ್ರಶೇಖರ್‌, ಮಂಜುನಾಥ್‌, ಬಳ್ಳೆಕೆರೆ ಸಂತೋಷ್‌ ಮತ್ತಿತರರು ಹಾಜರಿದ್ದರು.