ಗಣಿಗಾರಿಕೆಯಿಂದ ನೇರವಾಗಿ ಬಾಧಿತವಾಗುವ ಪ್ರದೇಶಕ್ಕೆ ಡಿಎಂಎಫ್‌ ಅನುದಾನ ಹೆಚ್ಚು ಪ್ರಮಾಣದಲ್ಲಿ ಸದ್ಬಳಕೆ ಆಗಬೇಕು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. 

ಕಲಬುರಗಿ (ಆ.20): ಗಣಿಗಾರಿಕೆಯಿಂದ ನೇರವಾಗಿ ಬಾಧಿತವಾಗುವ ಪ್ರದೇಶಕ್ಕೆ ಡಿಎಂಎಫ್‌ ಅನುದಾನ ಹೆಚ್ಚು ಪ್ರಮಾಣದಲ್ಲಿ ಸದ್ಬಳಕೆ ಆಗಬೇಕು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ಇಲ್ಲಿನ ಡಿ.ಸಿ. ಕಚೇರಿಯಲ್ಲಿ ಸಭಾಂಗಣದಲ್ಲಿ ಮುಜರಾಯಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನದ ಸಭೆ ನಡೆಸಿ ಮಾತನಾಡಿದರು. 

ಕಳೆದ 2020-21ನೇ ಸಾಲಿನಲ್ಲಿ ಗಣಿಗಾರಿಕೆ ಬಾಧಿತ ನೇರ ಪ್ರದೇಶಗಳಿಗೆ 5,093 ಲಕ್ಷ ರು., ಇತರೆ ಪ್ರದೇಶಗಳಿಗೆ 7,225 ಲಕ್ಷ ರು. ಅನುದಾನ ಅವೈಜ್ಞಾನಿಕ ಹಂಚಿಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ಚಿತ್ತಾಪುರ, ಸೇಡಂ, ಚಿಂಚೋಳಿ, ಶಹಾಬಾದ ತಾಲೂಕುಗಳು ನೇರವಾಗಿ ಗಣಿಗಾರಿಕೆಯಿಂದ ಬಾಧಿತವಾಗುವ ತಾಲುಕುಗಳಿವೆ. ಇಲ್ಲಿ ಡಿಎಂಎಫ್‌ ನಿಧಿ ಹೆಚ್ಚು ಬಳಕೆಯಾಗಬೇಕು ಎಂದರು. ನೇರವಾಗಿ ಬಾಧಿತ ಪ್ರದೇಶದಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿರುತ್ತದೆ. ಶ್ರಮಿಕ ವರ್ಗ ಅಲ್ಲಿ ವಾಸ ಮಾಡುತ್ತಾರೆ. 

ಎಂಪಿ ಚುನಾವಣೆಗೆ ವಿಜಯಪುರದಿಂದ ಕಾರಜೋಳ ಸ್ಪರ್ಧಿಸಲ್ಲ: ಸಂಸದ ಜಿಗಜಿಣಗಿ

ಆ ಶ್ರಮಿಕ ಸಮುದಾಯವರು ಮತ್ತು ಅವರ ಮಕ್ಕಳ ಶಿಕ್ಷಣ, ಅರೋಗ್ಯ ರಕ್ಷಣೆ, ಮೂಲಸೌಕರ್ಯ ಬಲಪಡಿಸುವುದು ನಮ್ಮ ಆದ್ಯತೆಯಾಗಬೇಕು. ಪರಿಸರ ಸಂರಕ್ಷಣೆ ಕಾಪಾಡಬೇಕಾಗುತ್ತದೆ. ಹೀಗಾಗಿ ಹೆಚ್ಚಿನ ಅನುದಾನ ಆ ಪ್ರದೇಶಕ್ಕೆ ಮೀಸಲಿಡಬೇಕು ಎಂದರು. ಅವೈಜ್ಞಾನಿಕವಾಗಿ ಬಾಧಿತ ಪ್ರದೇಶ ಇಲ್ಲದಲ್ಲಿ ಕಾಮಗಾರಿ ಕೈಗೊಳ್ಳಲು ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಆಡಳಿತಾತ್ಮಕ ಅನುಮೋದನೆ ಪಡೆದು ಇದೂವರೆಗೆ ಕಾಮಗಾರಿ ಆರಂಭಿಸದ ಕೆಲಸಗಳನ್ನು ಕೂಡಲೆ ತಾತ್ಕಲಿಕವಾಗಿ ನಿಲ್ಲಿಸಬೇಕು. ಈ ಎಲ್ಲಾ ಕಾಮಗಾರಿಗಳನ್ನು ಇಲಾಖಾವಾರು ಪರಿಶೀಲಿಸುವಂತೆ ಜಿಲ್ಲಾ​ಧಿ​ಕಾರಿ ಬಿ.ಫೌಜಿಯಾ ತರನ್ನುಮ್‌ ಅವರಿಗೆ ಸೂಚಿಸಿದರು.

ಮುಜರಾಯಿ ಇಲಾಖೆ ಚರ್ಚೆ ವೇಳೆ ಸಂದರ್ಭದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡದೆ, ಅನುದಾನ ಹಂಚಿಕೆ ಮಾಡಿರುವುದಕ್ಕೆ ಕೂಡಲೆ ಇದೆಲ್ಲ ತನಿಖೆ ಮಾಡುವಂತೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಸೂಚಿಸಿದ ಸಚಿವ ಪ್ರಿಯಾಂಕ್‌ ಖರ್ಗೆ, ಅನುದಾನ ಪಡೆದು ಇದೂವರೆಗೆ ಕಾಮಗಾರಿ ಆರಂಭಿಸದ ಲೋಕೋಪಯೋಗಿ, ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಅನುದಾನ ಪಡೆದಲ್ಲಿ ಕಾಲಮಿತಿಯಲ್ಲಿ ಕೆಲಸ ಮುಗಿಸಿ.ಇಲ್ಲದಿದ್ದಲೆ ಅನುದಾನ ವಾಪಸ್‌ ಮಾಡಿ ಎಂದು ಸಚಿವರು ಖಡಕ್‌ ಸೂಚನೆ ನೀಡಿದರು.

ಬಿಜೆಪಿಯ 13-14 ಶಾಸಕರು ಕಾಂಗ್ರೆಸ್‌ಗೆ: ಶಾಸಕ ವಿನಯ ಕುಲಕರ್ಣಿ

ಕ್ರೀಡಾ ಕೌಶಲ್ಯ ತರಬೇತಿಗೆ ಆದ್ಯತೆ ಕೊಡಿ: ಕ್ರೀಡಾ ಇಲಾಖೆ ಚರ್ಚೆ ವೇಳೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲಿಸಿ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ, ಈ ಭಾಗದ ಮಕ್ಕಳಲ್ಲಿ ಕ್ರೀಡಾ ಕೌಶಲ್ಯ ಹೆಚ್ಚಿಸಲು ಆದ್ಯತೆ ಕೊಡಬೇಕು. ಇಂಟರ್‌ ಸ್ಕೂಲ್‌, ಇಂಟರ್‌ ಕಾಲೇಜು ಕ್ರಿಡಾಕೂಟ ಆಯೋಜಿಸಬೇಕು. ಮಕ್ಕಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ತರಬೇತಿ ನೀಡಬೇಕಿದೆ. ಜಿಲ್ಲಾ ಕ್ರೀಡಾಂಗಣ ಸಮರ್ಪಕ ಅಭಿವೃದ್ಧಿಪಡಿಸಬೇಕು. ವಿವಿಧ ಕ್ರೀಡಾ ಅಸೋಸಿಯೇಷನ್‌ ಗಳೊಂದಿಗೆ ಮಾತನಾಡಿ, ಅವರ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆ ಮುಂದಾಗಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ ಅವರಿಗೆ ಸಚಿವರು ನಿರ್ದೇಶನ ನೀಡಿದರು. ಸಭೆಯಲ್ಲಿ ಜಿಪಂ ಸಿಇಒ ಭಂವಾರ ಸಿಂಗ್‌ ಮೀನಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ಪ್ರವೀಣ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.