ಎರಡನೇ ದಿನಕ್ಕೆ ಕಾಲಿರಿಸಿದ ಟೋಲ್‌ಗೇಟ್‌ ಧರಣಿ ಇನಾಯತ್‌ ಆಲಿ, ಅಭಯಚಂದ್ರ ಜೈನ್‌ ಸಹಿತ ಹಲವು ಮುಖಂಡರ ಬೆಂಬಲ

ಮಂಗಳೂರು (ಅ.30) : ಸುರತ್ಕಲ್‌ ಟೋಲ್‌ಗೇಟ್‌ ತೆರವುಗೊಳಿಸಲು ಆಗ್ರಹಿಸಿ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿಯ ಅಹೋರಾತ್ರಿ ಅನಿರ್ದಿಷ್ಟಾವಧಿ ಮುಷ್ಕರ 2ನೇ ದಿನಕ್ಕೆ ಕಾಲಿರಿಸಿದೆ. ವಿವಿಧ ಪಕ್ಷ, ಸಂಘಟನೆಗಳ ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ಘೋಷಿಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್‌ ಶುಕ್ರವಾರ ರಾತ್ರಿ ಚಾಪೆ, ಹೊದಿಕೆಯ ಸಮೇತ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಶನಿವಾರ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಇನಾಯತ್‌ ಆಲಿ ಧರಣಿ ಕುಳಿತು ಬೆಂಬಲ ಘೋಷಿಸಿದರು. 

Surathkal Toll Gate Issue: ಟೋಲ್ ಗೇಟ್ ಕಿತ್ತೆಸೆಯಲು ನಾಳೆ ನೇರ ಕಾರ್ಯಾಚರಣೆ!

ಧರಣಿಯ 2ನೇ ದಿನದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಹೋರಾಟ ಸಮಿತಿಯ ಸಹ ಸಂಚಾಲಕ ವೈ. ರಾಘವೇಂದ್ರ ರಾವ್‌, ಸುರತ್ಕಲ್‌ ಅಕ್ರಮ ಟೋಲ್‌ಗೇಟ್‌ ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಜನವಿರೋಧಿ ಆಡಳಿತದ ಸಂಕೇತ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರ ಒಕ್ಕೊರಲ ಆಗ್ರಹದ ಹೊರತಾಗಿಯೂ ಟೋಲ್‌ ಕೇಂದ್ರ ಮುಚ್ಚದಿರುವ ಹಿಂದೆ ಭ್ರಷ್ಟಾಚಾರ, ಕಮಿಷನ್‌, ಖಾಸಗಿ ಕಂಪೆನಿಗಳ ಹಿತಾಸಕ್ತಿಗಳು ಕೆಲಸ ಮಾಡುತ್ತಿದೆ. ಬಿಜೆಪಿ ಜನಪ್ರತಿನಿಧಿಗಳ ಬಣ್ಣ ಬಯಲಾಗಿದೆ ಎಂದು ಹೇಳಿದರು.

ಧರಣಿಗೆ ಬೆಂಬಲ ನೀಡಲು ಆಗಮಿಸಿದ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಮುಹಮ್ಮದ್‌ ನಲಪ್ಪಾಡ್‌ ಮಾತನಾಡಿ, ಅಕ್ರಮವಾಗಿ ಟೋಲ್‌ ಸುಲಿಗೆ ನಡೆಯುತ್ತಿರುವುದು 40 ಪರ್ಸೆಂಟ್‌ ಸರ್ಕಾರದ ನೀತಿಗೆ ಅನುಗುಣವಾಗಿಯೇ ಇದೆ. ಟೋಲ್‌ಗೇಟ್‌ ತೆರವು ಆಗುವವರೆಗೆ ಯುವ ಕಾಂಗ್ರೆಸ್‌ ಹೋರಾಟದ ಜೊತೆಗಿರಲಿದೆ ಎಂದು ಹೇಳಿದರು.

ಮಾಜಿ ಸಚಿವ ಅಭಯಚಂದ್ರ ಜೈನ್‌, ಹೋರಾಟ ಸಮಿತಿ ಸಂಚಾಲಕ ಮುನೀರ್‌ ಕಾಟಿಪಳ್ಳ, ದಲಿತ ನಾಯಕ ಎಂ. ದೇವದಾಸ್‌, ಮಾಜಿ ಉಪ ಮೇಯರ್‌ ಮೊಹಮ್ಮದ್‌ ಕುಂಜತ್ತಬೈಲ…, ಶಾಲೆಟ್‌ ಪಿಂಟೊ, ಭಾರತಿ ಬೋಳಾರ, ಜ್ಯೋತಿ ಮೆನನ್‌, ಪ್ರಮೀಳಾ ದೇವಾಡಿಗ, ಮಂಜುಳಾ ನಾಯಕ್‌, ವಿನಿತ್‌ ದೇವಾಡಿಗ, ರೇವಂತ್‌ ಕದ್ರಿ, ವಿವಿಧ ಸಂಘಟನೆಗಳ ಪ್ರಮುಖರಾದ ಬಿ.ಕೆ. ಇಮ್ತಿಯಾಜ…, ಸುಹೈಲ್‌ ಕಂದಕ್‌, ಸಂತೋಷ್‌ ಬಜಾಲ…, ನವೀನ್‌ ಕೊಂಚಾಡಿ, ಗಿರೀಶ್‌ ಆಳ್ವ, ಶೇಖಬ್ಬ ಕೋಟೆ, ಹಸೈನಾರ್‌ ಬಿ.ಸಿ. ರೋಡ್‌, ರಮೇಶ್‌ ಟಿ.ಎನ್‌, ಅಯಾಝ್‌ ಕೃಷ್ಣಾಪುರ, ರಾಜೇಶ್‌ ಪೂಜಾರಿ ಮತ್ತಿತರರು ಇದ್ದರು. ಕಾರವಾರ: ಟೋಲ್‌ಗೇಟ್ ಬಳಿ ಬೀಡು, ತಾಯಿಯ ಕೊಂದವರ ಮೇಲೆ ಶ್ವಾನದ ಸೇಡು!