Asianet Suvarna News Asianet Suvarna News

ಪೊಲೀಸ್‌ ಆಯ್ತು, ಈಗ ಸಾರಿಗೆ ನೌಕರರ ಸಂಬಳ ವಿಳಂಬ..!

ಸಂಸ್ಥೆಯ ನಿರ್ವಾಹಕ, ಚಾಲಕ ಮತ್ತಿತರರು ಸರ್ಕಾರಕ್ಕೆ ಈ ಬಗ್ಗೆ ಗುರುವಾರ ಮನವಿ ಮಾಡಿದ್ದು, ನಿಗದಿತ ಸಮಯಕ್ಕೆ ವೇತನ ಪಾವತಿ ಆಗದಿದ್ದರೆ ನೌಕರರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ. ಆದ್ದರಿಂದ ಪ್ರತಿ ತಿಂಗಳು ಒಂದನೇ ತಾರೀಖಿಗೆ ವೇತನ ಪಾವತಿಸುವಂತೆ ಆರ್ಥಿಕ ಇಲಾಖೆಗೆ ಸ್ಪಷ್ಟನಿರ್ದೇಶನ ನೀಡಬೇಕೆಂದು ಪತ್ರದಲ್ಲಿ ಕೋರಲಾಗಿದೆ. 

Delay in Salary of KKRTC Employees in Kalaburagi grg
Author
First Published Aug 11, 2023, 11:30 PM IST

ಯಾದಗಿರಿ(ಆ.11): ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ವೇತನ ಬಿಡುಗಡೆಗೆ ವಿಳಂಬದ ಬೆನ್ನಲ್ಲೇ ಈಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೂ ವೇತನ ವಿಳಂಬದ ಸಮಸ್ಯೆ ಎದುರಾಗಿದೆ.

ಸಾರಿಗೆ ನಿಗಮದ ನೌಕರರಿಗೆ ಪ್ರತಿ ತಿಂಗಳು 1ನೇ ತಾರೀಖು ವೇತನ ಪಾವತಿಯಾಗುತ್ತಿತ್ತು. ಆದರೆ, ಈಗ ಜುಲೈ ತಿಂಗಳ ವೇತನ ಆಗಸ್ಟ್‌ 10ನೇ ತಾರೀಖು ಬಂದರೂ ಪಾವತಿಯಾಗಿಲ್ಲ. ಅಲ್ಲದೆ, ಜೂ.11ರಿಂದ ಜೂ.30ರವರೆಗಿನ ಶಕ್ತಿ ಯೋಜನೆಯಡಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 47.80 ಕೋಟಿ ರು. ಮರುಪಾವತಿಗೆ ಸರ್ಕಾರಕ್ಕೆ ಕೋರಲಾಗಿತ್ತು. ಆದರೆ, ಸರ್ಕಾರದಿಂದ ಈವರೆಗೆ 37.33 ಕೋಟಿ ರು. ಪಾವತಿಸಲು ಆರ್ಥಿಕ ಇಲಾಖೆಯಿಂದ ಅಧಿಕೃತ ಆದೇಶ ಬಂದಿದ್ದರೂ, ಅದು ನಿಗಮಗಳಿಗೆ ಜಮೆಯಾಗಿಲ್ಲ ಎಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಕಲ್ಯಾಣ ಕರ್ನಾಟಕ ನಿಗಮದ ಕಲಬುರಗಿ ವಿಭಾಗದ ಯಾದಗಿರಿ ಜಿಲ್ಲಾ ಸಮಿತಿ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದೆ.

ಶಕ್ತಿ ಯೋಜನೆ ಎಫೆಕ್ಟ್: ಸಾರಿಗೆ ಸಿಬ್ಬಂದಿಗಿಲ್ಲ ವೇತನ ಗ್ಯಾರಂಟಿ, ಪಗಾರ ಸಿಗದೆ ಪರದಾಟ..!

ಸಂಸ್ಥೆಯ ನಿರ್ವಾಹಕ, ಚಾಲಕ ಮತ್ತಿತರರು ಸರ್ಕಾರಕ್ಕೆ ಈ ಬಗ್ಗೆ ಗುರುವಾರ ಮನವಿ ಮಾಡಿದ್ದು, ನಿಗದಿತ ಸಮಯಕ್ಕೆ ವೇತನ ಪಾವತಿ ಆಗದಿದ್ದರೆ ನೌಕರರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ. ಆದ್ದರಿಂದ ಪ್ರತಿ ತಿಂಗಳು ಒಂದನೇ ತಾರೀಖಿಗೆ ವೇತನ ಪಾವತಿಸುವಂತೆ ಆರ್ಥಿಕ ಇಲಾಖೆಗೆ ಸ್ಪಷ್ಟನಿರ್ದೇಶನ ನೀಡಬೇಕೆಂದು ಪತ್ರದಲ್ಲಿ ಕೋರಲಾಗಿದೆ. ಸಾರಿಗೆ ನಿಗಮಗಳು ಫೆಬ್ರವರಿ 2020ರಿಂದ ಪ್ರಯಾಣಿಕರ ಪ್ರಯಾಣ ದರ ಪರಿಷ್ಕರಿಸಿಲ್ಲ. ಆದರೆ, ಫೆಬ್ರವರಿ 2020ರಿಂದ ಈವರೆಗೆ ಇಂಧನ ದರದಲ್ಲಿ ಗಣನೀಯ ಹೆಚ್ಚಳ ಕಂಡಿದೆ. ಇದರಿಂದ ನೌಕರರಿಗೆ ಆರ್ಥಿಕ ಸೌಲಭ್ಯಗಳನ್ನು ನೀಡಲು ವಿಳಂಬ ಹಾಗೂ ಪರಿಶ್ರಮಕ್ಕೆ ತಕ್ಕ ವೇತನ ನೀಡುವಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಸಂಸ್ಥೆಯ ಹಿತದೃಷ್ಟಿಯಿಂದ ಪ್ರಯಾಣಿಕರ ಪ್ರಯಾಣದ ದರ ಪರಿಷ್ಕರಿಸಬೇ​ಕು. ತಮಿಳುನಾಡು ಮಾದರಿಯಲ್ಲಿ ಪ್ರಯಾಣದ ದರ ಏರಿಕೆ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ನೌಕರರು ಕೋರಿದ್ದಾರೆ.

ನೌಕರರ ಮಹಾಮಂಡಳಿ ಪ್ರಧಾನ ಕಾರ್ಯದರ್ಶಿ ಬಸವರಾಜ ಕಿಣ್ಣಿ, ರವೀಂದ್ರನಾಥರೆಡ್ಡಿ, ದೇವಿಂದ್ರಪ್ಪ ಮ್ಯಾಗೇರಿ, ಭೀಮಣ್ಣ ಹೊಸಮನಿ, ಬಸವರಾಜ್‌ ತಿಪ್ಪಾರೆಡ್ಡಿ, ಶರಣಗೌಡ, ಆನಂದ್‌, ನಿಂಗಪಪ, ಸೋಮುನಾಯಕ್‌, ಶರಣಪ್ಪ ಮುಂತಾದವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Follow Us:
Download App:
  • android
  • ios