ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯ ರಘುನಾಥಪುರ ಗ್ರಾಮದ ಸರ್ವೆ ನಂಬರ್‌ 18/4 ರಲ್ಲಿ ಕೆ.ಹುಚ್ಚಯ್ಯ ಬಿನ್‌ ಲೇಟ್‌ ಕಾಳಯ್ಯನವರಿಗೆ ಸೇರಿದ 11 ಗುಂಟೆ ಜಾಗವನ್ನು ಅವರ ಸಹೋದರ ಮೂಡಲಗಿರಿಯಪ್ಪ ಲೇಟ್‌ ಕಾಳಯ್ಯನವರ ಹೆಸರಿಗೆ ಮಾಡಿಸುವ ನಿಟ್ಟಿನಲ್ಲಿ ತಿಪ್ಪಸಂದ್ರ ಹೋಬಳಿಯ ಮಲ್ಲಸಂದ್ರ ವೃತ್ತದ ಗ್ರಾಮ ಲೆಕ್ಕಾಧಿಕಾರಿ ರಮೇಶ್‌ ಲಂಚ ಪಡೆದು ದಾಖಲಾತಿಗಳನ್ನೇ ನಕಲಿ ಸೃಷ್ಟಿ ಮಾಡಿ ಈಗ 11 ಗುಂಟೆ ಜಾಗವನ್ನು ಅವರ ಸಹೋದರನ ಹೆಸರಿಗೆ ಪರ​ಭಾರೆ ಮಾಡಿ​ದ್ದಾರೆ ಎಂದು ದೂರಿ​ದ ಐಯ್ಯಂಡಹಳ್ಳಿ ರಂಗಸ್ವಾಮಿ

ಮಾಗಡಿ(ಜು.20): ಆಸ್ತಿ ಲಪ​ಟಾ​ಯಿ​ಸುವ ನಿಟ್ಟಿನಲ್ಲಿ ತಾಲೂಕು ಕಚೇರಿಯಲ್ಲಿ ಲಂಚಾವತಾರ ತಾಂಡವವಾಡುತ್ತಿದ್ದು ಬದುಕಿರುವ ವ್ಯಕ್ತಿಯನ್ನೇ ಮರಣ ಹೊಂದಿ​ದ್ದಾ​ನೆಂದು ಪತ್ರ ಸೃಷ್ಟಿಸಿ ಅವರ ಹೆಸರಿನಲ್ಲಿದ್ದ ಜಮೀ​ನನನ್ನು ಸಹೋದರನಿಗೆ ಪೌತಿ ಖಾತೆ ಮಾಡಿ ಸಾಕಷ್ಟು ಅವಾಂತರ ಸೃಷ್ಟಿಸಿದ್ದಾರೆ ಎಂದು ಜೆಡಿಎಸ್‌ ಹಿರಿಯ ಮುಖಂಡ ಐಯ್ಯಂಡಹಳ್ಳಿ ರಂಗಸ್ವಾಮಿ ಆರೋಪಿಸಿದರು.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ತಾಲೂಕಿನ ತಿಪ್ಪಸಂದ್ರ ಹೋಬಳಿಯ ರಘುನಾಥಪುರ ಗ್ರಾಮದ ಸರ್ವೆ ನಂಬರ್‌ 18/4 ರಲ್ಲಿ ಕೆ.ಹುಚ್ಚಯ್ಯ ಬಿನ್‌ ಲೇಟ್‌ ಕಾಳಯ್ಯನವರಿಗೆ ಸೇರಿದ 11 ಗುಂಟೆ ಜಾಗವನ್ನು ಅವರ ಸಹೋದರ ಮೂಡಲಗಿರಿಯಪ್ಪ ಲೇಟ್‌ ಕಾಳಯ್ಯನವರ ಹೆಸರಿಗೆ ಮಾಡಿಸುವ ನಿಟ್ಟಿನಲ್ಲಿ ತಿಪ್ಪಸಂದ್ರ ಹೋಬಳಿಯ ಮಲ್ಲಸಂದ್ರ ವೃತ್ತದ ಗ್ರಾಮ ಲೆಕ್ಕಾಧಿಕಾರಿ ರಮೇಶ್‌ ಲಂಚ ಪಡೆದು ದಾಖಲಾತಿಗಳನ್ನೇ ನಕಲಿ ಸೃಷ್ಟಿಮಾಡಿ ಈಗ 11 ಗುಂಟೆ ಜಾಗವನ್ನು ಅವರ ಸಹೋದರನ ಹೆಸರಿಗೆ ಪರ​ಭಾರೆ ಮಾಡಿ​ದ್ದಾರೆ ಎಂದು ದೂರಿ​ದರು.

ಕೇಂದ್ರದ ದುಬಾರಿ ಟೋಲ್‌ಗೆ ಬೆಚ್ಚಿಬಿದ್ದ ರಾಜ್ಯ ಸಾರಿಗೆ ಸಂಸ್ಥೆ: ಟೋಲ್‌ ಕಟ್ಟಲಾಗದೇ ವಾಪಸ್‌ ಬಂದ ಕೆಎಸ್‌ಆರ್‌ಟಿಸಿ ಬಸ್‌

ಈಗ ಬದುಕಿರುವ ವ್ಯಕ್ತಿಯನ್ನೇ ಬದುಕಿಲ್ಲ ಎಂದು ಮರಣ ಪತ್ರ ಸೃಷ್ಟಿಮಾಡಿ ವಂಶವೃಕ್ಷದಲ್ಲಿ ಇಬ್ಬರೇ ಮಕ್ಕಳೆಂದು ತೋರಿಸಿ, ಮದುವೆಯಾಗಿಲ್ಲ ಎಂದು ವಂಶವೃಕ್ಷದಲ್ಲಿ ಬರೆಸಿ 11 ಗುಂಟೆ ಜಾಗವನ್ನು ಪೌತಿ ಖಾತೆ ಮಾಡಿದ್ದಾರೆ. ಹುಚ್ಚಯ್ಯ ಬದುಕಿದ್ದು ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಹುಚ್ಚಯ್ಯ ಸ್ವಂತವಾಗಿ ಸಂಪಾದಿಸಿರುವ 11 ಗುಂಟೆ ಜಾಗವನ್ನು ಅವರ ಹೆಂಡತಿ ಹೆಸರಿಗೆ ಬರಬೇಕು. ಅಣ್ಣನ ಹೆಸರಿಗೆ ಹೋಗಲು ಹೇಗೆ ಸಾಧ್ಯ? ಇಲ್ಲಿ ಅಧಿಕಾರಿಗಳ ಲಂಚಾವತಾರದಿಂದ ಬದುಕಿರುವ ವ್ಯಕ್ತಿ ಒಂದು ಪತ್ರದಲ್ಲಿ 6/7/1999ರಲ್ಲಿ ಮರಣ ಹೊಂದಿದ್ದಾರೆ ಎಂದು ಪತ್ರ ಕೊಟ್ಟಿದ್ದಾರೆ ಎಂದು ಆರೋ​ಪಿ​ಸಿ​ದ​ರು.

ನಕಲಿ ಮರಣ ಪತ್ರದಲ್ಲಿ 1/7/2009 ಮರಣ ಹೊಂದಿದ್ದಾರೆ ಎಂದು ತೋರಿಸಿದ್ದಾರೆ. ಮದುವೆಯಾಗಿದ್ದರೂ ಕೂಡ ವಂಶವೃಕ್ಷದಲ್ಲಿ ಹುಚ್ಚಯ್ಯ ಅವಿವಾಹಿತ ಎಂದು ತೋರಿಸಿದ್ದಾರೆ. ಮರಣ ಪತ್ರದಲ್ಲಿ ಹುಚ್ಚಪ್ಪ ಎಂದು ಬೇರೆ ದಾಖಲೆಯಲ್ಲಿ ಹುಚ್ಚಯ್ಯ ಎಂದು ನಮೂನೆಯಾಗಿದೆ. ಲಂಚ ಕೊಟ್ಟರೆ ಯಾರ ಖಾತೆ ಹೆಸರಿನಲ್ಲಿ ಇದ್ದರೂ ಕೂಡ ಇನ್ನೊಬ್ಬರ ಹೆಸರಿಗೆ ಸೇರಿಸುವಲ್ಲಿ ತಾಲೂಕು ಕಚೇರಿ ಹೆಸರುವಾಸಿಯಾಗಿದೆ.

ಉತ್ತಮ ಶಿಕ್ಷಣ, ಆರೋಗ್ಯದಿಂದ ದೇಶದ ಅಭಿವೃದ್ಧಿ: ಎಚ್‌.ಡಿ.ಕುಮಾರಸ್ವಾಮಿ

ಪೌತಿ ಖಾತೆ ಮಾಡಬೇಕು ಎಂದರೆ ಲಕ್ಷಗಟ್ಟಲೆ ಹಣ ಕೊಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಲೆಕ್ಕಾ​ಧಿಕಾರಿ ರಮೇಶ್‌ ಈಗಾಗಲೇ ಕನಕಪುರದಲ್ಲಿ ಅಮಾನತಾಗಿ ಮಾಗಡಿಗೆ ಬಂದಿ​ದ್ದಾರೆ. ಇವರ ಲಂಚಾವತಾರ ಸಾಕಷ್ಟುಕೇಳಿ ಬರುತ್ತಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾ​ಗಿದೆ. ಈ ಅಧಿಕಾರಿಯನ್ನು ಅಮಾನತು ಮಾಡಿ ಇವರ ಅವಧಿಯಲ್ಲಿ ಆಗಿರುವ ಪೌತಿ ಖಾತೆ ಸೇರಿದಂತೆ ಎಲ್ಲಾ ದಾಖಲೆಗಳಿಗೆ ಸರ್ಕಾರ ಕೂಡಲೇ ತನಿಖೆ ಮಾಡಿ ಅಮಾಯಕ ರೈತರನ್ನು ಉಳಿಸುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

ಕಂದಾಯ ಸಚಿವ ಕೃಷ್ಣಭೈರೇಗೌಡರು ಅಧಿಕಾರಿಗಳು ಮಾಡುತ್ತಿರುವ ಲಂಚಾವತಾರದ ಬಗ್ಗೆ ಹೆಚ್ಚಿನ ಗಮನ ಹರಿಸಿ ರೈತರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವ ಕೆಲಸ ಮಾಡಬೇಕು. ಇಲ್ಲವಾದರೆ ಇಂತಹ ನೂರಾರು ಪ್ರಕರಣಗಳನ್ನು ಇಟ್ಟುಕೊಂಡು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ರಂಗಸ್ವಾಮಿ ಎಚ್ಚರಿಕೆ ನೀಡಿ​ದ​ರು.