Asianet Suvarna News Asianet Suvarna News

ಬೆಂಗ್ಳೂರಲ್ಲಿ ಸತ್ತವಗೆ ನಾಗಮಂಗಲದಲ್ಲಿ ಮರಣ ಪತ್ರ..!

ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದ ವ್ಯಕ್ತಿಯನ್ನು ನಾಗಮಂಗಲದಲ್ಲಿ ಮೃತಪಟ್ಟಿದ್ದಾರೆ ಎಂದು ಸ್ಥಳ ಮಹಜರು ನಡೆಸಿ, ಅಂದಿನ ಪಟ್ಟಣ ಪಂಚಾಯ್ತಿಯ ಆರೋಗ್ಯ ಪರಿವೀಕ್ಷಕ ನೀಡಿದ್ದ ಸುಳ್ಳು ಮರಣ ಪ್ರಮಾಣ ಪತ್ರದ ಎರಡು ವರ್ಷಗಳ ಹಿಂದಿನ ಪ್ರಕರಣವೊಂದಕ್ಕೆ, ಮರುಜೀವ ಬಂದಿದೆ.

death certificate given in nagamangala to the person who died in bangalore
Author
Bangalore, First Published Jan 21, 2020, 7:45 AM IST

ಮಂಡ್ಯ(ಜ.21): ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದ ವ್ಯಕ್ತಿಯನ್ನು ನಾಗಮಂಗಲದಲ್ಲಿ ಮೃತಪಟ್ಟಿದ್ದಾರೆ ಎಂದು ಸ್ಥಳ ಮಹಜರು ನಡೆಸಿ, ಅಂದಿನ ಪಟ್ಟಣ ಪಂಚಾಯ್ತಿಯ ಆರೋಗ್ಯ ಪರಿವೀಕ್ಷಕ ನೀಡಿದ್ದ ಸುಳ್ಳು ಮರಣ ಪ್ರಮಾಣ ಪತ್ರದ ಎರಡು ವರ್ಷಗಳ ಹಿಂದಿನ ಪ್ರಕರಣವೊಂದಕ್ಕೆ, ಮರುಜೀವ ಬಂದಿದೆ.

ಪುರಸಭೆ ಸದಸ್ಯರೊಬ್ಬರು ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮಕ್ಕೆ ಅಗ್ರಹಿಸಿ ಜಿಲ್ಲಾಧಿಕಾರಿಗಳ ಮೊರೆ ಹೋಗಿರುವ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಪುರಸಭೆಯ ಕಿರಿಯ ಆರೋಗ್ಯ ಪರಿವೀಕ್ಷಕ ನಿಂಗೇಗೌಡ ಎಂಬುವರೇ ಕಳೆದೆರಡು ವರ್ಷಗಳ ಹಿಂದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಪಟ್ಟಣದ ನಿವಾಸಿ ಎಂ.ಜಗದೀಶ ಎಂಬ ಮೃತ ವ್ಯಕ್ತಿಯ ಸುಳ್ಳು ಮರಣ ಪ್ರಮಾಣ ಪತ್ರ ನೀಡಿರುವ ಅಧಿಕಾರಿ.

ಗೊರೂರು ಅಣೆಕಟ್ಟೆ ಮುಳುಗಡೆ : ಮುಗಿಯದ ಸ್ಥಳ ವಿವಾದ ಕಗ್ಗಂಟು

ಎರಡು ವರ್ಷಗಳ ಹಿಂದಿನ ಈ ಪ್ರಕರಣದ ಕಡತಕ್ಕೆ ಇಲ್ಲಿನ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ವಿಜಯಕುಮಾರ್‌ ಮರುಜೀವ ನೀಡುವ ಮೂಲಕ ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಲೇಬೇಕೆಂದು ಟೊಂಕ ಕಟ್ಟಿನಿಂತಿದ್ದಾರೆ.

ಪ್ರಕರಣದ ವಿವರ:

ನಾಗಮಂಗಲ ಪಟ್ಟಣದ ಹಳೇ ಅಂಚೆಕಚೇರಿ ರಸ್ತೆಯ ನಿವಾಸಿ ಮಹಾಲಿಂಗಸ್ವಾಮಿ ಪುತ್ರ ಎಂ.ಜಗದೀಶ್‌(50) ಎಂಬುವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 2017ರ ಮೇ 25ರಂದು ಮೃತಪಟ್ಟಿದ್ದರು. ಈ ಸಂಬಂಧ ದೊಡ್ಡಬಳ್ಳಾಪುರ ಪೊಲೀಸ್‌ ಠಾಣೆಯಲ್ಲಿ (ಯುಡಿಆರ್‌ ಸಂಖ್ಯೆ 43/17) ದೂರು ದಾಖಲಾಗಿತ್ತಲ್ಲದೆ, ಜಗದೀಶ… ಮೃತದೇಹವನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕೆ.ವಿ.ಸತೀಶ್‌ ಮರಣೋತ್ತರ ಪರೀಕ್ಷೆಯನ್ನೂ ಸಹ ನಡೆಸಿದ್ದರು.

ನಕಲಿ ಬೀಜ ಕೊಟ್ಟು ಟೋಪಿ ಹಾಕಿದ ಅಧಿಕಾರಿಗಳು; ರೈತರ ಗೋಳು ಕೇಳೋರ್ಯಾರು?

ಆದರೆ, ಇದೇ ವ್ಯಕ್ತಿ ನಾಗಮಂಗಲ ಪಟ್ಟಣದ ಅವರ ಸ್ವಗೃಹದಲ್ಲಿ 2017ರ ಆ.23ರಂದು ನಿಧನ ಹೊಂದಿದ್ದಾರೆಂದು ಸ್ಥಳ ಮಹಜರು ನಡೆಸಿದ ಅಂದಿನ ಪಟ್ಟಣ ಪಂಚಾಯ್ತಿ ಕಿರಿಯ ಆರೋಗ್ಯ ನಿರೀಕ್ಷಕ ನಿಂಗೇಗೌಡ ಸುಳ್ಳು ಮರಣ ಪ್ರಮಾಣ ನೀಡಿದ್ದಾರೆ. ಯಾವ ಕಾರಣಕ್ಕೆ ತಮ್ಮ ಜವಾಬ್ದಾರಿಯನ್ನು ಮರೆತು ಈ ರೀತಿಯ ಕರ್ತವ್ಯ ಲೋಪವೆಸಗಿದ್ದಾರೆಂಬುದು ಮಾತ್ರ ತಿಳಿಯದಾಗಿದೆ.

ಪುರಸಭೆ ಸದಸ್ಯರ ಆರೋಪವೇನು?:

ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಪುರಸಭೆಯಲ್ಲಿ ಕಿರಿಯ ಆರೋಗ್ಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಿಂಗೇಗೌಡರು ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ಲಂಚ ಪಡೆಯುತ್ತಾರೆ ಎಂಬ ಆರೋಪವಿದೆ. ಅಲ್ಲದೇ ಕಚೇರಿಗೆ ಬರುವ ಸಾರ್ವಜನಿಕರು ಮತ್ತು ಪುರಸಭೆಯ ಜನಪ್ರತಿನಿಧಿಗಳನ್ನು ಏಕವಚನದಲ್ಲಿ ಮಾತನಾಡಿಸುವ ಪ್ರವೃತ್ತಿ ಮೈಗೂಡಿಸಿಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ದೂರು:

ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಪಟ್ಟಣದ ನಿವಾಸಿ ಎಂ.ಜಗದೀಶ್‌ ಎಂಬುವರ ಸುಳ್ಳು ಮರಣ ಪತ್ರ ನೀಡಿರುವ ಪುರಸಭೆಯ ಕಿರಿಯ ಆರೋಗ್ಯ ಪರಿವೀಕ್ಷಕ ನಿಂಗೇಗೌಡರ ಅಕ್ರಮಗಳ ಕುರಿತು ಪುರಸಭೆ ಸದಸ್ಯ ವಿಜಯಕುಮಾರ್‌, ಡಿ.10ರಂದು ಜಿಲ್ಲಾಧಿಕಾರಿ ಮತ್ತು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಮಂಡ್ಯದಲ್ಲಿ ಮತ್ತೆ ಒಂದಾದ ಜೋಡೆತ್ತು; ಗೋಮಾತೆ ಸೇವೆಗೆ ಮುಂದಾದ ದರ್ಶನ್, ಯಶ್

ಆರೋಗ್ಯ ಪರಿವೀಕ್ಷಕ ನಿಂಗೇಗೌಡರು ಸಾರ್ವಜನಿಕರ ಕೆಲಸ ಕಾರ್ಯಕ್ಕೆ ಲಂಚ ಪಡೆದುಕೊಳ್ಳುತ್ತಾರೆ. ಈ ಬಗ್ಗೆ ಶಾಸಕ ಸುರೇಶ್‌ಗೌಡರಿಗೂ ದೂರು ನೀಡಲಾಗಿದೆ. ಅಧಿಕಾರಿ ನಿಂಗೇಗೌಡರ ಮೇಲೆ ಮೇಲೆ ಸಾಕಷ್ಟುಆರೋಪಗಳಿದ್ದರೂ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗಮಂಗಲ ಪುರಸಭಾ ಸದಸ್ಯ ವಿಜಯಕುಮಾರ್ ಹೇಳಿದ್ದಾರೆ.

ಅಧಿಕಾರಿ ನಿಂಗೇಗೌಡ ಹೇಳೋದೇನು?

ಪುರಸಭೆ ಸದಸ್ಯ ವಿಜಯಕುಮಾರ ನನ್ನ ಮೇಲೆ ಮಾಡಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಪಟ್ಟಣದ ನಿವಾಸಿ ಎಂ.ಜಗದೀಶ್‌ ಎಂಬುವರು ಹಳೆ ಅಂಚೆಕಚೇರಿ ರಸ್ತೆಯ ಮನೆಯಲ್ಲಿ ಮೃತಪಟ್ಟಿದ್ದಾರೆಂದು ಅವರ ಕುಟುಂಬಸ್ಥರು ಮರಣ ಪ್ರಮಾಣ ಪತ್ರ ಕೋರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಸ್ಥಳ ಮಹಜರು ನಡೆಸಲು ಹೋದ ಸಂದರ್ಭದಲ್ಲಿ ಆ ವಾರ್ಡ್‌ನ ಸದಸ್ಯರೂ ಸೇರಿದಂತೆ ಸ್ಥಳೀಯ ಸಾರ್ವಜನಿಕರು ಜಗದೀಶ್‌ ಮನೆಯಲ್ಲಿಯೇ ಮೃತಪಟ್ಟಿರುವುದಾಗಿ ಹೇಳಿಕೆ ನೀಡಿ ಮಹಜರ್‌ ಪ್ರತಿಗೆ ಸಹಿ ಹಾಕಿದ್ದರು. ಆ ಅವಧಿಯಲ್ಲಿ ವಿಜಯಕುರ್ಮಾ ಅವರೇ ಪುರಸಭೆಯ ಅಧ್ಯಕ್ಷರಾಗಿದ್ದರು. ಅವರ ಗಮನಕ್ಕೆ ತಂದು ಮರಣ ಪ್ರಮಾಣಪತ್ರ ನೀಡಲಾಗಿತ್ತು. ಆದರೆ ಆ ವ್ಯಕ್ತಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ವಿಚಾರ ನನಗೆ ತಿಳಿದಿರಲಿಲ್ಲ. ಯಾವ ಉದ್ದೇಶದಿಂದ ನನ್ನದಲ್ಲದ ತಪ್ಪಿಗೆ ವಿಜಯಕುಮಾರ್‌ ಈ ಆರೋಪ ಮಾಡುತ್ತಿದ್ದಾರೆಂಬುದು ತಿಳಿಯುತ್ತಿಲ್ಲ ಎಂದು ನಾಗಮಂಗಲ ಪುರಸಭೆಯ ಕಿರಿಯ ಆರೋಗ್ಯ ಪರಿವೀಕ್ಷಕ ನಿಂಗೇಗೌಡರು ಹೇಳುತ್ತಾರೆ.

Follow Us:
Download App:
  • android
  • ios