Asianet Suvarna News Asianet Suvarna News

ಚಲಿಸುವ ಬಸ್ಸಿನಲ್ಲಿ ವಾಂತಿ ಮಾಡೋ ವೇಳೆ ಅಪಘಾತ: ಮಹಿಳೆ ಸಾವು

* ಡೋಲಿ ಮೂಲಕ ಶವ ತೆಗೆದುಕೊಂಡ ಕುಟುಂಬಸ್ಥರು
* ಬೇಜವಾಬ್ದಾರಿತನ ಮೆರೆದ ಆಸ್ಪತ್ರೆ ಸಿಬ್ಬಂದಿ
* ವಾಂತಿ ಮಾಡಲು ಹೋಗಿ ಬಸ್‌ನಿಂದ ಆಯತಪ್ಪಿ ಬಿದ್ದು ಮಹಿಳೆ ಸಾವು 
 

Dead Body Transport on Doli at Chamarajanagar grg
Author
Bengaluru, First Published Aug 6, 2021, 11:26 AM IST

ಚಾಮರಾಜನಗರ(ಆ.06): ಕೆಎಸ್‌ಆರ್‌ಟಿಸಿ ಬಸ್‌ ಬಾಗಿಲು ಬಳಿ ನಿಂತು ವಾಂತಿ ಮಾಡಲು ಹೋದ ವೇಳೆ ಆಯತಪ್ಪಿ ಬಿದ್ದು ಮಹಿಳೆಯೊಬ್ಬಳು ಸಾವನ್ನಪ್ಪಿದ ಘಟನೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು(ಶುಕ್ರವಾರ) ನಡೆದಿದೆ. ಬೆಟ್ಟದ ಹಳೆಯೂರು ಗ್ರಾಮದ ನಿವಾಸಿ ಕುಳ್ಳಮಾದಿ (50) ಮೃತಪಟ್ಟ ಮಹಿಳೆಯಾಗಿದ್ದಾಳೆ. 

ಮಹದೇಶ್ವರ ಬೆಟ್ಟದಿಂದ ಕುಳ್ಳಮಾದಿ ಸಂಬಂಧಿಕರ ಮನೆಯಿಂದ ಬಸ್ ಮೂಲಕ ಹಳೆಯೂರಿನತ್ತ ಹೊರಟಿದ್ದ ಕುಳ್ಳಮಾದಿ ಅವರಿಗೆ ವಾಂತಿ ಬರುವಂತಾಗಿದೆ. ತಕ್ಷಣ ಬಸ್ ಕಂಡ್ಟಕರ್ ಬಾಗಿಲು ಬಳಿ ಹೋಗಿ ವಾಂತಿ ಮಾಡುವಂತೆ ತಿಳಿಸಿದ್ದರು. ಅದರಂತೆ ಕುಳ್ಳಮಾದಿ ವಾಂತಿ ಮಾಡಲು ಹೋಗಿದ್ದಳು. ಈ ವೇಳೆ ಬೆಟ್ಟದ ಶನೇಶ್ವರಸ್ವಾಮಿ ದೇವಸ್ಥಾನದ ತಿರುವಿನಲ್ಲಿ ಬಸ್‌ನಿಂದ ಕೆಳಗೆ ಬಿದ್ದಿದ್ದಾಳೆ. ತಲೆಗೆ ತೀವ್ರ ಪೆಟ್ಟಾದ ಪರಿಣಾಮ ಕುಳ್ಳಮಾದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. 

ಆರೋಗ್ಯ ಕೈ ಕೊಟ್ರೆ ಈ ಭಾಗದ ಜನರ ಪಾಡು ಇದೆಂಥಾ ಶೋಚನೀಯ!

ಮರಣೋತ್ತ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಮೃತದೇಹವನ್ನ ಹಸ್ತಾಂತರಿಸಲಾಗಿತ್ತು. ಅದರೆ, ಶವ ತೆಗೆದುಕೊಂಡು ಹೋಗಲು ಆಂಬ್ಯುಲೆನ್ಸ್‌ ಬಾರದ ಕಾರಣ  ಡೋಲಿ ಮೂಲಕ ಶವ ತೆಗೆದುಕೊಂಡು ಹೋಗಿದ್ದಾರೆ ಕುಟುಂಬಸ್ಥರು.

ನಡು ರಾತ್ರಿ ಕಾಡಿನ ರಸ್ತೆಯಲ್ಲೇ ಶವ ತೆಗೆದುಕೊಂಡು ಹೋಗಿದ್ದಾರೆ ಗ್ರಾಮಸ್ಥರು. ಸುಮಾರು 8 ಕಿ.ಮೀ ಡೋಲಿ ಮೂಲಕ ಶವ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ. ಮಲೆಮಹದೇಶ್ವರ ಬೆಟ್ಟದ ಪ್ರಾಥಮಿಕ‌ ಆರೋಗ್ಯ ಕೇಂದ್ರದಲ್ಲಿ ಆಂಬ್ಯುಲೆನ್ಸ್ ಇದ್ದರೂ ಸೇವೆ ಲಭ್ಯವಿಲ್ಲವೆಂದು ಹೇಳುವ ಮೂಲಕ ಬೇಜವಾಬ್ದಾರಿತನ ಮೆರೆದಿದ್ದಾರೆ ಸಿಬ್ಬಂದಿ.
 

Follow Us:
Download App:
  • android
  • ios