* ಕಾಂಗ್ರೆಸ್‌ ನಾಯಕರ ಸಿಎಂ ಕನಸು ತಿರುಕನ ಕನಸಿನಂತಾಗಿದೆ* ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ* ಮುಖ್ಯಮಂತ್ರಿ ಬದಲಾವಣೆ ಅಜೆಂಡಾ ಪಕ್ಷದ ಹೈಕಮಾಂಡ್‌ ಮುಂದೆಯೂ ಇಲ್ಲ

ಬೆಳಗಾವಿ(ಜೂ.23): ಕಾಂಗ್ರೆಸ್‌ ನಾಯಕರ ಮುಖ್ಯಮಂತ್ರಿ ಕನಸು ತಿರುಕನ ಕನಸಿನಂತಾಗಿದೆ ಎಂದು ಡಿಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಇನ್ನು ಇವರೆಲ್ಲರೂ ಗೆದ್ದು ಬರಬೇಕಲ್ಲ. ಗೆದ್ದು ಬಂದು ಒಂದಾಗಬೇಕಲ್ಲ. ಕುಸ್ತಿ ಅಖಾಡದಲ್ಲಿ ಇದ್ದಾರೆ. ಒಬ್ಬನ ಚಡ್ಡಿ ಒಬ್ಬನ ಕೈಯಲ್ಲಿವೆ. ಯಾವನ ಚಡ್ಡಿ ಕಸಿದುಕೊಂಡು ಯಾರನ್ನು ಬೆತ್ತಲೆ ಮಾಡುತ್ತಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಮತ್ತೆ ಮುಂಬೈ ಅಡ್ಡಕ್ಕೆ ಜಾರಕಿಹೊಳಿ, ರಾಜ್ಯ ರಾಜಕಾರಣದಲ್ಲಿ ಹಲ್ ಚಲ್ ಎಬ್ಬಿಸಿದ ಸಾಹುಕಾರ

ರಾಜ್ಯದಲ್ಲಿ ಕಾಂಗ್ರೆಸ್‌ ಸ್ಥಿತಿ ಇನ್ನಷ್ಟು ಹೀನಾಯವಾಗಲಿದೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಮಲ್ಲಿಕಾರ್ಜುನ ಖರ್ಗೆ- ಪರಮೇಶ್ವರ ಸೇರಿ ಮೂರು ಪ್ರಬಲ ಗುಂಪುಗಳಿವೆ. ಇದರ ನಡುವೆ ಶಾಮನೂರು ಶಿವಶಂಕರಪ್ಪ ಅವರು ನನಗೂ 91 ವಯಸ್ಸಾಗಿದೆ. ನಾನು ಏಕೆ ಮುಖ್ಯಮಂತ್ರಿಯಾಗಬಾರದು ಎನ್ನುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ಸಿಗರದ್ದು ಮುಖ್ಯಮಂತ್ರಿ ಹುದ್ದೆ ಎಂಬುದು ತಿರುಕನ ಕನಸಾಗಿದ್ದು, ಅದು ನನಸಾಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. 
ಗೋಕಾಕ ಶಾಸಕ ರಮೇಶ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ. ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ರಮೇಶ ನನ್ನ ಸಂಪರ್ಕವನ್ನೂ ಮಾಡಿಲ್ಲ ಎಂದು ತಿಳಿಸಿದ್ದಾರೆ. 

ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಮುಖ್ಯಮಂತ್ರಿ ಬದಲಾವಣೆ ಅಜೆಂಡಾ ಪಕ್ಷದ ಹೈಕಮಾಂಡ್‌ ಮುಂದೆಯೂ ಇಲ್ಲ. ಯಡಿಯೂರಪ್ಪನವರೇ ಸಿಎಂ ಆಗಿ ಪೂರ್ಣಾವಧಿ ಮುಂದುವರಿಸುವರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.