ಮನೆ ಬಿಟ್ಟು ಯಾರೇ ಹೊರಗೆ ಬಂದರೂ ಜೀವ ಕೈಯಲ್ಲಿ ಹಿಡಿದುಕೊಂಡು ಬನ್ನಿ. ಅಂತಹವರಿಗೆ ಕೇಸ್‌ ಹಾಕುವುದಷ್ಟೇ ಅಲ್ಲ, ಜೈಲ್‌ಗೆ ಹಾಕುತ್ತೇವೆ ಎಂದು ದಾವಣಗೆರೆಯಲ್ಲಿ ಡಿಸಿ, ಎಸ್ಪಿ ಎಚ್ಚರಿಕೆ ನೀಡಿದ್ದಾರೆ. 

ದಾವಣಗೆರೆ(ಏ.30): ಮೈಯಲ್ಲಾ ಕಣ್ಣಾಗಿಸಿಕೊಂಡು ತಿಂಗಳಾನುಗಟ್ಟಲೇ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಶ್ರಮಿಸಿದರೂ ಹೊಸದಾಗಿ ಮತ್ತೊಂದು ಪ್ರಕರಣ ಪತ್ತೆಯಾದ ಇಲ್ಲಿನ ಭಾಷಾ ನಗರಕ್ಕೆ ಬುಧವಾರ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಟಹನುಮಂತರಾಯ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

Add Asianetnews Kannada as a Preferred SourcegooglePreferred

ಬಾಷಾ ನಗರದ ಆರೋಗ್ಯ ಕೇಂದ್ರದ ಶುಶ್ರೂಷಕಿಯಲ್ಲಿ ಸೋಂಕು ದೃಢಪಟ್ಟಹಿನ್ನೆಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಮುಸ್ಲಿಂ ಸಮಾಜದ ಹಿರಿಯರು, ಮುಖಂಡರೊಂದಿಗೆ ಚರ್ಚಿಸಿದರು.

ಗಣಿ, ಕಲ್ಲು, ಮರಳುಗಾರಿಕೆ, ಸಾಗಾಣಿಕೆಗೆ ಅನುಮತಿ

ಇದೇ ವೇಳೆ ಮಾತನಾಡಿದ ಮುಸ್ಲಿಂ ಮುಖಂಡರು, ರಂಜಾನ್‌ ಹಿನ್ನೆಲೆಯಲ್ಲಿ ಜನರು ಬಟ್ಟೆಇತರೆ ವಸ್ತುಗಳ ಖರೀದಿಗೆ ಬರುತ್ತಾರೆ. ಕೊರೋನಾ ವೈರಸ್‌ ಹಾವಳಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಇಂತಹದ್ದಕ್ಕೆಲ್ಲಾ ಅವಕಾಶ ನೀಡಬಾರದು. ಅಂಗಡಿ ಮುಗ್ಗಟ್ಟುಗಳನ್ನು ತೆರೆಯಲು ವಕಾಶ ನೀಡಬಾರದು. ಲಾಕ್‌ಡೌನ್‌, ಸೀಲ್‌ಡೌನ್‌ಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.

ಎಸ್ಪಿ ಹನುಮಂತರಾಯ ಮಾತನಾಡಿ, ಅಂಗಡಿಗಳನ್ನು ತೆರೆಯುವುದಕ್ಕೆ ಅವಕಾಶ ನೀಡುವುದಿರಲಿ, ಮನೆಗಳಿಂದಲೇ ಯಾರೂ ಹೊರಗೆ ಬರಬಾರದು. ಹಾಗೇನಾದರೂ ಯಾರೇ ಹೊರಗೆ ಬಂದರೂ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಂತೂ ನಿಶ್ಚಿತ. ಸಮಾಜದ ಮುಖಂಡರಾದ ನೀವುಗಳು ಒಗ್ಗಟ್ಟಿನಿಂದ ಈ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಿ ಎಂದು ಕಿವಿಮಾತು ಹೇಳಿದರು.

ಲಾಕ್‌ಡೌನ್ ಉಲ್ಲಂಘಿಸಿದ್ರೆ ಹೊಡಿಯಲ್ಲ, ಬಡಿಯಲ್ಲ..! ಪೊಲೀಸರ ಹೊಸ ಐಡಿಯಾ

ಬಾಷಾ ನಗರ ಪ್ರದೇಶದಲ್ಲಿ ಕೊರೋನಾ ಕೇಸ್‌ ಪತ್ತೆಯಾಗಿದ್ದು, ಬಾಷಾ ನಗರ, ಆಜಾದ್‌ ನಗರ, ಅಹಮ್ಮದ್‌ ನಗರ, ಮಿಲ್ಲತ್‌ ಕಾಲನಿ ಸೇರಿದಂತೆ ಸುತ್ತಮುತ್ತ ಲಾಕ್‌ಡೌನ್‌ ಮಾಡುವುದಲ್ಲದೇ ಸೀಲ್‌ ಡೌನ್‌ ಮಾಡುತ್ತೇವೆ. ಮನೆ ಬಿಟ್ಟು ಯಾರೇ ಹೊರಗೆ ಬಂದರೂ ಜೀವ ಕೈಯಲ್ಲಿ ಹಿಡಿದುಕೊಂಡು ಬನ್ನಿ. ಅಂತಹವರಿಗೆ ಕೇಸ್‌ ಹಾಕುವುದಷ್ಟೇ ಅಲ್ಲ, ಜೈಲ್‌ಗೆ ಹಾಕುತ್ತೇವೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು. ಮುಸ್ಲಿಂ ಸಮಾಜದ ಮುಖಂಡ ಕೋಳಿ ಇಬ್ರಾಹಿಂ ಸಾಬ್‌ ಇತರರು ಇದ್ದರು.